ಚಿಕ್ಕಮಗಳೂರು: ಎಂ.ಜಿ.ರಸ್ತೆಯಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ನ ಕಿಸಾನ್ ಸೆಲ್ ಮತ್ತು ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದ ಎರಡೂ ವಿಭಾಗಗಳ ಕಾರ್ಯಕರ್ತರು ನಗರಸಭೆ ಮತ್ತು ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ಕೈಬಿಡುವಂತೆ ಆಗ್ರಹಿಸಿದರು. ಇದೇ ವೇಳೆ ನಗರಸಭೆ ಕಛೇರಿ ಒಳಗೆ ನುಗ್ಗಲು ಮುಂದಾದ ಮುಖಂಡರು ಮತ್ತು ಕಾರ್ಯಕರ್ತರನ್ನು ತಡೆದ ಪೊಲೀಸರೊಂದಿಗೆ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿದರು.
ಸ್ಥಳಕ್ಕಾಗಮಿಸಿದ ಪೌರಾಯುಕ್ತ ಬಿ.ಸಿ.ಬಸವರಾಜ್ ಅವರೊಂದಿಗೆ ವಾಗ್ವಾದ ನಡೆಸಿದ ಪ್ರತಿಭಟನಾಕಾರರು ನಗರದ ಎಲ್ಲಾ ರಸ್ತೆಗಳೂ ಗುಂಡಿ-ಗೊಟರಿನಿಂದ ಕೂಡಿದ್ದರೂ ಅತ್ತ ತಿರುಗಿ ನೋಡದ ನಗರಸಭೆ ಕಂದಾಯ ಹೆಚ್ಚಳ ಕಸದ ಗಾಡಿಯ ಶುಲ್ಕ ಹೆಚ್ಚಳ ಸೇರಿದಂತೆ ಅನೇಕ ಜನವಿರೋಧಿ ನೀತಿಗಳ ಮೂಲಕ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಕೊರೊನಾ ಲಾಕ್ಡೌನ್ನಿಂದಾಗಿ ಕಳೆದ ಎರಡು ವರ್ಷಗಳಿಂದ ನಗರದ ವರ್ತಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇದೀಗ ಎಂ.ಜಿ.ರಸ್ತೆಯಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಿದರೆ ಮೊದಲೇ ವ್ಯಾಪಾರವಿಲ್ಲದೇ ಕಂಗೆಟ್ಟಿರುವ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೀದಿಗೆ ಬೀಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆಡಳಿತ ಮಂಡಳಿ ಇಲ್ಲದಿದ್ದರೂ ಪಾರ್ಕಿಂಗ್ ಶುಲ್ಕ ವಿಧಿಸುವ ಬಗ್ಗೆ ಏಕಾಏಕಿ ನಿರ್ಧಾರ ಮಾಡುವ ಮೂಲಕ ನಗರಸಭೆ ಗೂಂಡಾಗಿರಿ ಮಾಡುತ್ತಿದೆ ಎಂದು ಆರೋಪಿಸಿದ ಮುಖಂಡರು ನಗರದ ಅನೇಕ ರಸ್ತೆಗಳಲ್ಲಿ ಇಲ್ಲದಿರುವ ಬೀದಿ ದೀಪಗಳನ್ನು ಹಾಕಲು ಇನ್ನೂ ಎಷ್ಟು ವರ್ಷ ಬೇಕು ಎಂದು ಆಯುಕ್ತರನ್ನು ಪ್ರಶ್ನಿಸಿದರು.
ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ ನಗರದಲ್ಲಿ ಇದೀಗ ನಡೆಯುತ್ತಿರುವ ಯುಜಿಡಿ ಕಾಮಗಾರಿ ಮುಗಿದ ನಂತರ ರಸ್ತೆ ಸರಿಪಡಿಸುವುದು ಸೇರಿದಂತೆ ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಲಾಗುವುದು. ಬೀದಿ ದೀಪಗಳಿಗೆ ಎಲ್ಇಡಿ ಲೈಟ್ಗಳನ್ನು ಅಳವಡಿಸಲಾಗುವುದು ಎಂದರು.
ನ.೧ ರಿಂದ ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ಶಾಸಕರ ಸೂಚನೆ ಮೇರೆಗೆ ಮುಂದೂಡಲಾಗಿದ್ದು ವ್ಯಾಪಕ ಚರ್ಚೆ ನಂತರ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇನಳ್ಳಿ ಪ್ರಕಾಶ್, ಉಪಾಧ್ಯಕ್ಷರಾದ ಬಲರಾಮ್, ದಿನೇಶ್ ಮತ್ತಾವರ, ಕಾರ್ಯದರ್ಶಿ ಸೋಮಶೇಖರ್, ಕಾಂಗ್ರೆಸ್ ಕಿಸಾನ್ ಸೆಲ್ನ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್, ರಾಜ್ಯ ಕಾರ್ಯದರ್ಶಿ ಆದಿತ್ಯಗೌಡ, ರಿಜ್ವಾನ್, ಜಬ್ಬಿ, ಜಮೀರ್, ನೂರ್ ಅಹ್ಮದ್, ಸಾದಿಕ್, ಎನ್.ಎಸ್.ಯು.ಐ. ಅಧ್ಯಕ್ಷ ಆದಿಲ್, ಪ್ರಶಾಂತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

























Discussion about this post