ಚಿಕ್ಕಮಗಳೂರು: ಮಾತೃಭಾಷೆ ಕನ್ನಡದಲ್ಲಿ ವಿಜ್ಞಾನ ಕಲಿಕೆಯಾದಾಗ ವಿಷಯ ಸರಳೀಕರಣದ ಜೊತೆಗೆ ಹೊಸ ಸಂಶೋಧನೆಗೆ ದಾರಿಯಾಗಲಿದೆ ಎಂದು ಕುವೆಂಪು ವಿವಿ ಶಿಕ್ಷಣ ಮಂಡಳಿ ಸದಸ್ಯ ಬಿ. ಕುಮಾರೇಗೌಡ ಅಭಿಪ್ರಾಯಿಸಿದರು.
ನಗರದ ಎಂ.ಎಲ್.ಎಂ.ಎನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಆಯೋಜಿಸಿದ್ದ ಕುವೆಂಪು ವಿವಿ ಮಟ್ಟದ ಕನ್ನಡದಲ್ಲಿ ವಿಜ್ಞಾನ ಉಪನ್ಯಾಸ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಎಂಬುದು ಹೊಸ ಸಂಶೋಧನೆಗಳ, ಆವಿಷ್ಕಾರಗಳ ಪ್ರತಿರೂಪವಿದ್ದಂತೆ. ವಿಜ್ಞಾನ ಪಠ್ಯದ ಕಲಿಕೆಯು ಕನ್ನಡದಲ್ಲಿ ಇದ್ದಾಗ ವಿಷಯವನ್ನು ಸರಳವಾಗಿ ಗ್ರಹಿಸುವುದರ ಜತೆಗೆ ಹೊಸ ಆವಿಷ್ಕಾರಗಳಿಗೆ ನಾಂದಿಯಾಗಲಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತು ಎಲ್ಲಾ ಮಾದರಿಯ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ವಿಜ್ಞಾನ ಉಪನ್ಯಾಸ ಸ್ಪರ್ಧೆ ಆಯೋಜಿಸಿರುವುದು ಖುಷಿಯ ಸಂಗತಿ ಎಂದರು.
ಮಾತೃಭಾಷೆಯಲ್ಲಿ ವಿಜ್ಞಾನ ಕಲಿಕೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವುದರ ಜೊತೆಗೆ ಸಾಧನೆಗೆ ಮುನ್ನುಡಿಯಾಗಲಿದೆ. ಕಾರ್ಯಕ್ರಮಗಳು ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಎ.ಎನ್.ಮಹೇಶ್ ಮಾತನಾಡಿ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ವಿಜ್ಞಾನ ಸಾಹಿತ್ಯವನ್ನು ಹೆಚ್ಚಿಸುವ ಜೊತೆಗೆ ಮಕ್ಕಳಲ್ಲಿ ಸಂಶೋಧನೆ, ಆವಿಷ್ಕಾರದ ಗುಣವನ್ನು ಬೆಳೆಸುವ ಸದುದ್ದೇಶದಿಂದ ಬಾಲವಿಜ್ಞಾನ ಎಂಬ ಮಾಸಿಕ ಕೈಪಿಡಿಗಳನ್ನು ಕಳೆದ ನಾಲ್ಕು ವರ್ಷಗಳಿಂದ ಹೊರತರುತ್ತಿದೆ ಎಂದರು.
ಆಂಗ್ಲಭಾಷೆಗಿಂತ ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಜೀವನಕ್ಕಾಗಿ ಎಲ್ಲಾ ಭಾಷೆಗಳನ್ನು ಕಲಿಯುವುದು ತಪ್ಪಲ್ಲ ಆದರೆ ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ಸಾಹಿತ್ಯ ಕಾರ್ಯಕ್ರಮಗಳನ್ನು ರೂಪಿಸುವುದರಿಂದ ಕನ್ನಡ ಮತ್ತಷ್ಟು ಉತ್ತುಂಗಕ್ಕೆ ತಲುಪಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕಳೆದ ೪೦ ವರ್ಷಗಳಿಂದ ವಿಜ್ಞಾನ ಪರಿಷತ್ತು ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿಕೊಂಡು ಹಲವು ವಿಧವಾದ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಹಕಾರ ಅತ್ಯಂತ ಅವಶ್ಯಕ ಎಂದರು.
