ಚಿಕ್ಕಮಗಳೂರು: ಡಿಸೆಂಬರ್ 27 ರಂದು ನಡೆಯುವ ನಗರಸಭೆ ಚುನಾವಣೆ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಶುಕ್ರವಾರ ನಗರದ ಅಭಿವೃದ್ಧಿ ಯೋಜಿತ ಕಾರ್ಯಕ್ರಮಗಳ ಕುರಿತ ತನ್ನ ಪ್ರಣಾಳಿಕೆಯನ್ನು ಪಕ್ಷದ ಹಲವು ಮುಖಂಡರ ಸಮ್ಮುಖದಲ್ಲಿ ನಗರದ ಪತ್ರಿಕಾಗೋಷ್ಟಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಕಡೂರು ಶಾಸಕ ಬೆಳ್ಳಿಪ್ರಕಾಶ್, ಜಿಲ್ಲಾಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಉಪಾಧ್ಯಕ್ಷ ಪ್ರೇಮ್ಕುಮಾರ್, ಸೇರಿದಂತೆ ಪಕ್ಷದ ಅನೇಕ ಮುಖಂಡರು ಪ್ರಣಾಳಿಕೆ ಪ್ರದರ್ಶಿಸುವ ಮೂಲಕ ಬಿಡುಗಡೆ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಸಿ.ಕಲ್ಮುರಡಪ್ಪ ಮಾತನಾಡಿ ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ನಗರಸಭೆಯ ಅಧಿಕಾರ ಚುಕ್ಕಾಣಿಯನ್ನು ಬಿಜೆಪಿ ಅಲಂಕರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಸೆಂಬರ್ ೨೭ರ ಚುನಾವಣೆ ಹಿನ್ನೆಲೆ ನಗರದ ಪ್ರತಿ ವಾರ್ಡ್ಗಳಲ್ಲೂ ಮನೆ ಮನೆ ಭೇಟಿ ಮೂಲಕ ಪ್ರಚಾರ ನಡೆಸಲಾಗಿದೆ, ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಇಲ್ಲಿನ ಶಾಸಕರು ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಆಯ್ದ ವಾರ್ಡ್ಗಳಲ್ಲಿ ಪಕ್ಷೇತರರಿಗೆ ಬೆಂಬಲ ಸೂಚಿಸಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ವಾಹನಗಳ ದಟ್ಟಣೆ ಸಮಸ್ಯೆ ಪರಿಹರಿಸಲು ವಾಣಿಜ್ಯ ಸಮುಚ್ಚಯ ನಿರ್ಮಾಣಕ್ಕೆ ಯೋಜಿಸಲಾಗುವುದು. ನಗರದ ಎಲ್ಲಾ ರಸ್ತಗಳಿಗೂ ಎಲ್ಇಡಿ ಸೌರದೀಪ ಅಳವಡಿಕೆ, ನಗರಸಭೆಯನ್ನು ಜನಸ್ನೇಹಿಯನ್ನಾಗಿಸುವುದು, ಪ್ರವಾಸಿಗರ ಹೆಚ್ಚಳ ಹಿನ್ನಲೆ ನಗರದಲ್ಲಿ ಆಧುನಿಕ ಮಾದರಿಯ ಶೌಚಾಲಯ ನಿರ್ಮಾಣ, ಪಾರ್ಕ್ ಅಭಿವೃದ್ಧಿಗೆ ಆಧ್ಯತೆ, ವಾರ್ಡ್ಗಳಲ್ಲಿ ವಾರ್ಷಿಕ ಕನಿಷ್ಟ ೩ ಬಾರಿಯಾದರೂ ವಾರ್ಡ್ ಸಭೆ ನಡೆಸಿ ಜನರ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದರು.
ನಗರದ ವಿವಿಧ ಬಡಾವಣೆಗಳ ತಿರುವುಗಳಿಗೆ ವಿವಿಧ ಕ್ಷೇತ್ರದ ಸಾಧಕರು, ಹೋರಾಟಗಾರರು, ಸಮಾಜಸೇವಕರ ಹೆಸರಿನ ಫಲಕಗಳ ಅಳವಡಿಕೆಗೆ ಚಿಂತನೆ, ನಗರದ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು, ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ನಗರದಲ್ಲಿ ಕೈಗೊಂಡಿರುವ ಯುಜಿಡಿ ಹಾಗೂ ಅಮೃತ್ ಯೋಜನೆಗಳು ಪೂರ್ಣಗೊಳ್ಳುವ ಹಂತ ತಲುಪಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ಜನತೆಗೆ ಮತ್ತಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಲೋಚಿಸಲಾಗಿದೆ. ನಗರದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆಧ್ಯತೆ ನೀಡಿದ್ದು, ಪ್ರತಿ ಮನೆಯಿಂದ ಹಸಿ ಹಾಗೂ ಒಣಕಸವನ್ನು ಸಂಗ್ರಹಿಸುವ ಕಾರ್ಯ ಸಾಗಿದ್ದು , ಹಸಿ ಕಸವನ್ನು ಸಮರ್ಪಕವಾಗಿ ವಿಲೇವಾರಿಗೆ ನಗರದ ಜನತೆ ಕೈಜೋಡಿಸುವ ವಿಶ್ವಾಸವಿದೆ ಎಂದರು.
