ಚಿಕ್ಕಮಗಳೂರು: ನಗರಸಭೆ ದಲ್ಲಾಳಿಗಳ ಸಂತೆಯಾಗಿದ್ದು ಇದನ್ನು ತೊಲಗಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕಾಂಗ್ರೆಸ್ನ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ ಮತದಾರರಲ್ಲಿ ಮನವಿ ಮಾಡಿದರು.
ನಗರದ ಹಿರೇಮಗಳೂರಿನ ಮುತ್ತಿನಮ್ಮ ದೇವಾಲಯದ ಆವರಣದಲ್ಲಿ ವಾರ್ಡ್ನಂಬರ್ ೪ ರ ಅಭ್ಯರ್ಥಿ ಆಶಾಸುರೇಶ್ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
ನಗರಸಭೆಯಲ್ಲಿ ಹಕ್ಕುಪತ್ರ, ಕಟ್ಟಡ ನೊಂದಣಿ, ಸೇರಿದಂತೆ ಯಾವುದೇ ಸಾರ್ವಜನಿಕ ಕಾರ್ಯಗಳಿಗೆ ಲಂಚ ನೀಡಬೇಕಾದ ಅನಿವಾರ್ಯತೆ ಇದ್ದು, ಇದು ಸಂಪೂರ್ಣವಾಗಿ ದಲ್ಲಾಳಿಗಳ ಸಂತೆಯಾಗಿ ಮಾರ್ಪಟ್ಟಿದೆ, ಇಂತಹ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಲಗಿಸಲು ಕಾಂಗ್ರೆಸ್ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದರೆ ಮಾತ್ರ ಸಾಧ್ಯ ಆ ನಿಟ್ಟಿನಲ್ಲಿ ಹಿರೇಮಗಳೂರಿನ ಕಾಂಗ್ರೆಸ್ ಅಭ್ಯರ್ಥಿ ಆಶಾಸುರೇಶ್ ಅವರನ್ನು ಅತಿಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಕೇಳಿಕೊಂಡರು.
ನಗರದಲ್ಲಿ ಒಳಚರಂಡಿ, ಅಮೃತ್ ಯೋಜನೆಗಳು ಪೂರ್ಣಗೊಳ್ಳದಿದ್ದರೂ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಜಿಲ್ಲೆಗೆ ಆಹ್ವಾನಿಸಿ ಇಲ್ಲಿನ ಶಾಸಕರು ಉದ್ಘಾಟನೆ ಮಾಡಿಸಿದ್ದಾರೆ. ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ, ದಿನದ ೨೪ ಗಂಟೆ ಕಾಲ ನೀರು ಒದಗಿಸಲಾಗುತ್ತದೆ ಎನ್ನುವ ಅವರು ಇದುವರೆಗೂ ಹಿರೇಮಗಳೂರು ಸೇರಿದಂತೆ ಅನೇಕ ವಾರ್ಡ್ಗಳಿಗೆ ನೀರು ಪೂರೈಸಲು ಸಾಧ್ಯವಾಗಿಲ್ಲ ಎಂದು ದೂಷಿಸಿದರು.
ಕಾಂಗ್ರೆಸ್ ಪಕ್ಷ ಯಾವುದೇ ಜಾತಿ, ಧರ್ಮದ ಬೇದ ಭಾವ ಮಾಡದೇ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲರಿಗೂ ಅವಕಾಶ ನೀಡಿದೆ. ಕಾಂಗ್ರೆಸ್ ಅವಧಿಯಲ್ಲಿ ಹಿರೇಮಗಳೂರಲ್ಲಿ ಮೇಲ್ಸುತುವೆ ನಿರ್ಮಾಣ, ಸಮುದಾಯ ಭವನಕ್ಕೆ ಅನುದಾನ, ಕಾಂಕ್ರಿಟ್ ರಸ್ತೆ, ಹೈಮಾಸ್ಟ್ ವಿದ್ಯುತ್ ದೀಪಗಳ ಅಳವಡಿಕೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಈ ಭಾಗಕ್ಕೆ ಒದಗಿಸಲಾಗಿದೆ.
