ಚಿಕ್ಕಮಗಳೂರು : ನೆಹರೂ ಹೆಸರಲ್ಲಿ ಹುಕ್ಕಾಬಾರ್ ತೆರೆಯಿರಿ ಎಂದು ಕಾಂಗ್ರೆಸ್ ನಾಯಕರ ಕುರಿತು ಲಘು ಹೇಳಿಕೆ ನೀಡಿದ ಸಿಟಿ ರವಿ ವರ್ತನೆ ಖಂಡಿಸಿ ಇಂದು ಕಾಂಗ್ರೆಸ್ ಕಾರ್ಯಕರ್ತರು ಅವರ ಮನೆಗೆ ಮುತ್ತಿಗೆ ಹಾಕುವ ಯತ್ನ ನಡೆಸಿದರು.
ಬಿಜೆಪಿ ನಾಯಕರ ಮನೆಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನು ಚಿಕ್ಕಮಗಳೂರು ಪೊಲೀಸರು, ಮಾರ್ಗ ಮಧ್ಯೆಯೇ ತಡೆದರು. ನಗರದ ಐಜಿ ರಸ್ತೆಯಲ್ಲಿ ಕಾರ್ಯಕರ್ತರನ್ನು ತಡೆಯುತ್ತಿದ್ದಂತೆ, ಸಿಟಿ ರವಿ ವಿರುದ್ಧ ಘೋಷಣೆ ಕೂಗಿ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾನಿರತನ್ನು ಪೊಲೀಸರು ವಶಕ್ಕೆ ಪಡೆದರು.
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಷಯವಾಗಿ ಆಗ್ರಹಿಸಿದ ಸಿಟಿ ರವಿ ಅವರು ಬಳಿಕ ನೆಹರೂ ಹೆಸರಲ್ಲಿ ಹುಕ್ಕಾ ಬಾರ್ ನಡೆಸಿ ಎಂಬ ಹೇಳಿಕೆ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಸಿಟಿ ರವಿ ಅವರ ಈ ನಡೆ ವಿರುದ್ದ ಇಂದು ಅವರ ಮನೆಗೆ ಮುತ್ತಿಗೆ ಹಾಕಲು ಯುವ ಕಾಂಗ್ರೆಸ್ ಅಧ್ಯಕ್ಷ ಕರೆ ನೀಡಿದ್ದರು. ಈ ಸಂಬಂಧ ಇಂದು ಚಿಕ್ಕಮಗಳೂರಿನಲ್ಲಿ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಯಾಗಿದ್ದರು.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪ್ರತಿಭಟನೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಕೂಡ ಸಿ ಟಿ ರವಿ ಮನೆ ಮುಂದೆ ಜಮಾವಣೆಗೊಂಡಿದ್ದರು. ಸುಮಾರು 400ಕ್ಕೂ ಹೆಚ್ಚು ಕಾರ್ಯಕರ್ತರು ಹಾಜರಿದ್ದು, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಲು ಸಜ್ಜಾಗಿದ್ದರು. ಎರಡು ರಾಷ್ಟ್ರೀಯ ಪಕ್ಷದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮೆಯಾಗಿದ್ದ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಬಸವನಹಳ್ಳಿಯಲ್ಲಿರುವ ಸಿ.ಟಿ. ರವಿ ಅವರ ಮನೆ ಸೇರಿದಂತೆ ನಗರದಲ್ಲಿ ಬಿಗಿ ಬಂದೋಬಸ್ತ್ ನಡೆಸಲಾಗಿತ್ತು. ಸಿ.ಟಿ ರವಿ ನಿವಾಸ, ಕಾಂಗ್ರೆಸ್ ಕಚೇರಿಗೂ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.
ಈ ಪ್ರತಿಭಟನೆ ಸಂದರ್ಭದಲ್ಲಿ ಸಿಟಿ ರವಿ ಅವರು ಮನೆಯಲ್ಲಿ ಉಪಸ್ಥಿತರಿರಲಿಲ್ಲ. ದೆಹಲಿಯಲ್ಲಿರು ಅವರು ಈ ಮುತ್ತಿಗೆ ಯತ್ನ ಕುರಿತು ಪ್ರತಿಕ್ರಿಯಿಸಿದ್ದು, ನಾನು ನೆಹರು ಚಾರಿತ್ರ್ಯ ಹರಣ ಮಾಡಿಲ್ಲ. ಒಂದು ಕುಟುಂಬದ ಗುಲಾಮಗಿರಿಯಿಂದ ಮಾನಸಿಕ ಅಸ್ವಸ್ಥತೆ ಬಂದಿರಬಹುದು. ಅಥಾವ ಸತತ ಸೋಲಿನಿಂದ ಮಾನಸಿಕ ಅಸ್ವಸ್ಥತೆ ಬಂದಿರಬಹುದು ಎಂದು ವಾಗ್ದಾಳಿ ನಡೆಸಿದರು.
ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಜಟಾಪಟಿ ನಡೆಸಿದ್ದರು. ಕಾಂಗ್ರೆಸ್ಸಿಗರು ಇಂದಿರಾ ಗಾಂಧಿ ಹೆಸರಲ್ಲಿ ಬಾರ್ ತೆರೆಯಲಿ, ಜವಾಹರ್ ಲಾಲ್ ನೆಹರೂ ಅವರ ಹೆಸರನ್ನು ಹುಕ್ಕಾ ಬಾರ್ಗೆ ಇಡಬೇಕು ಎಂಬ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಸಿಟಿ ರವಿ ವರ್ತನೆಗೆ ಕಿಡಿ ಕಾರಿದ್ದರು. ಗರೀಬಿ ಹಟಾವೋ ಮಾಡಿದ್ದು ಇಂದಿರಾ ಗಾಂಧಿ. ಅದಕ್ಕೋಸ್ಕರ ಇಂದಿರಾ ಕ್ಯಾಂಟೀನ್ ಗೆ ಹೆಸರಿಟ್ಟಿದ್ದೇವೆ. ರಾಷ್ಟ್ರಕ್ಕೆ ಸೇವೆ ಮಾಡಿ ಬಡವರಿಗೆ ಕಾಳಜಿ ತೋರಿದ ನೆನಪಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿಟ್ಟಿದ್ದೇವೆ ಎಂದು ಸಮಾಜಾತಯಿಷಿ ನೀಡಿದ್ದರು.
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಸಿಟಿ ರವಿ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ನಾಯಕರ ಕೂಡ ಬೆಂಬಲ ವ್ಯಕ್ತಪಡಿಸಿದ್ದರು.

























Discussion about this post