ಚಿಕ್ಕಮಗಳೂರು : ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದ ವತಿಯಿಂದ ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಡಿಸೆಂಬರ್ ೨ರಂದು ಪಿಆರ್ಟಿ ಕಲಾ ಪ್ರಶಸ್ತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವೂ ಹಿರಿಯ ಕಲಾವಿದ ಪಿ.ಆರ್.ತಿಪ್ಪೇಸ್ವಾಮಿ ಅವರನ್ನು ಸ್ಮರಿಸುವ ನಿಟ್ಟಿನಲ್ಲಿ ನವೆಂಬರ್ ೩೦ರಿಂದ ಡಿಸೆಂಬರ್ ೨ ರವರೆಗೆ ಒಟ್ಟು ಮೂರು ದಿನಗಳ ಕಾಲ ನಗರದ ಜಿಲ್ಲಾ ಆಟದ ಮೈದಾನದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಸಂಭ್ರಮ ಮತ್ತು ಪಿ.ಆರ್.ಟಿ ಕಲಾ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಿಪ್ಪೇಸ್ವಾಮಿ ಅವರು ನಾಡು ಕಂಡ ಅಪ್ರತಿಮ ಕಲಾವಿದರು. ಕರ್ನಾಟಕ ಚಿತ್ರಕಲೆಯ ಸರ್ವತೋಮುಖ ಬೆಳವಣಿಗೆಗೆ ದುಡಿದ ಹಿರಿಯ ಚೇತನ. ಮೈಸೂರನ್ನು ತಮ್ಮ ಕಾರ್ಯ ಕ್ಷೇತ್ರವಾಗಿಸಿಕೊಂಡು ಚಿತ್ರಕಲೆ, ಸಾಹಿತ್ಯ, ಜಾನಪದ, ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನನ್ಯವಾದ ಸೇವೆ ನೀಡಿದ್ದಾರೆ. ಅವರ ಗೌರವಾರ್ಥವಾಗಿ ಈ ಬಾರಿ ಹಿರಿಯ ಚಿತ್ರಕಲಾವಿದರು ಹಾಗೂ ಹಿರಿಯ ಜನಪದ ಕಲಾವಿದರು ಒಟ್ಟು ಇಬ್ಬರಿಗೆ ಪಿ.ಆರ್.ಟಿ. ಕಲಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಮೊದಲ ದಿನ ನ. ೩೦ ರಂದು ರಾಜ್ಯಮಟ್ಟದ ೯೯ ಹಿರಿಯ ಕಲಾವಿದರಿಂದ ಹಾಗೂ ೯೯ ಕಿರಿಯ ಕಲಾವಿದರಿಂದ ಆನ್ಲೆöÊನ್ ಮೂಲಕ ಚಿತ್ರಕಲಾ ಪ್ರದರ್ಶನ, ಕಾರ್ಯಾಗಾರ ನಡೆಯಲಿದೆ, ಡಿ.೧ ರಂದು ೧೦೦೦ಕ್ಕೂ ಹೆಚ್ಚು ಪ್ರೌಢಶಾಲಾ ಹಾಗೂ ಕಾಲೇಜು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಕಲೆ ಸಾಹಿತ್ಯ ಸಾಮಾಜಿಕ ಹಾಗು ಜಾನಪದ ಕ್ಷೇತ್ರಕ್ಕೆ ಕೊಡುಗೆ ಕುರಿತಂತೆ ವಿಚಾರ ಸಂಕಿರಣ, ಪಿ.ಆರ್.ತಿಪ್ಪೇಸ್ವಾಮಿ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮ ಜರುಗಲಿದೆ, ಡಿ.೨ ರಂದು ಸಂಜೆ ೩.೩೦ ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.
ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಹಿರೇಮಗಳೂರು ಕಣ್ಣನ್, ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಲಲಿತಕಲಾ ಅಕಾಡೆಮಿ ಅಧ್ಯಕ್ಷರು, ಕಲಾವಿದರು ಸಾಹಿತಿಗಳು ಜಾನಪದ ವಿದ್ವಾಂಸರು, ಜಿಲ್ಲೆಯ ಎಲ್ಲಾ ಅಧಿಕಾರಿ ವರ್ಗ ಭಾಗವಹಿಸಲಿದೆ ಎಂದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿಆರ್ ತಿಪ್ಪೇಸ್ವಾಮಿ ಅವರು ಕಟ್ಟಿದ ಜಾನಪದ ವಸ್ತುಸಂಗ್ರಹಾಲಯ ಅಂತರಾಷ್ಟ್ರೀಯ ಮನ್ನಣೆ ಪಡೆಯಿತು, ಚಿತ್ರದುರ್ಗದ ಬೃಹನ್ಮಠ, ಧರ್ಮಸ್ಥಳದ ಮಂಜೂಷ ಮೊದಲಾದ ಮ್ಯೂಸಿಯಂಗಳ ಸ್ಥಾಪನೆಗೆ ಶ್ರಮಿಸಿದ್ದಾರೆ. ಕಲಾಲೋಕದ ಕ್ರಿಯಾಶೀಲರಾದ ಇವರನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿತ್ತು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನದ ಖಜಾಂಚಿ ಪರಮೇಶ್ವರಯ್ಯ, ಕಾರ್ಯದರ್ಶಿ ಮಹದೇವಶೆಟ್ಟಿ, ಸದಸ್ಯ ಚಂದ್ರಶೇಖರ್, ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ವಿಶ್ವಕರ್ಮ ಆಚಾರ್ಯ ಉಪಸ್ಥಿತರಿದ್ದರು.
Discussion about this post