ಚಿಕ್ಕಮಗಳೂರು: ದಾಸ ಸಾಹಿತ್ಯ, ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾಸಂತ ಭಕ್ತ ಕನಕದಾಸರು, ಸರ್ವ ಕಾಲಕ್ಕೂ ಶ್ರೇಷ್ಟರು ಎಂದು ಚಿಂತಕ, ವಾಗ್ಮಿ ನಿಕೇತ್ ರಾಜ್ ಮೌರ್ಯ ಅಭಿಪ್ರಾಯಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಬಳಿಯ ಕನಕ ಭವನದಲ್ಲಿ ಜಿಲ್ಲಾ ಕುರುಬ ಸಮಾಜದಿಂದ ಆಯೋಜಿಸಿದ್ದ ೫೩೪ ನೇ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.
ತಂಬೂರಿ ಹಿಡಿದು, ಕಂಬಳಿ ಹೊದ್ದು ಸಾಹಿತ್ಯ, ಕೀರ್ತನೆಗಳ ಮೂಲಕ ಜಾತ್ಯಾತೀತತೆ ನಿರ್ಮಾಣ ಮಾಡಲು ಮುಂದಾದ ಶ್ರೇಷ್ಟ ಸಂತರಲ್ಲಿ ಭಕ್ತ ಕನಕದಾಸರು ಅಗ್ರಗಣ್ಯರು. ರಾಮಧಾನ್ಯ ಚರಿತೆ, ಹರಿಭಕ್ತಿ ಸಾರ, ಮೋಹನ ತರಂಗಿಣಿ ಸೇರಿದಂತೆ ಅನೇಕ ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ಸಮಾಜದ ಅವ್ಯವಸ್ಥೆಗಳನ್ನು ದೂರಮಾಡುವ ನಿಟ್ಟಿನಲ್ಲಿ ವೈರಾಗ್ಯವನ್ನು ತಳೆದು ದಾಸರಾದವರು. ವಿಜಯನಗರದ ಅರಸರ ಮೆಚ್ಚಿನ ಪಾಳೇಗಾರರಾಗಿದ್ದರು, ಗದ್ಯ ಸಾಹಿತ್ಯದ ಮೂಲಕ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಅವರ ಆದರ್ಶಗಳು ಪರಿಪಾಲನೆಯಾಗಬೇಕು ಎಂದು ಕರೆ ನೀಡಿದರು.
ರಾಜ್ಯ ಕುರುಬ ಸಂಘದ ಉಪಾಧ್ಯಕ್ಷೆ ರೇಖಾಹುಲಿಯಪ್ಪ ಗೌಡ ಮಾತನಾಡಿ ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳುವುದು ಹೇಗೆ ಎಂಬುದನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟ ಮಹಾನ್ ಸಂತ ಕನಕದಾಸರು ಎಂದರು. ಕನಕದಾಸರ ಜಯಂತಿ ಕೇವಲ ದಿನಕ್ಕಷ್ಟೇ ಸೀಮಿತವಾಗಬಾರದು ಅವರ ಆದರ್ಶ, ಗುಣಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಕುರುಬ ಸಮಾಜವು ಸಾವಿರಾರು ವರ್ಷಗಳು ಇತಿಹಾಸ ಹೊಂದಿದೆ. ಸಮಾಜಸೇವೆ ಮೂಲಕ ಅನೇಕ ಗಣ್ಯರು ಪ್ರಾಣತ್ಯಾಗ ಮಾಡಿದ್ದಾರೆ ಅವರನ್ನು ಸ್ಮರಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಕನ್ನಡ ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ ಜಾತೀಯತೆಯಲ್ಲಿ ಬದುಕುತ್ತಿದ್ದ ಅಂದಿನ ಸಮಾಜವನ್ನು ಕೀರ್ತನೆ, ಸಾಹಿತ್ಯದ ಮೂಲಕ ಬದಲಾವಣೆ ತರುವ ನಿಟ್ಟಿನಲ್ಲಿ ಶ್ರಮಿಸಿದವರು, ಮಹಿನೀಯರು ಚರಿತೆ, ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ಅನುಸರಿಸುವ ಕೆಲಸವಾಗಬೇಕು ಎಂದರು.
ಕನಕದಾಸರು ಶ್ರೀಕೃಷ್ಣನನ್ನು ಭಕ್ತಿಯಿಂದ ಒಲಿಸಿಕೊಂಡ ರೀತಿ ನಿಜಕ್ಕೂ ಅನನ್ಯವಾದುದು ಜಾತ್ಯಾತೀತತೆಯನ್ನು ಪ್ರತಿಬಿಂಬಿಸಿದ ಮಹಾನ್ ದಾಸ ಶ್ರೇಷ್ಟ ಎಂದು ಕೊಂಡಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸಮಾಜದ ಮುಖಂಡ ಎ.ಎನ್. ಮಹೇಶ್ ಮಾತನಾಡಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುಂದಾದವರು, ಅವರು ಪ್ರತಿಪಾದಿಸಿದ ಜಾತ್ಯಾತೀತತೆ ಎಂಬುದು ಸಂವಿಧಾನದಲ್ಲಿನ ಪೀಠಿಕೆ ಇದ್ದಂತೆ ಎಂದು ಸ್ಮರಿಸಿದರು.
ಜನಸಾಮಾನ್ಯರ ಕಷ್ಟಗಳನ್ನು ಅರಿತು, ತಮ್ಮ ಕೀರ್ತನೆ, ಸಾಹಿತ್ಯದ ಮೂಲಕ ತಿಳಿಸುವ ಕೆಲಸ ಮಾಡಿದವರು. ರಾಮಧಾನ್ಯ ಚರಿತೆ, ಹರಿಭಕ್ತಿ ಸಾರ, ಸೇರಿದಂತೆ ಅನೇಕ ಸಾಹಿತ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ ಮಂಜುನಾಥ್, ಮಂಜೇಗೌಡ, ಕಾರ್ಯದರ್ಶಿ ಶಾಂತೇಗೌಡ, ಖಜಾಂಚಿ ಪುಟ್ಟೇಗೌಡ, ರಾಜ್ಯ ಕುರುಬರ ಸಂಘದ ನಿರ್ದೇಶಕರಾದ ವಕೀಲ ಪುಟ್ಟೇಗೌಡ, ತಾಲ್ಲೂಕು ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ಭದ್ರೇಗೌಡ, ಕೆ.ವಿ . ಮಂಜುನಾಥ್, ಪ್ರಹ್ಲಾದ್, ಚಂದ್ರಪ್ಪ, ಸಮಾಜದ ಮುಖಂಡ ಬೆಳವಾಡಿ ರವೀಂದ್ರ, ಈಶ್ವರಹಳ್ಳಿ ಮಹೇಶ್, ಮೋಹನ್, ಮೂರ್ತಿ, ಸೋಮಶೇಖರ್, ಸುರೇಶ್, ಸೇರಿದಂತೆ ಮತ್ತಿತರರು ಇದ್ದರು.
Discussion about this post