ಚಿಕ್ಕಮಗಳೂರು: ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯಕ್ಕೆ ಈ ಹಿಂದಿನಂತೆ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಉಪವಿಭಾಗಾಧಿಕಾರಿ ಹೆಚ್.ಎಲ್. ನಾಗರಾಜ್ ಅವರ ಮೂಲಕ ಮನವಿ ಸಲ್ಲಿಸಿದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ವಸಂತ್ಕುಮಾರ್ ಸಿ. ಮಾತನಾಡಿ ರಾಜ್ಯದಲ್ಲಿನ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ವಿವಿಧ ಸವಲತ್ತುಗಳು ಅರ್ಹರಿಗೆ ದೊರೆಯಲಿ ಜತೆಗೆ ಕಾರ್ಮಿಕರ ಹಿತರಕ್ಷಣೆ ನಿಟ್ಟಿನಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯನ್ನು ರಚಿಸಿ ಮಂಡಳಿ ಅಧೀನದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಕಟ್ಟಡ ಮಾಲೀಕರ ಸೆಸ್ ಮುಖಾಂತರ ಸಂಗ್ರಹಿಸಿ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ಶ್ರಮ ಸಾಮರ್ಥ್ಯ, ಕಟ್ಟಡ ಕಟ್ಟಲು ಸಹಾಯ, ಹೆರಿಗೆ ಸೌಲಭ್ಯ, ಶೈಕ್ಷಣಿಕ ಧನ ಸಹಾಯ, ಅಪಘಾತ, ಪರಿಹಾರ ವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಾ ಬಂದಿದೆ.
ಆದರೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಪ್ರಸ್ತುತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಶೈಕ್ಷಣಿಕ ಧನ ಸಹಾಯದ ಅರ್ಜಿಯನ್ನು ಎಸ್.ಎಸ್.ಪಿ ಅಡಿಯಲ್ಲಿ ತಂದಿದ್ದು ಇದರಿಂದ ತಾಂತ್ರಿಕ ಸಮಸ್ಯೆಗಳ ಜತೆಗೆ ಸಾಕಷ್ಟು ಗೊಂದಲದಿಂದಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಿದ್ದು ಜಿಲ್ಲೆಯಲ್ಲಿ ಯಾವುದೇ ಅರ್ಜಿಗಳು ಸಲ್ಲಿಕೆಯಾಗಿಲ್ಲ, ಈ ಕಾರಣದಿಂದಾಗಿ ಎಸ್.ಎಸ್.ಪಿಯನ್ನು ರದ್ದುಗೊಳಿಸಿ ಈ ಹಿಂದಿನಂತೆ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಯಕುಮಾರ್, ಮಂಜೇಗೌಡ, ಶಾಂತಕುಮಾರ್, ದಯಾಕ್ಷಿ, ಮಂಜುಳಾ, ಶ್ರೀಧರ್ ಇದ್ದರು.
Discussion about this post