ವಿಜ್ಞಾನ ಪರಿಷತ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಎಸ್.ಟಿ.ಸ್ವಾಮಿ ಪ್ರಾಸ್ತವಿಕವಾಗಿ ಮಾತನಾಡಿ ವಿಜ್ಞಾನವನ್ನು ಕನ್ನಡದ ಮೂಲಕ ಪ್ರತಿಯೊಬ್ಬ ಜನಸಾಮಾನ್ಯರಿಗೂ ಮುಟ್ಟಿಸಬೇಕು, ವಿಜ್ಞಾನವನ್ನು ಜನಪ್ರಿಯಗೊಳಿಸಬೇಕು ಎನ್ನುವ ಸದುದ್ದೇಶದಿಂದ ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸಿಕೊಂಡು ಬರಲಾಗುತ್ತಿದೆ ಎಂದರು.
ವಿಜ್ಞಾನ ಎಂಬುದು ನಿತ್ಯ ಜೀವನದಲ್ಲಿ ನಮ್ಮೆಲ್ಲರಿಗೂ ಹಾಸುಹೊಕ್ಕಾಗಿದ್ದು, ಆ ಬಗ್ಗೆ ಪ್ರತಿಯೊಬ್ಬರಿಗೂ ತಿಳುವಳಿಕೆ ಮೂಡಿಸಬೇಕು, ಜೊತೆಗೆ ಕನ್ನಡದ ಮೂಲಕ ವಿಜ್ಞಾನ ಕಲಿಕೆಯಾದಾಗ ಮತ್ತಷ್ಟು ಸರಳೀಕರಣದ ಜೊತೆಗೆ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲಿದೆ. ಹೊಸ ಸಂಶೋಧನೆ, ಕೌಶಲ್ಯಕ್ಕೆ ದಾರಿಯಾಗಲಿದೆ ಸುಮಾರು ರಾಜ್ಯದ ೭ ವಿಶ್ವವಿದ್ಯಾಲಯಗಳಲ್ಲಿ ಈ ಮಾದರಿಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಉಪನ್ಯಾಸ ಸ್ಪರ್ಧೆಯಲ್ಲಿ ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ಭೌತಶಾಸ್ತ್ರದಲ್ಲಿ ಎ.ಅಂಜಲಿ ಪ್ರಥಮ, ಎಲ್.ಎಸ್.ಶರತ್ ದ್ವಿತೀಯ, ರಸಾಯನಶಾಸ್ತ್ರದಲ್ಲಿ ಎಸ್.ಆರ್.ಜೀವನ್ ಪ್ರಥಮ, ಕೆ.ಎಲ್.ಪೂಜಾ ದ್ವಿತೀಯ, ಗಣಿತಶಾಸ್ತ್ರದಲ್ಲಿ ಎನ್.ಪ್ರತಿಮಾ ಪ್ರಥಮ, ಐಸಿರಿ ಹಿರೇಮಠ ದ್ವಿತೀಯ ಹಾಗೂ ಜೀವಶಾಸ್ತ್ರದಲ್ಲಿ ಎಸ್.ಜೆ.ರಕ್ಷ ಪ್ರಥಮ, ಎಂ.ಎಂ.ಆಶಿಕಾ ದ್ವೀತಿಯ ಗಳಿಸಿ ರಾಜ್ಯಮಟ್ಟದಲ್ಲಿ ನಡೆಯಲಿರುವ ಉಪನ್ಯಾಸ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ತೀರ್ಪುಗಾರರಾಗಿ ಸಹ ಪ್ರಾಧ್ಯಾಕರಾದ ಡಾ|| ಮೋಹನ್ಕುಮಾರ್ ಹಾಗೂ ಡಾ|| ಹನುಮಂತ ಮಕಾರಿ ಕಾರ್ಯನಿರ್ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಶಾಲೆ ಹೆಚ್.ಎಂ.ನೀಲಕಂಠಪ್ಪ ವಹಿಸಿದ್ದರು. ಎಂ.ಎಲ್.ಎಂ.ಎನ್. ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ|| ವಿಜಯಲಕ್ಷ್ಮೀ ದೇಸಾಯಿ, ಜಿಲ್ಲಾ ಸಮಿತಿ ಸದಸ್ಯ ಸದಾಶಿವಾ ಉಪಸ್ಥಿತರಿದ್ದರು. ವಿಜ್ಞಾನ ಪರಿಷತ್ ಸಂಯೋಜಕ ಟಿ.ತ್ಯಾಗರಾಜ್ ನಿರೂಪಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಜಿ.ಕೃಷ್ಣಮೂರ್ತಿ ರಾಜ್ ಅರಸ್ ಸ್ವಾಗತಿಸಿದರು. ವಿದ್ಯಾರ್ಥಿ ಕು.ರಕ್ಷಾ ಪ್ರಾರ್ಥಿಸಿದರು. ಶಿಕ್ಷಕ ಹೆಚ್.ಎಂ.ಓಂಕಾರಪ್ಪ ವಂದಿಸಿದರು.
Science Learning in Kannada
Discussion about this post