ಬಿಜೆಪಿಯದ್ದು ದುರಾಡಳಿತದ ನೀತಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಡ ಜನರ ಹಿತಕ್ಕಾಗಿ ಯಾರೊಬ್ಬರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಇಂದಿರಾಕ್ಯಾಂಟೀನ್ ಆರಂಭಿಸಿದರು, ಲಾಕ್ಡೌನ್ ಸಂದರ್ಭ ಸೇರಿದಂತೆ ಪ್ರತಿದಿನವೂ ಕೂಲಿಕಾರ್ಮಿಕರು, ಶಾಲಾ ಮಕ್ಕಳಿಗೆ ಅತ್ಯಂತ ಕಡಿಮೆ ದರದಲ್ಲಿ ಆಹಾರ ನೀಡುತ್ತಿದೆ. ಅದಕ್ಕೂ ಕಿಡಿ ಇಡುವ ಮೂಲಕ ಇಲ್ಲಿನ ಶಾಸಕರು ವಿರೋಧ ವ್ಯಕ್ತಪಡಿಸಿದ್ದರು, ಸಿದ್ಧರಾಮಯ್ಯ ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಪಡಿತರದಾರರಿಗೆ ಉಚಿತ ಪಡಿತರವನ್ನು ಘೋಷಿಸಿದರು, ಇದರಿಂದ ಜನತೆ ಸೋಮಾರಿಗಳಾಗುತ್ತಾರೆ, ಕೂಲಿಕಾರ್ಮಿಕರ ಕೊರತೆಯಾಗುತ್ತದೆ ಎಂದು ಬಿಜೆಪಿಗರು ಟೀಕಿಸಿದ್ದರು. ಅವರಿಗೆ ಗುಲಾಮಿ, ಜೀತಪದ್ಧತಿಯನ್ನು ಜೀವಂತವಾಗಿರಿಸುವ ಮನಸ್ಥಿತಿ ಎಂದು ಗುಡುಗಿದರು.
ನಗರಸಭೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಹಣದ ಲೂಟಿಯಾಗಿದೆ. ರಾಜ್ಯದ ಬೊಮ್ಮಾಯಿ ಕೂಡ ಬಿಎಸ್ಯಡಿಯೂರಪ್ಪ ಅವರು ಹಿತ್ತಾಳೆ ಕಿವಿಯಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಬದಲಾವಣೆ ತರುವ ನಿಟ್ಟಿನಲ್ಲಿ ನಗರದ ಜನತೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ವಿನಂತಿಸಿಕೊಂಡರು.
ಕಾಂಗ್ರೆಸ್ ಯುವ ಮುಖಂಡ ನಲಪಾಡ್ ಮಾತನಾಡಿ ಇತಿಹಾಸದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಹೋರಾಟ ನಡೆಸಿದೆ. ಕಾಂಗ್ರೆಸ್ ಎಂದರೆ ಜನರ ಹಿತಕಾಯುವ ಪಕ್ಷ ಇದ್ದಂತೆ, ಆ ನಿಟ್ಟಿನಲ್ಲಿ ಪಕ್ಷ ಶ್ರಮಿಸುತ್ತಿದ್ದು, ನಗರಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವಂತೆ ನಗರದ ಜನತೆ ಆರ್ಶಿವದಿಸಬೇಕು ಎಂದು ಕೇಳಿಕೊಂಡರು.
ಕಾಂಗ್ರೆಸ್ ವಕ್ತಾರ ಹಿರೇಮಗಳೂರುಪುಟ್ಟಸ್ವಾಮಿ ಮಾತನಾಡಿ ದೇಶದಲ್ಲಿ ಬಿಜೆಪಿ ಆಡಳಿತ ದುರಾವಸ್ಥೆಯಿಂದ ಕೂಡಿದ್ದು ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ನರಕಕ್ಕೆ ತಳ್ಳಿದೆ, ಇದರಿಂದ ಹೊರಬರಲು ಆರ್ಥಿಕತೆ ಸುಧಾರಣೆ ಕಾಂಗ್ರೆಸ್ನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಹಿರೇಮಗಳೂರಿನ ಅಭಿವೃದ್ಧಿಗೆ ಕಾಂಗ್ರೆಸ್ ಅವಧಿಯಲ್ಲಿ ಸಾಕಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ. ಹೈಮಾಸ್ಟ್ ವಿದ್ಯುತ್ದೀಪ ಅಳವಡಿಕೆ, ರಸ್ತೆ ಕಾಂಕ್ರೀಟಿಕರಣ, ನೀರಾವರಿ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಮಾಡಿದೆ ಆ ನಿಟ್ಟಿನಲ್ಲಿ ಯಾವುದೇ ಜಾತಿ ಭೇದವಿಲ್ಲದೇ ಪಕ್ಷದಿಂದ ಒಮ್ಮತದ ಅಭ್ಯರ್ಥಿಯಾಗಿ ಆಶಾ ಸುರೇಶ್ ಅವರನ್ನು ಹಿರೇಮಗಳೂರು ೪ನೇ ವಾರ್ಡ್ನಲ್ಲಿ ಕಣಕ್ಕಿಳಿಸಿದ್ದು ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಮತದಾರರು ಸ್ವಾಭಿಮಾನಿಗಳಾಗಬೇಕು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಮುಖಂಡರಾದ ಬಿ.ಹೆಚ್. ಹರೀಶ್, ವೆಂಕಟೇಶ್, ಹಿರೇಮಗಳೂರು ರಾಮಚಂದ್ರ, ಚೇತನಾ, ಸಿದ್ದೇಶ್, ಶ್ರೀಕಂಠ, ಗಂಗಾಧರ್, ಕಲ್ಲೇಶ್, ಜಗದೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Support Congress
Discussion about this post