ಚಿಕ್ಕಮಗಳೂರು: ಮತಾಂತರ ಎನ್ನುವುದು ಹಿಂದೂ ಸಮಾಜಕ್ಕೆ ಬೆಟ್ಟದ ರೀತಿಯ ಸಮಸ್ಯೆಯಾಗಿದೆ ಈ ಹಿನ್ನೆಲೆಯಲ್ಲಿ ಸರ್ಕಾರ ಇದೇ ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರಬೇಕು ಎಂದು ಬಜರಂಗದಳ ಕ್ಷೇತ್ರೀಯ ಸಂಘಟನಾ ಸಂಚಾಲಕ ಸೂರ್ಯನಾರಾಯಣ್ ಆಗ್ರಹಿಸಿದರು.
ಅವರು ದತ್ತಪೀಠದಲ್ಲಿ ದತ್ತ ಜಯಂತಿ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿ
ರಾಜ್ಯದ ಗ್ರಾಮ ಗ್ರಾಮಗಳಲ್ಲಿ ಹಿಂದೂಗಳನ್ನು ಮತಾಂತರಗೊಳಿಸುವ ಕೆಲಸ ನಡೆಯುತ್ತಿದೆ. ಹೀಗೆ ಮುಂದುವರಿದಲ್ಲಿ ಮುಂದೆ ಗ್ರಾಮಗಳಲ್ಲಿ ಹಿಂದುತ್ವದ ಸಂಸ್ಕೃತಿಯನ್ನು ಕಾಣಲೇ ಸಾಧ್ಯವಿರುವುದಿಲ್ಲ ಎಂದು ಎಚ್ಚರಿಸಿದರು.
ಹಿಂದೂಗಳು ಇಲ್ಲವಾದರೆ ಸುರಕ್ಷೆ ಇರುವುದಿಲ್ಲ. ಅಕ್ಕ, ತಮ್ಮ, ಗುಡಿ, ಗುಂಡಾರಗಳು ಉಳಿಯಲು ಸಾಧ್ಯವಿಲ್ಲ. ಗ್ರಾಮಕ್ಕೆ ಗ್ರಾಮಗಳೇ ಮತಾಂತರಗೊಳ್ಳುತ್ತಿವೆ. ಮನೆಗೊಂದು ಬೈಬಲ್, ಗ್ರಾಮಕ್ಕೊಂದು ಪ್ರಾರ್ಥನಾ ಮಂದಿರ ಎನ್ನುವ ಹುನ್ನಾರವನ್ನು ಮುಂದಿಟ್ಟುಕೊಂಡು ಮತಾಂತರ ನಡೆಯುತ್ತಿದೆ. ಇದರಿಂದ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಬಜರಂಗದಳ-ವಿಶ್ವಹಿಂದೂ ಪರಿಷತ್ ಸಂಘಟನೆಗಳು ಲವ್ ಜಿಹಾದ್, ಗೋಹತ್ಯೆ, ಮತಾಂತರ, ಲ್ಯಾಂಡ್ ಜೆಹಾದ್ನಂತಹ ಸಂಚಿನ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಹೇಳಿದರು. ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಕೆಲವೇ ದಿನಗಳಲ್ಲಿ ಆಗಬಹುದು ಎನ್ನುವ ವಿಶ್ವಾಸದಲ್ಲಿ ನಾವಿದ್ದೇವೆ. ಮುಜರಾಯಿ ದೇವಸ್ಥಾನದಲ್ಲಿ ಅನ್ಯಧರ್ಮದವರು ಪೂಜೆ ಮಾಡಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಕೋರ್ಟ್ ಹಾಗೂ ಸರ್ಕಾರಗಳೂ ಸಹ ಚಿಂತಿಸುತ್ತಿವೆ ಎಂದು ಹೇಳಿದರು.
