ಚಿಕ್ಕಮಗಳೂರು: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪುಸ್ತಕಗಳು ಒಡನಾಡಿಗಳಿದ್ದಂತೆ, ಜೀವನದಲ್ಲಿ ನಿರಂತರ ಓದನ್ನು ಹವ್ಯಾಸವಾಗಿಸಿಕೊಂಡಾಗ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ನಗರದ ಬಸವನಹಳ್ಳಿ ಬಾಲಿಕ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ‘ಶಾಲೆಯೆಡೆಗೆ ಗ್ರಂಥಾಲಯ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲಿ ತೊಡಗಿಕೊಳ್ಳಬೇಕು, ಜೀವನದಲ್ಲಿ ಪುಸ್ತಕಗಳು ಉತ್ತಮ ಒಡನಾಡಿಗಳಿದ್ದಂತೆ, ಉತ್ತಮ ಆದರ್ಶಯುತ ಪುಸ್ತಕಗಳು ವ್ಯಕ್ತಿತ್ವವನ್ನು ರೂಪಿಸುವುದರ ಜತೆಗೆ ಜೀವನಕ್ಕೆ ದಾರಿ ದೀಪವಾಗಲಿದೆ ಆ ನಿಟ್ಟಿನಲ್ಲಿ ಪುಸ್ತಕ ಓದುವುದನ್ನು ಹವ್ಯಾಸವಾಗಿ ಮಾಡಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ ಪುಸ್ತಕಗಳು ಜೀವನವನ್ನು ರೂಪಿಸುವ ಗುರುಗಳಿದ್ದಂತೆ. ಮಕ್ಕಳು ತಮ್ಮ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ನಿರಂತರವಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜೀನವದಲ್ಲಿ ಯಶಸ್ಸು, ಸಾಧನೆಗೆ ಮಹಾತ್ಮಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಆದರ್ಶ ವ್ಯಕ್ತಿಗಳು ಪ್ರೇರಕ ಶಕ್ತಿಯಾಗಲಿದ್ದಾರೆ ಎಂದರು.
ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಸಮಗ್ರವಾಗಿ ಚಟುವಟಿಕೆಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ನಗರದಲ್ಲಿ ಸಂಚಾರಿ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ನಗರ ಕೇಂದ್ರದ ಮುಖ್ಯ ಗ್ರಂಥಾಲಯಾಧಿಕಾರಿ ಉಮೇಶ್ ಜಿ. ಪ್ರಾಸ್ತವಿಕವಾಗಿ ಮಾತನಾಡಿ ಗ್ರಂಥಾಲಯ ವಿಶ್ವವಿದ್ಯಾಲಯವಿದ್ದಂತೆ, ಎಲ್ಲಾ ಮಾದರಿಯ ವಿಷಯಗಳು ಇಲ್ಲಿ ಸಿಗಲಿದ್ದು, ಗ್ರಂಥಾಲಯ ಪ್ರವಾಸ ಕೈಗೊಂಡಾಗ ವಿಸ್ತೃತ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.
ಸಂಚಾರಿ ಗ್ರಂಥಾಲಯವು ನಗರದಲ್ಲಿ ಎಂ.ಇ ಎಸ್, ಪ್ರೌಢಶಾಲೆ, ಸೆಂಟ್ ಜೋಸೆಫ್ ಪ್ರೌಢಶಾಲೆ, ರಾಮನಹಳ್ಳಿಯ ಎಲ್.ಬಿ.ಎಸ್ ಸರ್ಕಾರಿ ಪ್ರೌಢಶಾಲೆ, ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೌಸಿಂಗ್ ಬೋರ್ಡ್ ಸರ್ಕಾರಿ ಪ್ರೌಢ ಶಾಲೆ, ಬಸವನಹಳ್ಳಿ ಬಾಲಕಿಯರ ಪ್ರೌಢಶಾಲೆ, ನರಸಿಂಹಯ್ಯ ಪ್ರೌಢಶಾಲೆ, ವಿಶ್ವವಿದ್ಯಾಲಯ ಪ್ರೌಢಶಾಲೆ ಸೇರಿದಂತೆ ಒಟ್ಟು ಎಂಟು ಶಾಲೆಗಳಿಗೆ ವಾರದಲ್ಲಿ ಒಮ್ಮೆ ಭೇಟಿ ನೀಡಲಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಬಾಲಿಕ ಪ್ರೌಢ ಶಾಲೆ ಉಪಪ್ರಾಂಶುಪಾಲರಾದ ಚಂದ್ರಮ್ಮ, ಕಾಲೇಜು ಪ್ರಾಂಶುಪಾಲರಾದ ಸಾವಿತ್ರಿ, ಸಿಬ್ಬಂದಿಗಳಾದ ಸಿದ್ದಪ್ಪ, ಮಹೇಶಪ್ಪ, ರೂಪಾ, ವೀಣಾ, ರಾಘವೇಂದ್ರ ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ಓದಿ:
ನಗರ ಕೇಂದ್ರ ಗ್ರಂಥಾಲಯಕ್ಕೆ ಜಿಲ್ಲಾಧಿಕಾರಿ ರಮೇಶ್ ಭೇಟಿ- ಪರಿಶೀಲನೆ
Discussion about this post