ಚಿಕ್ಕಮಗಳೂರು : ಜಿಲ್ಲೆ ಹಾಗೂ ತಾಲ್ಲೂಕಿನ ನಗರ ಕೇಂದ್ರಗಳಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಕೊಳಗೇರಿ ನಿವಾಸಿಗಳಿಗೆ ಮಂಜೂರಾಗಿರುವ ಮನೆಗಳನ್ನು ಉತ್ತಮ ಗುಣಮಟ್ಟದೊಂದಿಗೆ ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಶಾಸಕ ಸಿ.ಟಿ. ರವಿ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಅವರು ನಗರಸಭೆ ಕಛೇರಿಯಲ್ಲಿ ತರೀಕೆರೆ, ಕಡೂರು, ಬೀರೂರು ವಿಧಾನ ಸಭಾಕ್ಷೇತ್ರಗಳಲ್ಲಿ ಅನುಷ್ಠಾನದಲ್ಲಿರುವ ವಸತಿ ಯೋಜನೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿಕ್ಕಮಗಳೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೬ ಘೋಷಿತ ಕೊಳಚೆ ಪ್ರದೇಶಗಳಿದ್ದು, ತಾಲ್ಲೂಕಿಗೆ ೨೦೧೮-೧೯ ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಒಟ್ಟು ೨೮೦ ಮನೆಗಳು ಮಂಜೂರಾಗಿದ್ದವು. ಅವುಗಳ ಕಾಮಗಾರಿ ಪರಿಶೀಲನೆ ನಿಟ್ಟಿನಲ್ಲಿ ವಸತಿ ಸಚಿವರ ಸೂಚನೆ ಮೇರೆಗೆ ಕೊಳಗೇರಿ ಮಂಡಳಿ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದ್ದು ಈಗಾಗಲೇ ೮೪ ಮನೆಗಳು ಪೂರ್ಣಗೊಂಡಿದ್ದು ಉಳಿದ ಮನೆಗಳನ್ನು ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ವಿವಿಧ ವಸತಿ ಯೋಜನೆ ಅಡಿಯಲ್ಲಿ ಜಿಲ್ಲೆಗೆ ಹೊಸದಾಗಿ ೫೦೦ ಮನೆಗಳು ಮಂಜೂರಾಗಿದ್ದು ನಿರ್ಮಾಣಕ್ಕಾಗಿ ಎಜೆನ್ಸಿಯನ್ನು ನಿಗಧಿಗೊಳಿಸಲಾಗಿದೆ. ಸರ್ಕಾರ ಹಾಗೂ ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಮಾಜ ಕಲ್ಯಾಣ ಇಲಾಖೆ, ನೆರವಿನಿಂದ ಸುಸ್ಸಜ್ಜಿತ ಮನೆ ನಿರ್ಮಾಣಕ್ಕೆ ಕ್ರಮವಹಿಸಲಾಗಿದ್ದು ಈ ವಸತಿಗಳನ್ನು ೨೦೨೨ ಡಿಸೆಂಬರ್ ಅಂತ್ಯಗೊಳಗೆ ಕೈಗೆತ್ತಿಕೊಂಡಿರುವ ಮನೆ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ೬ ಘೋಷಿತ ಕೊಳಚೆ ಪ್ರದೇಶಗಳಿದ್ದು, ಜಾಗ ನೋಂದಣಿಯಾಗಿ ಹಕ್ಕುಪತ್ರ ಹೊಂದಿಲ್ಲದ ಫಲಾನುಭವಿಗಳಿಗೆ ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಮುಂದಿನ ತಿಂಗಳು ವಸತಿ ಸಚಿವರ ಮೂಲಕ ನಗಸಭೆಯಿಂದ ಹಕ್ಕುಪತ್ರಗಳನ್ನು ವಿತರಿಸಲು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯ ಕೊಳಗೇರಿ ಮಂಡಳಿ ಆಯುಕ್ತ ವೆಂಕಟೇಶ್ ಮಾತನಾಡಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಕೊಳಗೇರಿ ನಿವಾಸಿಗಳಿಗೆ ಮನೆಗಳು ಮಂಜೂರಾಗಿದ್ದು ಕಾಮಗಾರಿ ಪರಿಶೀಲನೆ ಸಂಬಂಧ ಭೇಟಿ ನೀಡಿ ಸಭೆ ನಡೆಸಲಾಗಿದೆ. ನಿಗಧಿತ ಕಾಲದೊಳಗೆ ಉತ್ತಮ ಗುಣಮಟ್ಟದೊಂದಿಗೆ ಮನೆ ನಿರ್ಮಾಣ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್, ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ನಗರಸಭೆ ಕಂದಾಯಾಧಿಕಾರಿ ಬಸವರಾಜ್, ಇಂಜಿನಿಯರ್ ಚಂದನ್, ರಶ್ಮಿ ಸೇರಿದಂತೆ ಮತ್ತಿತರರು ಇದ್ದರು.
Discussion about this post