ಚಿಕ್ಕಮಗಳೂರು : ನ್ಯಾಯಾಲಯ ಹಂತದಲ್ಲಿ ಬಗೆಹರಿಸಬಹುದಾದ ವ್ಯಾಜ್ಯಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವ ಉದ್ದೇಶದಿಂದ ಡಿ.೧೮ ರಂದು ಮೆಗಾಲೋಕ ಅದಾಲತ್ ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಶುಭಗೌಡರ್ ತಿಳಿಸಿದರು.
ನ್ಯಾಯಾಲಯದ ಎಡಿಎಲ್ಆರ್ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಟಿ ಮೂಲಕ ಮಾಹಿತಿ ನೀಡಿದ ಅವರು ಜಿಲ್ಲೆಯಲ್ಲಿ ಸಿವಿಲ್, ಕ್ರಿಮಿನಲ್ ಒಳಗೊಂಡಂತೆ ಪ್ರಸ್ತುತ ಒಟ್ಟು ೩೧,೩೭೦ ಪ್ರಕರಣಗಳು ಬಾಕಿ ಇದ್ದು, ರಾಜಿಗಾಗಿ ೧೦,೫೩೮ ಪ್ರಕರಣಗಳಿವೆ. ಆ ಪೈಕಿಯಲ್ಲಿ ೩,೬೦೧ ಪ್ರಕರಣಗಳನ್ನು ರಾಜೀ ಸಂಧಾನಕ್ಕಾಗಿ ಗುರುತಿಸಲಾಗಿದೆ. ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಸುಪ್ರಿಂಕೋರ್ಟ್ ಹಾಗೂ ಉಚ್ಚ ನ್ಯಾಯಾಲಯದ ನಿರ್ದೇಶನದನ್ವಯ ಲೋಕ ಆದಾಲತ್ ನಡೆಸುತ್ತಿದ್ದು. ಪಕ್ಷಗಾರರು ತಮ್ಮ ವಕೀಲರ ಮೂಲಕ ನೊಂದಣಿ ಮಾಡಿಸಿ ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಅದಾಲತ್ನಲ್ಲಿ ಕಾನೂನಿನಲ್ಲಿ ಅವಕಾಶವಿರುವ ರಾಜೀ ಮಾಡಬಹುದಾದ ಪ್ರಕರಣ, ಚೆಕ್ ಬೌನ್ಸ್, ಬ್ಯಾಂಕು, ಮೋಟಾರು ವಾಹನ, ಅಪಘಾತ ಜೀವನಾಂಶ, ಕಾರ್ಮಿಕ ವ್ಯಾಜ್ಯ, ವಿದ್ಯುತ್ ಬಿಲ್, ನೀರಿನ ಬಿಲ್ ಸಮಸ್ಯೆ, ಮರಳು ಗಣಿಗಾರಿಕೆ, ಕೌಟುಂಬಿಕ ಸೇವೆಗಳು, ಭೂ ಸ್ವಾಧೀನ, ಕಂದಾಯ ಒತ್ತುವರಿ ಸೇರಿ ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಇದರಿಂದ ಉಭಯ ಕಕ್ಷಿದಾರರು ಹಣ, ಹಾಗೂ ಸಮಯ ಉಳಿತಾಯವಾಗಲಿದೆ, ನೆಮ್ಮದಿ ಉಳಿದು ಸಂಬಂಧಗಳು ಮುಂದುವರೆಯುತ್ತವೆ ಎಂದು ಸಲಹೆ ನೀಡಿದರು
ಲೋಕ ಅದಾಲತ್ನಲ್ಲಿ ಎರಡು ಕಕ್ಷಿದಾರರು ಸಮಕ್ಷಮ ಒಪ್ಪಿಕೊಂಡ ನಂತರ ಅದಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ, ಕೊರೊನಾ ಸೋಂಕು ಹಿನ್ನೆಲೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕಿದ್ದು ಎಲ್ಲಾ ಕಕ್ಷಿದಾರರಿಗೂ ದಿನಾಂಕ ನಿಗಧಿಪಡಿಸಲಾಗಿದೆ, ಕೆಲವೊಂದು ಪ್ರಕರಣಗಳಲ್ಲಿ ಕಕ್ಷಿದಾರರು ನೇರವಾಗಿ ಭಾಗಿಯಾಗಲು ಆಗದಿದ್ದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಿ ಇತ್ಯರ್ಥಪಡಿಸಲು ಅವಕಾಶವಿದೆ. ಅದಾಲತ್ನಲ್ಲಿ ಗುರುತಿಸಿರುವ ಪ್ರಕರಣಕ್ಕಿಂತ ಹೆಚ್ಚಿನವುಗಳು ಬಂದಲ್ಲಿ ಅವುಗಳನ್ನು ಕೈಗೆತ್ತಿಕೊಂಡು ಇತ್ಯರ್ಥಪಡಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ವೀರಣ್ಣ ಸೋಮಶೇಖರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್.ಸೋಮ, ವಕೀಲರ ಸಂಘದ ಅಧ್ಯಕ್ಷ ವಿ.ಟಿ. ಥಾಮಸ್ ಇದ್ದರು.
ಇದನ್ನೂ ಓದಿ: ನ್ಯಾಯಾಧೀಶರಾಗುವವರಲ್ಲಿ ನ್ಯಾಯಿಕ ಮನೋಧರ್ಮ ಇರಬೇಕು
Discussion about this post