ನಗರಸಭೆಯಲ್ಲಿ ಇ-ಸ್ವತ್ತು ವಿಳಂಬ ತಡೆಗೆ ಸೂಕ್ತ ವ್ಯವಸ್ಥೆ, ಸಮಸ್ಯೆಗಳನ್ನು ನಗರಸಭೆ ಆಯುಕ್ತರ ಗಮನಕ್ಕೆ ತರಲು ಅಗತ್ಯ ಆಪ್ ಸಿದ್ದಪಡಿಸುವ ಆಲೋಚನೆ ಇದೆ, ಇಲ್ಲಿನ ಉದ್ಯಾನವನ್ನು ೨.೫೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಶಂಕರಪುರ, ಕಲ್ಲುದೊಡ್ಡಿಯಲ್ಲಿ ಸಮುದಾಯಭವನ ನಿರ್ಮಾಣವಾಗುತ್ತಿದೆ. ಸುಮಾರು ೧ ಕೋಟಿ ರೂ ವೆಚ್ಚದಲ್ಲಿ ಕೋದಂಡ ರಾಮದೇವಸ್ಥಾನದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.
ಕೊಳಗೇರಿ ಸೂರು ರಹಿತರಿಗೆ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು ಇದುವರೆಗೂ ೨೮೦ ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ೫೦೦ ಮನೆಗಳ ಮಂಜೂರು ಸದ್ಯದಲ್ಲೇ ಆರಂಭವಾಗಲಿದೆ. ನಗರದ ಕ್ರೀಡಾಂಗಣ ಅಭಿವೃದ್ಧಿಗೆ ಕ್ರಮವಹಿಸಿದ್ದು ೭ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ, ಒಳಾಂಗಣ ಕ್ರೀಡಾಂಗಣ ನಿರ್ಮಾಣ, ಸೇರಿದಂತೆ ಹಲವು ಕಾಮಗಾರಿಗೆ ಅನುದಾನ ತರಲಾಗಿದೆ ಎಂದರು.
ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ ಜಿಲೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು ಕೋವಿಡ್ ಲಾಕ್ಡೌನ್ ಪರಿಣಾಮ ಆಡಳಿತಾತ್ಮಕ, ಗುತ್ತಿಗೆದಾರರ ಸಮಸ್ಯೆ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿದೆ. ಜಿಲ್ಲೆಯಲ್ಲಿ ನೀರಾವರಿ, ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಜಿಲ್ಲೆಯ ಅಭಿವೃದ್ಧೀಗೆ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸುತ್ತಿದ್ದೇವೆ ಎಂದರು.
ಬಿಜೆಪಿ ಅವಧಿಯಲ್ಲಿ ನಗರದಲ್ಲಿ ಸಾಕಷ್ಟು ಕಾಮಗಾರಿಗಳು ನಡೆದಿವೆ, ಕೆಲವೊಂದು ವಾರ್ಡ್ಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇಲ್ಲಿನ ಶಾಸಕರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಗರಸಭೆ ಚುನಾವಣಾ ಮೇಲ್ವಿಚಾರಕ ಹೆಚ್.ಡಿ.ತಮ್ಮಯ್ಯ, ಪುಷ್ಪರಾಜ್, ಜಿಲ್ಲಾ ಉಪಾಧ್ಯಕ್ಷ ಪ್ರೇಮ್ಕುಮಾರ್, ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ರಾಮಸ್ವಾಮಿ, ಕೃಷ್ಣಪ್ಪ, ಈಶ್ವರಹಳ್ಳಿ ಮಹೇಶ್, ಸೋಮಶೇಖರಪ್ಪ ಸೇರಿದಂತೆ ಅನೇಕರು ಇದ್ದರು
Manifesto launch
Discussion about this post