ಚಿಕ್ಕಮಗಳೂರು: ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಅಂಗನವಾಡಿ ಕೇಂದ್ರಗಳು ಸೋಮವಾರದಿಂದ ಮರು ಆರಂಭಗೊಂಡಿದ್ದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಸಾಂಕೇತಿಕವಾಗಿ ಕೇಕ್ ಕತ್ತರಿಸಿ, ಮಕ್ಕಳಿಗೆ ಹೂ ಗುಚ್ಚ ನೀಡುವ ಮೂಲಕ ಸ್ವಾಗತ ನೀಡಿದರು.
ಕಲಿಕೆಯ ಜತೆಗೆ ಕ್ರೀಡೆ, ಮನರಂಜನೆ ಇಲ್ಲದೇ ಮಾನಸಿಕವಾಗಿ ಕುಗ್ಗಿದ್ದ ಚಿಣ್ಣರಿಗೆ ಅಂಗನವಾಡಿ ಮರು ಆರಂಭ ಉತ್ಸಾಹ ಹೆಚ್ಚಿಸಿದ್ದು ಲವಲವಿಕೆಯಿಂದ ಎಲ್ಲಾ ಮಕ್ಕಳು ತಮ್ಮ ಪೋಷಕರೊಂದಿಗೆ ಹತ್ತಿರದ ಅಂಗನವಾಡಿ ಕೇಂದ್ರಗಳಿಗೆ ತೆರಳುವ ಮೂಲಕ ಸಂಭ್ರಮಿಸಿ ಖುಷಿ ಪಟ್ಟರು.
ಈ ಸಂಬಂಧ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಸಂಯುಕ್ತಾಶ್ರದಲ್ಲಿ ನಗರದ ಹೌಸಿಂಗ್ ಬೋರ್ಡ್್ನಲ್ಲಿ ಆಯೋಜಿಸಿದ್ದ ಅಂಗನವಾಡಿ ಕೇಂದ್ರಗಳ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಉದ್ಘಾಟಿಸಿ ಮಾತನಾಡಿದ ಅವರು ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಕಾರಣದಿಂದಾಗಿ ಅಂಗನವಾಡಿ ಮಕ್ಕಳು ಯಾವುದೇ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಿಲ್ಲದೇ ಕಲಿಕೆಯಿಂದಲೂ ವಂಚಿತರಾಗಿದ್ದರು, ಮಾನಸಿಕವಾಗಿಯೂ ಕುಗ್ಗಿದ್ದರು ಸ್ಥಗಿತಗೊಂಡಿದ್ದ ಅಂಗನವಾಡಿ ಕೇಂದ್ರಗಳು ಇದೀಗ ಪುನರ್ ಆರಂಭಗೊಂಡಿದ್ದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ರಾಜ್ಯದೆಲ್ಲೆಡೆ ಕೋವಿಡ್ ಸೋಂಕಿನ ಪ್ರಮಾಣ ನಿಯಂತ್ರಣದಲ್ಲಿದ್ದು, ಶಾಲಾ, ಕಾಲೇಜು ಒಳಗೊಂಡಂತೆ ಭೌತಿಕ ತರಗತಿಗಳನ್ನು ಹಂತ- ಹಂತವಾಗಿ ಆರಂಭಿಸಲಾಗಿದೆ, ಇದೀಗ ಸರ್ಕಾರದ ನಿರ್ದೇಶನ ಹಾಗೂ ಮಾರ್ಗಸೂಚಿಯಂತೆ ಅಂಗನವಾಡಿ ಕೇಂದ್ರಗಳನ್ನು ಮರು ಆರಂಭಿಸಿದ್ದು ಆಟ, ಪಾಠ, ಕಲಿಕೆಯ ಜತೆಗೆ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಮಾತನಾಡಿ ಕಳೆದ ಒಂದೂವರೆ ವರ್ಷದಿಂದ ಮಕ್ಕಳು ಕಲಿಕೆಯಿಂದ ಸಂಪೂರ್ಣ ವಂಚಿತರಾಗಿದ್ದರು. ಅದರ ನಡುವೆಯೂ ಅಲ್ಪ ಪ್ರಮಾಣದಲ್ಲಿ ಆನ್ಲೈನ್ ಕಲಿಕೆಗೆ ಆದ್ಯತೆ ನೀಡಲಾಗಿತ್ತು, ಇದೀಗ ಕೊರೋನಾ ಪ್ರಮಾಣ ಕಡಿಮೆ ಇರುವ ಹಿನ್ನಲೆ ಅಂಗನವಾಡಿ ಕೇಂದ್ರಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ ಎಂದರು.
ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಲಾಗಿದ್ದು ಸಂಪೂರ್ಣ ಸ್ವಚ್ಚತೆ ಮಾಡಲಾಗಿದೆ, ಜತೆಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದುಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಅಂಗನವಾಡಿ ಸುತ್ತಮುತ್ತಲಿನ ಪರಿಸರ ಸ್ವಚ್ಚತೆಗೆ ಸಾರ್ವಜನಿಕರು, ಪೋಷಕರ ಸಹಭಾಗಿತ್ವ ಅಗತ್ಯವಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಕವಿತಾಶೇಖರ್ ಮಾತನಾಡಿ ಸರ್ಕಾರದ ನಿಯಮಾನುಸಾರ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳ ತರಗತಿ ಮರು ಆರಂಭಗೊಂಡಿದ್ದು ಚಿಣ್ಣರಲ್ಲಿ ಉತ್ಸಾಹ ತಂದಿದೆ. ಕಾರ್ಯಕರ್ತೆಯರು, ಸಹಾಯಕಿಯರು ಮಕ್ಕಳ ಕಲಿಕೆ ಅಗತ್ಯವಿರುವ ಶಿಕ್ಷಣಕ್ಕೆ ಗಮನಹರಿಸಬೇಕು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ಗರ್ಭಿಣಿ, ಬಾಣಂತಿಯರು, ಮಕ್ಕಳು ಒಳಗೊಂಡಂತೆ ಸರ್ಕಾರ ನೀಡುತ್ತಿರುವ ಎಲ್ಲಾ ವಿಧವಾದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ಪೂರೈಕೆ ಮಾಡುವಂತೆ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಾರಾನಾಥ್ ಮಾತನಾಡಿ ಕಳೆದ ಒಂದೂವರೆ ವರ್ಷದಿಂದ ಅಂಗನವಾಡಿ ಕೇಂದ್ರಗಳು ಆರಂಭಗೊಂಡಿಲ್ಲ ಆದ್ದರಿಂದ ಅಲ್ಲಿನ ಕಟ್ಟಡ ದುರಸ್ಥಿ, ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಕೈತೋಟ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಜಿ.ಪಂ ಸಿಇಒ ಸೂಚನೆ ನೀಡಿದ್ದರು ಅದರಂತೆ ಕ್ರಿಯಾ ಯೋಜನೆ ಸಿದ್ದಪಡಿಸಿ ಅಂಗನವಾಡಿ ಕೇಂದ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.
ಸಾಂಪ್ರಾದಾಯಿಕ ಶಿಕ್ಷಣ ಪದ್ದತಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ, ಅಂಗನವಾಡಿ ಕೇಂದ್ರಗಳಲ್ಲಿ ಚಟುವಟಿಕೆ ಆಧಾರಿತ ಶಿಕ್ಷಣದ ಮೂಲಕ ಮಕ್ಕಳ ಕಲಿಕೆಯನ್ನು ಉತ್ತಮಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಪೋಷಣಾ ಅಭಿಯಾನದ ಅಂಗವಾಗಿ ಗರ್ಭಿಣಿಯರಿಗೆ ಇಲಾಖೆ ವತಿಯಿಂದ ಸಾಂಪ್ರದಾಯಿಕವಾಗಿ ಸೀಮಂತ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಹೆಚ್. ಕೃಷ್ಣಪ್ಪ ಎಲ್ಲರನ್ನು ಸ್ವಾಗತಿಸಿದರು. ದೀಪಾ ನಿರೂಪಿಸಿ, ರಂಗನಾಥ್, ವಂದಿಸಿದರು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಸೇರಿದಂತೆ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Anonymous complaint: ರಾಜ್ಯ ಸರ್ಕಾರಿ ನೌಕರರ ವಿರುದ್ಧದ ಅನಾಮಧೇಯ ದೂರುಗಳ ಪರಿಗಣನೆ ಇಲ್ಲ..!
Discussion about this post