ಚಿಕ್ಕಮಗಳೂರು: ದತ್ತಪೀಠಕ್ಕೆ ಸಂಬಂಧಿಸಿದಂತೆ ಸರ್ಕಾರ ಸಮಿತಿ ರಚನೆ, ಅಹವಾಲು ಸ್ವೀಕಾರ ಮತ್ತಿತರ ನಾಟಕ ಆಡುವ ಮೂಲಕ ಕಾಲಹರಣ ಮಾಡಿ ಮೀನಾಮೇಷ ಏಣಿಸದೇ ಕೂಡಲೇ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಹಿಂದೂ ಅರ್ಚಕರನ್ನು ನೇಮಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸರ್ಕಾರವನ್ನು ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ೩೦ ವರ್ಷಗಳಿಂದ ವಿವಾದದಿಂದ ಕೂಡಿರುವ ದತ್ತಪೀಠಕ್ಕೆ ಬಿಜೆಪಿ ಸರ್ಕಾರ ಮುಕ್ತಿ ನೀಡಬೇಕು, ಹೈಕೋರ್ಟ್ ಪೀಠ ಈಗಾಗಲೇ ಮುಜಾವರ್ಗಳ ನೇಮಕವನ್ನು ರದ್ದುಗೊಳಿಸಿದೆ. ಆಡಳಿತ ಸರ್ಕಾರ ಸಮಿತಿ ರಚನೆ, ಆಕ್ಷೇಪಣೆ, ದಾಖಲೆ, ಎನ್ನದೇ ಕೂಡಲೇ ಅಲ್ಲಿಗೆ ಹಿಂದೂ ಅರ್ಚಕರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಇದುವರೆಗೂ ಸರ್ಕಾರ ಪ್ರಕರಣ ನ್ಯಾಯಾಲಯದಲ್ಲಿದೇ ಎಂದು ಸಬೂಬು ಹೇಳುತ್ತಿತ್ತು. ಇದೀಗ ಬಿಜೆಪಿಯವರದೇ ಸರ್ಕಾರವಿದೆ. ಸಮಿತಿ ರಚಿಸಿ, ಸಾರ್ವಜನಿಕ ಅಹವಾಲು ಸ್ವೀಕರಿಸುವ ಅಗತ್ಯವಿಲ್ಲ, ಕಳೆದ ಮೂವತ್ತು ವರ್ಷಗಳಿಂದ ನಿರಂತರ ಶ್ರಮಪಟ್ಟು ದಾಖಲೆಗಳನ್ನು ಸಲ್ಲಿಸಲಾಗಿದೆ. ಇದೀಗ ಮತ್ತೇ ಹಿಂದೂಗಳನ್ನು ಮೂರ್ಖರನ್ನಾಗಿಸಿ ಮೋಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಪಟ್ಟಂತೆ ಸರ್ಕಾರ ಕೂಡಲೇ ಸ್ಪಷ್ಟ ನಿರ್ಧಾರ ಕೈಗೊಂಡು ಸಮಾಜಕ್ಕೆ ಬಿಜೆಪಿ ಸರ್ಕಾರ ಒಳ್ಳೆಯ ಸಂದೇಶ ನೀಡಲಿ. ವಿರೋಧಿಗಳು ಬೇಕಾದರೆ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಲಿ. ಒಂದೊಮ್ಮೆ ಸರ್ಕಾರ ಕಾಲಹರಣ ಮಾಡುತ್ತಾ ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾದರೆ ಹಿಂದೂ ಸಮಾಜ ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ದತ್ತಪೀಠದಲ್ಲಿ ಸರಿಯಾದ ದಾಖಲೆಗಳು, ವಿಮೆ ಇಲ್ಲದ ಕಾನೂನು ಬಾಹಿರವಾಗಿ ೪೦ ಜೀಪ್ಗಳು ಹಾಗೂ ೨ ಖಾಸಗಿ ಬಸ್ಗಳು ಸಂಚಾರ ಮಾಡುತ್ತಿವೆ ಈ ಬಗ್ಗೆ ಆರ್ಟಿಒ ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು, ಜೀಪು ಹಾಗೂ ಬಸ್ ಮಾಲೀಕರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಸುತ್ತಮುತ್ತಲಿನ ಹೋಂಸ್ಟೇ, ರೆಸಾರ್ಟ್ಗಳಲ್ಲಿ ಎಗ್ಗಿಲ್ಲದೇ ಗೋಮಾಂಸ, ಗಾಂಜಾ ಸಾಗಾಣೆ ನಡೆಯುತ್ತಿದೆ ಇದು ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲವೇ ದತ್ತಪೀಠದ ಪಾವಿತ್ರ್ಯತೆ ಉಳಿಸಲು ಜಿಲ್ಲಾಡಳಿತ ಕ್ರಮವಹಿಸಬೇಕು, ಗಾಂಜಾ, ಗಿಡಮೂಲಿಕೆ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸುವಂತೆ ಒತ್ತಾಯಿಸಿ ಮುಜರಾಯಿ ಖಾತೆ ಸಚಿವರು ಹಾಗೂ ಗೃಹಸಚಿವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷ ಮಹೇಶ್ಕುಮಾರ್ ಕಟ್ಟಿನ ಮನೆ, ಚಿಕ್ಕಮಗಳೂರು ಘಟಕದ ಜಿಲ್ಲಾಧ್ಯಕ್ಷ ರಂಜಿತ್ಶೆಟ್ಟಿ, ದುರ್ಗಸೇನೆ ಜಿಲ್ಲಾಧ್ಯಕ್ಷೆ ಶಾರದಮ್ಮ ಮತ್ತಿತರರು ಇದ್ದರು.
Discussion about this post