ಚಿಕ್ಕಮಗಳೂರು: ಅಕ್ಟೋಬರ್ ಮಾಹೆಯಲ್ಲಿ ನಡೆಯಲಿರುವ ಈದ್ ಮಿಲಾದ್ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲೆಯಲ್ಲಿ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಜನ ಸಂಚಾರ ಮತ್ತು ಜನರ ಒಗ್ಗೂಡುವಿಕೆಗಳು ಹೆಚ್ಚಾಗಿರುವುದರಿಂದ ಕೋವಿಡ್-೧೯ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಈ ಆಚರಣೆಯನ್ನು ಸರಳ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಲು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿನೊಂದಿಗೆ ಅನುಮತಿಗೆ ಆದೇಶಿಸಲಾಗಿರುತ್ತದೆ.
ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೆ.ಎನ್ ರಮೇಶ್ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಚಿಕ್ಕಮಗಳೂರು ಆದ ನಾನು ಕರ್ನಾಟಕ ಸಾಂಕ್ರಾಮಿಕ ರೋಗಗಳನ್ನು, ಕೋವಿಡ್-೧೯ ರೆಗ್ಯೊಲೇಷನ್ ೨೦೨೦ರ ನಿಯಮ ೧೨, ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ರ ಕಲಂ ೨೬, ೩೩, ೩೪ರ ಮೋಟಾರು ವಾಹನ ಕಾಯ್ದೆ ೧೯೮೮ ರ ಕಲಂ ೧೧೫, ಪೊಲೀಸ್ ಕಾಯ್ದೆ ೧೯೬೩ ರ ಕಲಂ ೩೧, ಮತ್ತು ದಂಡ ಪ್ರಕ್ರಿಯೆ ಸಂಹಿತೆ ೧೯೭೩ರ ಕಲಂ ೧೪೪ ರಡಿಯಲ್ಲಿ ಪ್ರದತ್ತವಾಗಿ ಅಧಿಕಾರವನ್ನು ಚಲಾಯಿಸಿ ಸರ್ಕಾರದ ನಿರ್ದೇಶನದಂತೆ ಮುಂಬರುವ ಈದ್ ಮಿಲಾದ್ ಮತ್ತು ವಾಲ್ಮೀಕಿ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲು ಈ ಕೆಳಕಂಡಂತೆ ನಮೂದಿಸಿರುವ ಮಾರ್ಗಸೂಚಿಗಳನ್ನು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಜಾರಿಗೊಳಿಸಿ ಇದನ್ನು ಕಡ್ಡಾಯವಾಗಿ ಪಾಲಿಸಲು ಷರತ್ತಿನೊಂದಿಗೆ ಅನುಮತಿಸಿ ಆದೇಶಿಸಲಾಗಿದೆ.
ಮಾರ್ಗ ಸೂಚಿ: ಈದ್ ಮಿಲಾದ್ ರಾಜ್ಯದಲ್ಲಿ ಅಕ್ಟೋಬರ್ ೧೯ ರಂದು ಆಚರಿಸಲಾಗುವ ಈದ್ ಮಿಲಾದ್ ಹಬ್ಬದ ಆಚರಣೆಯಲ್ಲಿ ಸಾಮೂಹಿಕ ಮೆರವಣಿಗೆ ನಿಷೇಧಿಸಿದೆ, ಮೊಹಲ್ಲಾಗಳಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ/ಕಾರ್ಯಕ್ರಮ/ಸಭೆ ಸಮಾರಂಭಗಳಲ್ಲಿ ೧೦೦ ಕ್ಕಿಂತ ಹೆಚ್ಚು ಜನರು ಒಮ್ಮೆಲೆ ಸೇರುವಂತಿಲ್ಲ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು,
ಮಸೀದಿಗಳಲ್ಲಿ ಮತ್ತು ದರ್ಗಾಗಳಲ್ಲಿ ಸಾಮಾಜಿಕ ಅಂತರ ಹಾಗೂ ಕೋವಿಡ್-೧೯ರ ಶಿಷ್ಟಾಚಾರದೊಂದಿಗೆ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕಾಗಿರುತ್ತದೆ, ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳು/ಡಿಜಿಟಲ್ ಸೌಂಡ್ ಸಿಸ್ಟಮ್(ಡಿಜೆ) ಬಳಕೆಗಳನ್ನು ನಿಷೇಧಿಸಲಾಗಿರುತ್ತದೆ, ಖಬರಸ್ಥಾನದಲ್ಲಿ ಈದ್ ಮಿಲಾದ್ ಪ್ರಯುಕ್ತ ಯಾವುದೇ ರೀತಿಯ ಮೆರವಣಿಗೆ/ಸಾರ್ವಜನಿಕ ಸ್ಥಳಗಳಲ್ಲಿ ಭಾಷಣ,ತೆರೆದ ಜಾಗದಲ್ಲಿ ಸಾಮೂಹಿಕ ಪ್ರಾರ್ಥನೆ ಮುಂತಾದವುಗಳನ್ನು ಆಯೋಜಿಸುವಂತಿಲ್ಲ,
