ಬೆಂಗಳೂರು: : ಉಪಚುನಾವಣೆಗಳಲ್ಲಿ ಸೋತಿದ್ದಕ್ಕೆ ಬುದ್ದಿ ಕಲಿತು ಡಿಸೇಲ್ ಮತ್ತು ಪೆಟ್ರೋಲ್ ದರಗಳನ್ನು ಇಳಿಸಿರುವ ಬಿಜೆಪಿ ಸರಕಾರ, ಮುಂಬರುವ ಉತ್ತರಪ್ರದೇಶ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರೆ ಕಳೆದೊಂದು ವರ್ಷದಿಂದ ಸತತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ನ್ಯಾಯ ನೀಡುವ ಮನಸ್ಸು ಮಾಡಲಿದೆ ಎಂದು ಕೆಪಿಸಿಸಿ ವಕ್ತಾರ ಕೆಂಗಲ್ ಶ್ರೀಪಾದ ರೇಣು ಹೇಳಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಇತ್ತೀಚಿನ ಉಪಚುನಾವಣೆಗಳಲ್ಲಿ ಬಿಜೆಪಿಗೆ ಬುದ್ದಿಕಲಿಸುವ ಮೂಲಕ ಪೆಟ್ರೋಲ್ ಮತ್ತು ಡಿಸೇಲ್ ತೆರಿಗೆಗಳನ್ನು ಇಳಿಸುವಂತೆ ಮಾಡಿರುವ ಮತದಾರರು ಅಭಿನಂದಾರ್ಹರು. ಮತದಾರರ ಶಕ್ತಿ ಏನು ಎನ್ನುವುದನ್ನ ತೋರಿಸುವಂತ ಕಾರ್ಯವನ್ನು ಮಾಡಿದ್ದಾರೆ. ಏರುಗತಿಯಲ್ಲಿದ್ದ ದರಗಳನ್ನು ಏಕಾಏಕಿ ಇಳಿಸುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಇಂತಹ ಕಾರ್ಯ ಮಾಡಿರುವ ಮತದಾರರಿಗೆ ಧನ್ಯವಾದಗಳು ಎಂದು ಶ್ರೀಪಾದ ರೇಣು ತಿಳಿಸಿದರು.
ಚುನಾವಣೆಗಳಲ್ಲಿ ಸೋಲಿಸುವುದರಿಂದ ಮಾತ್ರ ಬಿಜೆಪಿಗೆ ಬುದ್ದಿ ಕಲಿಸಿ ಅಚ್ಚೇದಿನ್ ಪಡೆಯಲು ಸಾಧ್ಯ. ದೇಶದಲ್ಲಿ ಇತ್ತೀಚೆಗೆ ನಡೆದಂತಹ ಉಪಚುನಾವಣೆಗಳಲ್ಲಿ ದೇಶದ ಜನರು ಬಿಜೆಪಿಗೆ ವಿರುದ್ದವಾಗಿ ಮತಚಲಾಯಿಸುವುದರ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇದರಿಂದಾಗಿ ಏರುಗತಿಯಲ್ಲಿದ್ದ ಪೆಟ್ರೋಲ್ ಮತ್ತು ಡಿಸೇಲ್ ದರಗಳನ್ನು ಬಿಜೆಪಿ ಸರಕಾರ ಇಳಿಸಿದೆ. ಇದೇ ರೀತಿ ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದಲ್ಲಿ ಹಲವಾರು ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಿರುವ ದೇಶದ ರೈತರುಗಳಿಗೆ ನ್ಯಾಯ ದೊರಕಲಿದೆ ಎಂದು ಹೇಳಿದ್ದಾರೆ.
ದೇಶದ ಜನರು ಒಳ್ಳೆಯ ದಿನಗಳನ್ನು ಕಾಣಬೇಕಾದಲ್ಲಿ ಬಿಜೆಪಿಯನ್ನು ಸೋಲಿಸುವುದು ಮತದಾರರ ಕರ್ತವ್ಯವಾಗಿದೆ. ಅಲ್ಲದೆ, ಮುಂಬರುವ ಉತ್ತರಪ್ರದೇಶ ಹಾಗೂ ಇನ್ನಿತರ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಜನರು ಸೋಲಿಸಿದಲ್ಲಿ ದೇಶಾದ್ಯಂತ ಪೆಟ್ರೋಲ್ ಮತ್ತು ಡಿಸೇಲ್ ಇಂಧನಗಳ ಮೇಲಿನ ತೆರಿಗೆಯನ್ನ ಕೇಂದ್ರ ಸರಕಾರ ಗಣನೀಯವಾಗಿ ಇಳಿಸುವ ಮನಸ್ಸು ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆ ಎಂದು ಕೆಪಿಸಿಸಿ ವಕ್ತಾರರಾದ ಕೆಂಗಲ್ ಶ್ರೀಪಾದ ರೇಣು ತಿಳಿಸಿದ್ದಾರೆ
Justice for farmers
Discussion about this post