ಚಿಕ್ಕಮಗಳೂರು: ಸತತ ಅಧ್ಯಯನ ಶೀಲತೆ ಹಾಗೂ ಕಠಿಣ ಶ್ರಮದ ಮೂಲಕ ಉತ್ತಮ ವಕೀಲರಾಗಿ ರೂಪುಗೊಳ್ಳಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್ ಸೋಮ ಸಲಹೆ ನೀಡಿದರು.
ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯ ಅಂಗವಾಗಿ ನಗರದ ಶಾರದಾ ಕಾನೂನು ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ವಕೀಲ ವೃತ್ತಿ ಶ್ರೇಷ್ಠವಾದ ವೃತ್ತಿ. ಸರ್ವಾಂಗಿಣವಾದ ಜ್ಞಾನ ಸಂಪಾದನೆ ಹಾಗೂ ಕಠಿಣ ಶ್ರಮದ ಮೂಲಕ ಯಶಸ್ಸು ಗಳಿಸಬಹುದು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಟಿ ಥಾಮಸ್ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದ ಧ್ಯೇಯೋದ್ದೇಶಗಳನ್ನು ಎಲ್ಲರಿಗೂ ತಲುಪಿಸುವಲ್ಲಿ ಕಾನೂನು ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳುವಂತೆ ತಿಳಿಸಿದ ಅವರು ವಕೀಲ ವೃತ್ತಿಯಲ್ಲಿ ತಾಳ್ಮೆ, ಅರ್ಪಣ ಮನೋಭಾವ ಅತಿ ಅಗತ್ಯ ಕಾನೂನು ವ್ಯಾಸಂಗ ಮಾಡಿದಲ್ಲಿ, ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳಿವೆ ಆದರಿಂದ ಉತ್ತಮವಾಗಿ ವ್ಯಾಸಂಗವಾಗಿ ಉನ್ನತ ದರ್ಜೆಯ ಸ್ಥಾನ ಗಳಿಸಲು ಶ್ರಮಿಸುವಂತೆ ಹಾಗೂ ವಕೀಲ ವೃತ್ತಿಗೆ ಶಿಸ್ತು, ಶ್ರದ್ದೆ ಅತಿ ಅಗತ್ಯ ಎಂದು ತಿಳಿಸಿದರು.
ಹಿರಿಯ ವಕೀಲ ಎಸ್.ಎಸ್ ವೆಂಕಟೇಶ್ ಸಮಾಜದಲ್ಲಿ ವಕೀಲ ಪಾತ್ರ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶಗಳ ಕುರಿತು ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಕವಿತ, ಸಂಸ್ಥೆಯ ಕಾರ್ಯದರ್ಶಿ ಸಿ.ಟಿ ಜಯವರ್ಧನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Discussion about this post