ಶೃಂಗೇರಿ: ಕನ್ನಡ ಸಾಹಿತ್ಯ ಪರಿಷತ್ನ ಏಳಿಗೆಗೆ ಸಾಹಿತ್ಯಸಕ್ತರನ್ನು ಒಗ್ಗೂಡಿಸಿ ಕನ್ನಡದ ರಥ ಎಳೆಯಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಕಸಾಪ ನೂತನ ಅಧ್ಯಕ್ಷ ಶೃಂಗೇರಿ ಸುಬ್ಬಣ್ಣ ಹೇಳಿದರು.
ಪಟ್ಟಣದಲ್ಲಿ ತಾಲೂಕು ಪತ್ರಕರ್ತರ ಸಂಘ ಏರ್ಪಡಿಸಿದ್ದ ಕಸಾಪ ಅಧ್ಯಕ್ಷ ಶೃಂಗೇರಿ ಸುಬ್ಬಣ್ಣರವರಿಗೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಸಾಹಿತ್ಯ ಪರಿಷತ್ ನಿಂತ ನೀರಾಗದೆ,ಸದಾ ಚಟುವಟಿಕೆಯಿಂದ ನಡೆಯುವ ಪರಿಷತ್ ಆಗಬೇಕಿದೆ. ಗ್ರಾಪಂ ಮಟ್ಟದಲ್ಲಿ ಕಸಾಪ ಘಟಕ ಹಾಗೂ ಹೋಬಳಿ ಘಟಕ,ಕಾರ್ಯಕಾರಿ ಸಮಿತಿ ರಚಿಸುವ ಮೊದಲ ಕೆಲಸವಾಗಬೇಕಿದ್ದು,ಜಿಲ್ಲಾಧ್ಯಕ್ಷರ ಮಾರ್ಗದರ್ಶನದಲ್ಲಿ ತ್ವರಿತ ಗತಿಯಲ್ಲಿ ಕಸಾಪದ ಕೆಲಸಗಳನ್ನು ನಿರ್ವಹಿಸುವುದಾಗಿ ಹೇಳಿದರು.
ಆಗುಂಬೆ ಗಣೇಶ್ ಹೆಗ್ಡೆ ಮಾತನಾಡಿ,ಸಾಹಿತ್ಯ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸುಬ್ಬಣ್ಣರಿಗೆ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ದೊರಕಿರುವುದು ಸಮರ್ಪಕವಾಗಿದೆ.ಹಲವಾರು ವರ್ಷದಿಂದ ಕನ್ನಡ ಸೇವೆಗಾಗಿ ಮೀಸಲಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ಶೃಂಗೇರಿ ಸುಬ್ಬಣ್ಣರವರಿಗೆ ಶಾಲು ಹೊದೆಸಿ,ಮಾಲಾರ್ಪಣೆ ಮಾಡಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
Discussion about this post