ದತ್ತಪೀಠದ ಹಿಂದೂಗಳದ್ದು ಎಂದು ವಿಶ್ವಹಿಂದೂ ಪರಿಷತ್ ಬಜರಂಗದಳ ೨೫ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿವೆ. ಇದರ ಪರಿಣಾಮ ವರ್ಷದಲ್ಲಿ ಒಂದು ದಿನ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂಗಳು ಆಗಮಿಸಿ ದತ್ತ ಜಯಂತಿ ಆಚರಿಸುವಂತಾಗಿದೆ. ಈ ಹಿಂದೆ ಇಲ್ಲಿಗೆ ಪ್ರತಿ ದಿನವೂ ರಾಜ್ಯದ ಇತರೆ ತೀರ್ಥಕ್ಷೇತ್ರಗಳಂತೆ ಹಿಂದೂಗಳು ಪ್ರತಿದಿನ ಬರುತ್ತಿದ್ದರು. ಕ್ರಮೇಣ ಇಸ್ಲಾಮಿಕರಣಗೊಂಡ ಕಾರಣ ಅದಕ್ಕೆ ತೊಡಕಾಗಿದೆ. ಮುಂದೆ ಪ್ರತಿ ದಿನವೂ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂಗಳು ಇಲ್ಲಗೆ ಭೇಟಿ ಕೊಡುವಂತಾಗಬೇಕು ಎಂದರು.
ದತ್ತಪೀಠದ ಆವರಣದಲ್ಲಿರುವ ಗೋರಿಗಳು ಯಾರದ್ದೆಂದು ಯಾರಿಗೂ ಗೊತ್ತಿಲ್ಲ. ನಾಲ್ಕು ವೇದಗಳು ಪಠಣಗೊಳ್ಳುತ್ತಿದ್ದ ಪೀಠಗಳು ಈಗ ದರ್ಗಾ ಆಗಿ ಪರಿವರ್ತನೆ ಆಗಿದೆ. ಸರ್ಕಾರದ ದಾಖಲೆಗಳಲ್ಲೂ ಬಾಬಾಬುಡನ್ ಗಿರಿ ಎಂದು ಎಲ್ಲಿಯೂ ಇಲ್ಲ. ಈ ಸ್ಥಳವನ್ನು ಇಸ್ಲಾಮೀಕರಣಗೊಳಿಸುವ ಷಡ್ಯಂತ್ರದಿಂದಾಗಿಯೇ ಗೋರಿಗಳನ್ನು ನಿರ್ಮಿಸಲಾಗಿದೆ ಎಂದು ದೂರಿದರು.
ದತ್ತಪೀಠದಲ್ಲಿ ಹಿಂದೆ ತ್ರಿಕಾಲ ಪೂಜೆ ನಡೆಯುತ್ತಿತ್ತು. ಪೀಠದಲ್ಲೊಂದು ಗಂಧದ ಬಾವಿ ಇತ್ತು. ಅದಕ್ಕೆ ಶ್ರೇಷ್ಠ ಗುಣ ಇತ್ತು. ಅದರಲ್ಲಿನ ನೀರು ಅಮೃತಕ್ಕೆ ಸಮಾನವಾಗಿತ್ತು. ೨೫೦ ಎಕರೆಗೂ ಹೆಚ್ಚು ಭೂಮಿಯನ್ನು ರಾಜ ಮಹರಾಜರು ಉಂಬಳಿಯಾಗಿ ಬಿಟ್ಟುಕೊಟಿದ್ದರು. ಹೈದರಾಲಿ ನಂತರ ಟಿಪ್ಪು ಸುಲ್ತಾನ್ ಆಡಳಿತದಲ್ಲಿ ಇದನ್ನು ಇಸ್ಲಾಮಿಕರಣಗೊಳಿಸುವ ಷಡ್ಯಂತ್ರ ಪ್ರಾಂರಭವಾಯಿತು ಎಂದರು.
ಧಾರ್ಮಿಕ ಸಭೆಯಲ್ಲಿ ಮಾಚಗೊಂಡನಹಳ್ಳಿ ಬೇರುಗಂಡಿ ಬೃಹ್ನಮಠದ ಶ್ರೀ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ, ತರೀಕೆರೆ ನಂದಿ ಮಠದ ಶ್ರೀ ವೃಷಭಲಿಂಗ ಮಹಾ ಸ್ವಾಮೀಜಿ, ಕಡೂರು ಎಳನಡು ಮಠದ ಜ್ಞಾನ ಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಹುಲಿಕೆರೆ ಶ್ರೀ ಅಮೃತಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೀರೂರು ಬಾಳೆಹೊನ್ನೂರು ಶಾಖಾ ಮಠದ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು.
Prohibition of Conversion Act Passed
Discussion about this post