ಚಿಕ್ಕಮಗಳೂರು: ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕನ್ನಡ ಭಾಷೆಯು ನಮ್ಮಲ್ಲಿನ ಪರಭಾಷಾ ವ್ಯಾಮೋಹದಿಂದಾಗಿ ಮೂಲೆಗುಂಪಾಗುತ್ತಿದೆ ಅದನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗನಿಂದ ಆಗಬೇಕಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ ಹೇಳಿದರು.
ಅವರು ನಗರದ ಮಾರ್ಕೆಟ್ ರಸ್ತೆಯ ಪಾಂಡುರಂಗ ಆಟೋ ನಿಲ್ದಾಣದ ವೃತ್ತದಲ್ಲಿ ಜಿಲ್ಲಾ ಕನ್ನಡ ಸೇನೆ ವತಿಯಿಂದ ಆಯೋಜಿಸಿದ್ದ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯ ಅಳಿವು ಉಳಿವು ನಮ್ಮ ಮೇಲೆ ನಿಂತಿದೆಯೇ ಹೊರತು ಅನ್ಯ ಭಾಷಿಕರ ಮೇಲಲ್ಲ, ಅವರ ವಿರುದ್ಧ ದ್ವೇಷ ಕಾರುವುದರಿಂದಲ್ಲ. ಬೇರೆ ಭಾಷೆಗಳ ಮೇಲಿರುವ ಮಮಕಾರ ಕನ್ನಡದ ವಿಷಯಕ್ಕೆ ಬಂದಾಗ ತಿರಸ್ಕಾರವಾಗುತ್ತಿದೆ. ಭಾಷೆಯ ಮೇಲಿನ ಉದಾಸೀನತೆ ತೊರೆದು, ಕನ್ನಡ ಬಳಕೆ ಮತ್ತು ಉಳಿಕೆಗೆ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದರು.
ಯಾವುದೇ ಭಾಷೆ ಉಳಿಯಬೇಕಾದರೆ ಅದರ ಉಪಯುಕ್ತತೆ ಹೆಚ್ಚಾಗಬೇಕು. ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿಯನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬ ಕನ್ನಡಗನ ಜವಾಬ್ದಾರಿಯಾಗಿದೆ. ಎಲ್ಲರೂ ಪೋಷಕರು ತಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಕಲಿಸಬೇಕು ಎಂದು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ನಗರದ ಪ್ರತಿ ವ್ಯಾಪಾರ ಮಳಿಗೆ ಅಂಗಡಿಗಳು ಕಡ್ಡಾಯವಾಗಿ ಕನ್ನಡ ಫಲಕಗಳನ್ನು ಅಳವಡಿಸಲು ಸೂಚಿಸುವಂತೆ ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ ಪರಭಾಷೆ ವ್ಯಾಮೋಹದಿಂದಾಗಿ ಇಂದು ಕನ್ನಡ ಅಳಿನಂಚಿನತ್ತ ಸಾಗುತ್ತಿದೆ. ಕನ್ನಡ ಭಾಷೆಯನ್ನು ಮನೆ ಮನಗಳಲ್ಲಿ ಬಳಸಬೇಕು. ಕನ್ನಡಲ್ಲೇ ವ್ಯವಹರಿಸಿ, ಕನ್ನಡ ಭಾಷೆಯನ್ನು ಮತ್ತಷ್ಟು ಬೆಳೆಸಲು ಎಲ್ಲಾ ಕನ್ನಡಿಗರು ಶ್ರಮಿಸಿ, ಆರಾಧಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕನ್ನಡ ಭಾಷೆ ಅಭಿವೃದ್ಧಿಗಾಗಿ ಕನ್ನಡ ಸಾಹಿತ್ಯ ಪರಿಷತ್, ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಸ್ಕೃತಿ ಇಲಾಖೆ ಜತೆಗೆ ನೂರಾರು ಕನ್ನಡ ಪರ ಸಂಘಟನೆಗಳು ಇದ್ದರು ಕನ್ನಡ ನಶಿಸಿ ಹೋಗುತ್ತಿರಲು ಕಾರಣವೇನು ಎಂಬುದನ್ನು ಅರಿಯಬೇಕಿದೆ. ಅನ್ಯಭಾಷಿಕರು ಕನ್ನಡ ಕಲಿಯುವಂತೆ, ಕನ್ನಡ ಸಂಸ್ಕೃತಿಯ ಒಳಗೆ ಬರುವಂತೆ ನಾವೇನಾದರೂ ಗಮನಾರ್ಹ ಪ್ರಯತ್ನ ಮಾಡಿದ್ದೇವೆಯೇ? ಎಂಬುದನ್ನು ಸರ್ಕಾರ ವಿಮರ್ಶೆ ಮಾಡಬೇಕಿದೆ. ನೆಲಜಲದ ಋಣವನ್ನು ತೀರಿಸುವುದೆಂದರೆ ಅದು ನಾವು ಕನ್ನಡ ಭಾಷೆಯನ್ನು ಆಡು ಭಾಷೆಯಾಗಿ ದಿನನಿತ್ಯದ ಬದುಕಿನೊಂದಿಗೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ ದ್ರಾವಿಡ ಭಾಷೆಗಳಲ್ಲೊಂದಾದ ಕನ್ನಡಕ್ಕೆ ಸರಿ ಸುಮಾರು ೨೫೦೦ ವರ್ಷಗಳ ಇತಿಹಾಸವಿದೆ. ಅಂತಹ ಕನ್ನಡವನ್ನು ಉಳಿಸಿ, ಬೆಳೆಸಬೇಕಾದ ಅನಿವಾರ್ಯತೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಭಾಷೆಯೊಂದು ಜೀವಂತವಾಗಿ ಉಳಿಯುವುದು ನಮ್ಮ ಮಕ್ಕಳು ಕಲಿಯುವುದರಿಂದ, ಮಾತನಾಡುವುದರಿಂದಲೇ ಹೊರತು ಭಾಷಾಭಿಮಾನದ ವೀರಾವೇಶದ ಮಾತುಗಳಿಂದಲ್ಲ ಎಂದರು.
ಕನ್ನಡ ಸೇನೆ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಮರಬೈಲು ಮಾತನಾಡಿ ಪ್ರತಿಯೊಬ್ಬರು ತಮ್ಮ ಮಾತೃ ಭಾಷೆಗೆ ಹೆಚ್ಚು ಮಹತ್ವ ನೀಡಬೇಕು, ಇವತ್ತು ನಮ್ಮ ಮಕ್ಕಳಿಗೆ ಕನ್ನಡ ಕಲಿಸದೇ ಇದ್ದರೆ ಮುಂದೊಂದು ದಿನ ಕರ್ನಾಟಕದಲ್ಲಿ ಕನ್ನಡದ ಫಲಕಗಳನ್ನು ಎಷ್ಟು ದಪ್ಪ ಅಕ್ಷರಗಳಲ್ಲಿ ಬರೆದು ಹಾಕಿದರೂ ಓದುವುದಕ್ಕೂ ಜನ ಗತಿ ಇರುವುದಿಲ್ಲ ಈ ಬಗ್ಗೆ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ಮುಖಂಡ ವಿನಯ್, ಕನ್ನಡ ಸೇನೆ ಆಟೋ ನಗರಾಧ್ಯಕ್ಷ ಜಯಪ್ರಕಾಶ್, ನಗರ ಉಪಾಧ್ಯಕ್ಷ ಶಂಕರೇಗೌಡ್ರು, ಕಳವಾಸೆ ರವಿ, ಲವ, ಹಾಗೂ ಆಟೋ ಚಾಲಕರು ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ: ಅಳಿವಿನಂಚಿನಲ್ಲಿರುವ ಭಾರತೀಯ ಭಾಷೆಗಳಲ್ಲಿ ಕನ್ನಡವೂ ಒಂದು : ಮಂಜುನಾಥ ಸ್ವಾಮಿ ಆತಂಕ
Discussion about this post