ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಹಿತ ೧4 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದ ತಮಿಳುನಾಡಿನ ಕೂನೂರಿನ ನಂಜಪ್ಪ ಸದಿರಂ ಹಳ್ಳಿಯನ್ನು ಭಾರತೀಯ ಸೇನೆ ದತ್ತು ಪಡೆದಿದೆ. ಹೆಲಿಕಾಪ್ಟರ್ ದುರಂತದ ವೇಳೆ ಇಲ್ಲಿನ ಗ್ರಾಮಸ್ಥರು ಸಲ್ಲಿಸಿರುವ ಸೇವೆಗೆ ಈ ಮೂಲಕ ಸೇನೆ ಧನ್ಯವಾದ ಸಲ್ಲಿಸಿದೆ.
ಅಪಘಾತ ಕಂಡಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ ಇಬ್ಬರು ಗ್ರಾಮಸ್ಥರಿಗೆ ಸೇನೆ 5,000 ರೂ ನಗದು ಬಹುಮಾನ ನೀಡಿತು. ಜತೆಗೆ ಸ್ಥಳೀಯರಿಗೆ ಬ್ಲಾಂಕೆಟ್, ಪಡಿತರ ಸಾಮಗ್ರಿಗಳು, ಸೋಲಾರು ತುರ್ತು ದೀಪಗಳನ್ನು ವಿತರಿಸಲಾಯಿತು.
ಈ ಕುರಿತು ಮಾಹಿತಿ ನೀಡಿದ ಜನರಲ್ ಆಫೀಸರ್ ಕಮಾಂಡಿಂಗ್ ಕೇಂದ್ರ ಕಚೇರಿ ದಕ್ಷಿಣ ಭಾರತದ ಲೆಫ್ಟಿನೆಂಟ್ ಜನರಲ್ ಎ ಅರುಣ್, ಹೆಲಿಕಾಪ್ಟರ್ ದುರಂತ ನಡೆದ ಸಂದರ್ಭದಲ್ಲಿ ಗ್ರಾಮಸ್ಥರು ಮಾಡಿರುವ ಸೇವೆ ಅಮೋಘವಾದದ್ದು. ಪ್ರಪಾತದಲ್ಲಿ ಸಿಲುಕಿದ್ದ ನಮ್ಮ ಯೋಧರನ್ನು ರಕ್ಷಿಸುವ ಕಾರ್ಯದಲ್ಲಿ ಅವರು ಸಲ್ಲಿಸಿರುವ ಸೇವೆ, ನಡೆಸಿದ ಕಾರ್ಯಾಚರಣೆಯನ್ನು ಮರೆಯಲು ಸಾಧ್ಯವಿಲ್ಲ. ಗ್ರಾಮಸ್ಥರಿಗೆ ಯಾವ ರೀತಿಯ ಧನ್ಯವಾದ ಸಲ್ಲಿಸಿದರೂ ಕಡಿಮೆಯೇ. ಈ ಹಿನ್ನೆಲೆಯಲ್ಲಿ ಅವರ ಉಪಕಾರವನ್ನು ಸ್ಮರಿಸುವುದಕ್ಕಾಗಿ ಗ್ರಾಮವನ್ನು ದತ್ತು ಪಡೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಂಜಪ್ಪ ಸದಿರಂ ಹಳ್ಳಿಗೆ ಭೇಟಿ ನೀಡಿದ ಅವರು ದತ್ತು ಕುರಿತು ಈ ಘೋಷಣೆ ಮಾಡಿದ್ದಾರೆ. ಸುತ್ತಲೂ ಹೊತ್ತಿ ಉರಿಯುತ್ತಿದ್ದ ಬೆಂಕಿಯ ನಡುವೆ ಒಳಗಿದ್ದವರನ್ನು ಹೊರಕ್ಕೆಳೆಯಲು ಸಹಾಯ ಮಾಡಿದ್ದರು. ಇಂಥ ಸೇವೆ ಸಲ್ಲಿಸಿರುವ ಗ್ರಾಮಸ್ಥರು ದೇವರು ಎಂದು ಕರೆದಿದ್ದಾರೆ.
ಮುಂದಿನ ದಿನಗಳಲ್ಲಿ ಸೇನೆಯಿಂದ ಗ್ರಾಮಸ್ಥರಿಗೆ ಕಾರ್ಯಕ್ರಮಗಳು ಹಾಗೂ ಸಮಾರಂಭಗಳನ್ನು ನಡೆಸಲು ಸೂಕ್ತವಾಗುವ ಶೆಡ್ ಒಂದನ್ನು ನಿರ್ಮಿಸಿ ಕೊಡಲಾಗುವುದು. ವೈದ್ಯಕೀಯ ಶಿಬಿರಗಳನ್ನು ನಡೆಸಲು ವೈದ್ಯರು ಮತ್ತು ದಾದಿಯರನ್ನು ಹಳ್ಳಿಗೆ ಕಳುಹಿಸಲಾಗುವುದು ಎಂದು ಲೆಫ್ಟಿನೆಂಟ್ ಜನರಲ್ ಅರುಣ್ ತಿಳಿಸಿದರು.
ಹೆಲಿಕಾಪ್ಟರ್ ಪತನದಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸಹಿತ ೧3 ಮಂದಿ ಮೊನ್ನೆ ಮೃತಪಟ್ಟಿದ್ದರು. ಇಂದು ಆಸ್ಪತ್ರೆಯಲ್ಲಿ ಹಲವು ದಿನಗಳ ಹೋರಾಟದ ನಂತರ ಚಿಕಿತ್ಸೆ ಫಲಿಸದೇ ಕಮಾಂಡರ್ ವರುಣ್ ಸಿಂಗ್ ಕೂಡ ಮೃತಪಟ್ಟಿದ್ದಾರೆ.
Indian Army adopts Sadiram village
Discussion about this post