ಚಿಕ್ಕಮಗಳೂರು: ಗ್ರಂಥಾಲಯಗಳು ಬೌದ್ಧಿಕ ಜ್ಞಾನದ ವಿಸ್ತಾರ ಕೇಂದ್ರಗಳಿದ್ದಂತೆ. ಪುಸ್ತಕದ ಜ್ಞಾನಕ್ಕೆ ನಮ್ಮನ್ನು ನಾವು ಸಮರ್ಪಿಸಿಕೊಂಡಾಗ ನಮ್ಮಲ್ಲಿನ ಬೌದ್ಧಿಕ ಜ್ಞಾನದ ಮಟ್ಟ ಮತ್ತಷ್ಟು ವಿಸ್ತಾರವಾಗಲಿದೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ಹೇಳಿದರು.
ಜಿಲ್ಲೆಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ ರಾಷ್ಟೀಯ ಗ್ರಂಥಾಲಯ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು ಪುಸ್ತಕಗಳು ಜ್ಞಾನದ ದಾಹವನ್ನು ತಣಿಸುವ ಅಮೃತವಿದ್ದಂತೆ. ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ತಿಳಿಸುವುದರ ಜತೆಗೆ ವಿಚಾರಗಳೊಂದಿಗೆ ಬೌದ್ಧಿಕ ಮಟ್ಟವನ್ನು ವಿಸ್ತಾರಗೊಳಿಸಲಿದೆ. ಗ್ರಂಥಾಲಯ ಸಪ್ತಾಹ ಎಂಬುದು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿದೆ ಪ್ರತಿ ದಿನವೂ ನಡೆಯಬೇಕು, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಇಂತಹ ಕಾರ್ಯಕ್ರಮಗಳು ನಿಜಕ್ಕೂ ಅರ್ಥಪೂರ್ಣ ಎಂದರು.
ವಿಚಾರ ವಿನಿಮಯ ಮಾಡಿಕೊಳ್ಳಲು, ಇತಿಹಾಸ, ಪರಂಪರೆಯನ್ನು ತಿಳಿಯಲು ಪುಸ್ತಕಗಳು ಜ್ಞಾನದ ದೀವಿಗೆ ಇದ್ದಂತೆ. ಆದರೆ ಇತ್ತೀಚಿನ ತಾಂತ್ರಿಕ ದಿನಗಳಲ್ಲಿ ಮೊಬೈಲ್, ಕಂಪ್ಯೂಟರ್ಗಳು ಪುಸ್ತಕದ ಸ್ಥಳವನ್ನು ಆಕ್ರಮಿಸಿವೆ. ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಓದುವವರ ಸಂಖ್ಯೆ ಅಧಿಕವಾಗಿದೆ. ಪುಸ್ತಕಗಳನ್ನು ಸಂರಕ್ಷಣೆ ಮಾಡುವ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಅಭಿಪ್ರಾಯಿಸಿದರು.
ಗ್ರಂಥಾಲಯಗಳು ಬೌದ್ಧಿಕ ಜ್ಞಾನದ ವಿಸ್ತಾರ ಕೇಂದ್ರಗಳಿದ್ದಂತೆ. ಪುಸ್ತಕದ ಜ್ಞಾನಕ್ಕೆ ನಮ್ಮನ್ನು ನಾವು ಸಮರ್ಪಿಸಿಕೊಂಡಾಗ ನಮ್ಮಲ್ಲಿನ ಬೌದ್ಧಿಕ ಜ್ಞಾನದ ಮಟ್ಟವೂ ಮತ್ತಷ್ಟು ವಿಸ್ತಾರವಾಗಲಿದೆ. ಪ್ರತಿಯೊಬ್ಬರು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗಿ ರೂಪುಗೊಳ್ಳುವಂತೆ ಆಶಿಸಿದರು.
