ಚಿಕ್ಕಮಗಳೂರು: ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಜಯನಗರ ಬಡಾವಣೆ ೮ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಎಂ.ಆರ್.ದೇವರಾಜ್ ಶೆಟ್ಟಿ ಪರವಾಗಿ ಸ್ಥಳೀಯ ಮುಖಂಡರೊಂದಿಗೆ ಮನೆ ಮನೆ ಪ್ರಚಾರ ನಡೆಸುವ ಮೂಲಕ ಮಾತನಾಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಸೀಮಿತ ಸಂಖ್ಯೆಯ ಮತದಾರರಿಂದ ನಡೆಯುವಂತದ್ದು, ಆ ಹಿನ್ನಲೆ ಪ್ರತಿಯೊಂದು ಮತವು ಅಮೂಲ್ಯವಾದುದು ಆದ್ದರಿಂದ ವಾರ್ಡ್ನಲ್ಲಿರುವ ಎಲ್ಲಾ ಮತದಾರರನ್ನು ವಿಶ್ವಾಸಕ್ಕೆ ಪಡೆದು ಓಲೈಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಗರಸಭೆಗೆ ಸುಧಾರಣೆ ತರುವ ನಿಟ್ಟಿನಲ್ಲಿ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಮುಂಚೂಣಿಯಾಗಿ ನಿಂತು ದೇವರಾಜ್ ಶೆಟ್ಟಿ ಶ್ರಮಿಸಿದ್ದಾರೆ. ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದು ಅಪಾರ ಅನುಭವ ಉಳ್ಳ ಅವರನ್ನು ಮತ್ತಷ್ಟು ಜನಪರ ಸೇವೆಗೆ ಅವಕಾಶ ಕಲ್ಪಿಸಲು ಡಿ.೨೭ರ ನಗರಸಭೆ ಚುನಾವಣೆಯಲ್ಲಿ ಅತಿಹೆಚ್ಚು ಮತಗಳ ಅಂತರದಿಂದ ಅವರನ್ನು ಜಯಶೀಲರನ್ನಾಗಿ ಮಾಡುವಂತೆ ಕೇಳಿಕೊಂಡರು.
ಜಿಲ್ಲೆಯಲ್ಲಿ ಹಲವು ರಾಜಕೀಯ ಪಕ್ಷಗಳು ತಮ್ಮ ವೈಯಕ್ತಿಯ ಹಿತಾಸಕ್ತಿಗಾಗಿ ದುರ್ಲಭಪಡೆಯಲು ಯತ್ನಿಸುತ್ತಿವೆ. ಜಿಲ್ಲೆಗೆ ಅನುದಾನ ತಂದು ಅಭಿವೃದ್ಧಿಗೊಳಿಸಲು ಕಾಂಗ್ರೆಸ್, ಹಾಗೂ ಜೆಡಿಎಸ್ನಿಂದ ಅಸಾಧ್ಯ. ನಗರದಲ್ಲಿ ಕುಡಿಯುವ ನೀರು, ವಸತಿ ರಹಿತರಿಗೆ ಮನೆ ನಿರ್ಮಾಣ, ರಸ್ತೆ, ಚರಂಡಿ, ವಿದ್ಯುತ್ ದೀಪ, ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಹೆಚ್ಚು ಅನುದಾನ ತಂದು ನಾವೆಲ್ಲರೂ ಒಟ್ಟಾಗಿ ಶ್ರಮಿಸಲಿದ್ದು, ಈ ಬಾರಿಯ ಚುನಾವಣೆಯಲ್ಲಿ ನೂರಕ್ಕೆ ನೂರಷ್ಟು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು ಅಧಿಕಾರದ ಚುಕ್ಕಾಣಿಯನ್ನು ಬಿಜೆಪಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇವರಾಜ್ ಶೆಟ್ಟಿ ಅವರನ್ನು ಭಾರಿ ಮತಗಳ ಅಂತರದಲ್ಲಿ ಗೆಲ್ಲಿಸಲು ವಾರ್ಡಿನ ಜನತೆ ಸವಾಲಾಗಿ ಸ್ವೀಕರಿಸಬೇಕು. ಅಭ್ಯರ್ಥಿಗಳ ಪರ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ನಗರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ, ಕೋಟೆ ರಂಗನಾಥ್, ಕೋಟೆ ಕುಮಾರ್, ನಟರಾಜ್, ಸರೋಜಾ, ವನಿತಾ ಮತ್ತಿತರರು ಇದ್ದರು.
Minister Shobha Karandlaje votes for Devaraj Shetty
Discussion about this post