ಚಿಕ್ಕಮಗಳೂರು : ೨೦೨೧-೨೨ ನೇ ಸಾಲಿನ ಮುಂಗಾರು ಋತುವಿನಲ್ಲಿ ಕೇಂದ್ರ ಸರಕಾರವು ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಬೆಂಬಲ ಬೆಲೆಯನ್ನು ನಿಗದಿಪಡಿಸಿದ್ದು ರೈತರು ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸುವಂತೆ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿ ತಮ್ಮ ಕಚೇರಿಯಲ್ಲಿ ಸಭಾಂಗಣದಲ್ಲಿ ಈ ಸಂಬAಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಭತ್ತ ಖರೀದಿಸುವ ಕೇಂದ್ರಗಳನ್ನು ಮೂಡಿಗೆರೆ. ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಹಾಗೂ ಲಕ್ಕವಳ್ಳಿಯಲ್ಲಿ ಪ್ರಾರಂಭಿಸಿ, ರೈತರ ನೋಂದಣಿ ಪ್ರಕ್ರಿಯೆ ನಿರ್ವಹಿಸಲಾಗುವುದು. ಡಿಸೆಂಬರ್ ೧೦ ರಿಂದ ರೈತರು ನೋಂದಣಿ ಮಾಡಬಹುದಾಗಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಪಿ.ಆರ್. ಕೃಷ್ಣಮೂರ್ತಿ ಮಾತನಾಡಿ, ಕೇಂದ್ರ ಸರ್ಕಾರವು ಸಾಮಾನ್ಯ ಭತ್ತಕ್ಕೆ ಪ್ರತೀ ಕ್ವಿಂಟಾಲ್ಗೆ ರೂ. ೧೯೪೦ ಹಾಗೂ ‘ಎ’ಗ್ರೇಡ್ ಭತ್ತಕ್ಕೆ ಪ್ರತೀ ಕ್ವಿಂಟಾಲ್ಗೆ ರೂ. ೧೯೬೦ ಬೆಂಬಲ ಬೆಲೆ ನಿಗದಿಪಡಿಸಿದೆ. ಕೃಷಿ ಇಲಾಖೆಯು ಒದಗಿಸಿರುವ ಸರಾಸರಿ ಬೆಳೆ ಮಾಹಿತಿಗಳನ್ವಯ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಿರುವ ರೈತರಿಂದ ಭತ್ತವನ್ನು ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳಿ ಮೂಲಕ ಖರೀದಿಸಿ ಸಂಗ್ರಹಿಸಲಾಗುವುದು ಎಂದರು.
ರೈತರಿಂದ ಅಗತ್ಯ ದಾಖಲಾತಿಗಳನ್ನು ಪಡೆದು, ಸರಕಾರದ ನಿಗದಿತ ಮಾನದಂಡ ಅನುಸಾರ ಭತ್ತ ಖರೀದಿ ಪ್ರಕ್ರಿಯೆ ನಿರ್ವಹಿಸಲಾಗುವುದು. ರೈತರು ಹೆಚ್ಚಿನ ಮಾಹಿತಿಗಳಿಗೆ ಆಹಾರ ಇಲಾಖೆ ದೂರವಾಣಿ ಸಂಖ್ಯೆ- ೦೮೨೬೨ ೨೩೭೭೧೫, ಕೃಷಿ ಇಲಾಖೆ- ೦೮೨೬೨ ೨೨೦೫೨೬, ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳಿ -೦೮೨೬೨ ೨೯೫೬೨೩ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್, ಎಪಿಎಂಸಿ ಸಹಾಯಕ ನಿರ್ದೇಶಕ ಬಿ.ಆರ್. ಶ್ರೀಹರಿ ಮತ್ತಿತರರು ಇದ್ದರು.
Purchase of paddy at minimum support price
Discussion about this post