ಮಸೀದಿಗಳಲ್ಲಿ ನಮಾಜ್ ಮಾಡುವವರು ಮದ್ಯ ಕನಿಷ್ಟ ೦೬ ಅಡಿ ಅಂತರ ಕಾಯ್ದುಕೊಳ್ಳತಕ್ಕದ್ದು, ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ಮಾಸ್ಕ್, ಸ್ಯಾನಿಟೈಸರ್, ದೇಹದ ತಾಪಮಾನವನ್ನು ತಪಾಸಣೆ ಮಾಡತಕ್ಕದ್ದು, ೬೦ ವರ್ಷಕ್ಕಿಂತ ಮೆಲ್ಪಟ್ಟ ನಾಗರೀಕರು ಮತ್ತು ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಿಕೊಂಡು ಹಬ್ಬವನ್ನು ಆಚರಿಸತಕ್ಕದ್ದು.
ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವ ಸಂಬಂಧದ ಮಾರ್ಗಸೂಚಿಗಳು; ಕೋವಿಡ್-೧೯ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟವ ನಿಟ್ಟಿನಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅತ್ಯಂತ ಸರಳವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸತಕ್ಕದ್ದು, ರಾಜ್ಯದಲ್ಲಿ ಅಕ್ಟೋಬರ್ ೨೦ ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಸಾಮೂಹಿಕ ಮೆರವಣಿಗೆ ನಿಷೇಧಿಸಿದೆ.
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಸಂಬಂಧ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ/ ಸಾಂಸ್ಕೃತಿ ಕಾರ್ಯಕ್ರಮ/ಸಭೆ ಸಮಾರಂಭಗಳಲ್ಲಿ ೧೦೦ ಕ್ಕಿಂತ ಹೆಚ್ಚು ಜನರು ಒಮ್ಮೆಲೆ ಸೇರುವಂತಿಲ್ಲ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು, ಜಯಂತಿ ಆಚರಣೆಯ ಸ್ಥಳಗಳಲ್ಲಿ ಸ್ಯಾನಿಟೈಸೇಷನ್ ಹಾಗೂ ಮಾಸ್ಕ್ಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು,
ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳು/ಡಿಜಿಟಲ್ ಸೌಂಡ್ ಸಿಸ್ಟಮ್(ಡಿಜೆ) ಬಳಕೆಗಳನ್ನು ನಿಷೇಧಿಸಲಾಗಿರುತ್ತದೆ, ೬೦ ವರ್ಷಕ್ಕಿಂತ ಮೆಲ್ಪಟ್ಟ ನಾಗರೀಕರು ಮತ್ತು ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾರ್ವಜನಿಕವಾಗಿ ನಡೆಯುವ ಆಚರಣೆ ಕಾರ್ಯಕ್ರಮಗಳಲ್ಲಿ ಜನರು ಒಗ್ಗೂಡುವಿಕೆಯಿಂದ ಭಾಗವಹಿಸದಂತೆ ಸೂಚಿಸಿದೆ.
ಹಬ್ಬದ ಆಚರಣೆಯ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು, ಕೋವಿಡ್-೧೯ ನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸಕಾರವು ಹೊರಡಿಸಿದ ಮಾರ್ಗಸುಚಿಗಳನ್ನು ತಪ್ಪದೆ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು, ಮತ್ತು ಮೇಲ್ಕಂಡ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ಭಾ.ದ.ಸಂ ಸೆಕ್ಷನ್ ೧೮೮ರ ಅಡಿಯಲ್ಲಿ ಶಿಸ್ತಿನ/ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























Discussion about this post