ನಗರ ಕೇಂದ್ರದ ಮುಖ್ಯ ಗ್ರಂಥಾಲಯಾಧಿಕಾರಿ ಉಮೇಶ್ ಮಾತನಾಡಿ ಶಾಲಾ, ಕಾಲೇಜು ಮಕ್ಕಳು, ಸಾರ್ವಜನಿಕರಲ್ಲಿ ಓದುವ ವಿಶೇಷ ಆಸಕ್ತಿ ಬೆಳೆಸುವ ಸದುದ್ದೇಶದಿಂದ ಸರ್ಕಾರದ ನಿರ್ದೇಶನದಂತೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇಡೀ ರಾಷ್ಟ್ರಾದ್ಯಂತ ವಿವಿಧ ಕಡೆಗಳಲ್ಲಿ ನ.೧೪ ರಿಂದ ೨೦ ರವರೆಗೆ ಗ್ರಂಥಾಲಯ ಸಪ್ತಾಹವನ್ನು ಆಚರಣೆ ಮಾಡಲಾಗುತ್ತಿದೆ. ಗ್ರಂಥಾಲಯಗಳು ಮಕ್ಕಳಲ್ಲಿ ಓದುವ ಆಸಕ್ತಿ ಮೂಡಿಸುವುದರ ಜತೆಗೆ ಬೌದ್ಧಿಕ ಜ್ಞಾನವನ್ನು ಹೆಚ್ಚಿಸಲಿವೆ. ಸಾರ್ವಜನಿಕ ಗ್ರಂಥಾಲಯದಲ್ಲಿ ಸಪ್ತಾಹ ಆಚರಣೆ ಮಾಡುವ ಉದ್ದೇಶ ಇಲ್ಲಿ ಎಲ್ಲಾ ಮಾದರಿಯ ಪುಸ್ತ ಕಗಳಿದ್ದು ವಿಶೇಷ ಮಕ್ಕಳು, ಹಿರಿಯ ನಾಗರೀಕರು ಒಳಗೊಂಡಂತೆ ಎಲ್ಲಾ ವರ್ಗದ ಓದುರನ್ನು ಇಲ್ಲಿಗೆ ಬರಲಿದ್ದಾರೆ. ವಿಶೇಷವಾಗಿ ನ.೧೪ ಮಕ್ಕಳ ದಿನಾಚರಣೆ ಆದ ಕಾರಣದಿಂದಲೂ ಪ್ರತಿ ವರ್ಷ ಈ ದಿನವನ್ನು ಗ್ರಂಥಾಲಯ ಸಪ್ತಾಹ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ನಗರದ ಹಿರೇಮಗಳೂರು, ಬಸವನಹಳ್ಳಿ ಶಾಲೆ, ಹಾಗೂ ಬಂಧೀಖಾನೆ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ, ಜತೆಗೆ ನಗರದಲ್ಲಿ ಸಂಚಾರ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಬಸವನಹಳ್ಳಿ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಹಾಗೂ ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ಚಂದ್ರಮ್ಮ ಮಾತನಾಡಿ ಪುಸ್ತಕಗಳು ದೇವರಿಗೆ ಸಮಾನವಾದವುಗಳು, ಅವುಗಳನ್ನು ನಾವು ಅತ್ಯಂತ ಶ್ರದ್ದೆ ಭಕ್ತಿಯಿಂದ ಪರಿಶ್ರಮದೊಂದಿಗೆ ಅಧ್ಯಯನ ಮಾಡಿದ್ದಲ್ಲಿ ಅವುಗಳು ನಮ್ಮನ್ನು ಸಾಧನೆಯ ಮೂಲಕ ಎತ್ತರೆಕ್ಕೆ ಕೊಂಡೊಯ್ಯಲಿವೆ. ಬಸವನಹಳ್ಳಿ ಶಾಲೆಯಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಗ್ರಂಥಾಲಯ ಆರಂಭಗೊಂಡಿರುವುದು ಸಂತಸ ವಿಚಾರ ಎಂದರು.
ಈ ಸಂದರ್ಭದಲ್ಲಿ ಗ್ರಂಥಾಲಯ ಓದುಗರು, ಸಾರ್ವಜನಿಕರು, ಮಕ್ಕಳು ಉಪಸ್ಥಿತರಿದ್ದರು. ಗ್ರಂಥಾಲಯ ಸಿಬ್ಬಂದಿ ಹೆಚ್.ಬಿ. ಮಹೇಶಪ್ಪ, ನಿರೂಪಿಸಿ ಬಿ.ಎಂ.ಸಿದ್ದಪ್ಪ ವಂದಿಸಿ, ಕೃಪಾ ಪ್ರಾರ್ಥಿಸಿದರು.
Discussion about this post