ನವದೆಹಲಿ: ನಾಗರಿಕತೆ ಬೆಳದಂತೆ ಅರಣ್ಯಗಳು ಕಿರಿದಾಗಿ ವನ್ಯಜಿವಿಗಳು ನಾಡಿಗೆ ಬರುತ್ತವೆ. ಇದರಿಂದ ಮಾನವ-ವನ್ಯಜಿವಿ ಸಂಘರ್ಷ ಉಂಟಾಗುತ್ತದೆ. ಕಾಡಂಚಿನ ಗ್ರಾಮಗಳ ಜನರು, ಬೆಳೆ ಮೇಲೆ ದಾಳಿ ಇಡುವ ಕಾಡುಪ್ರಾಣಿಗಳ ಹಾವಳಿ ತಡೆಯಲು ಅವುಗಳಿಗೆ ಮಾರಣಾಂತಿಕವಾಗುವಂತಹ ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಇಂಥ ಅಪಸವ್ಯ ಸುದ್ದಿಗಳ ಮಧ್ಯೆಯೂ ಮಾನವೀಯ ವರದಿಗಳು ಆಗಾಗ್ಗ ವ್ಯಕ್ತವಾಗುತ್ತಿರುತ್ತವೆ. ಇಂಥದ್ದೇ ಒಂದು ಘಟನೆಯನ್ನು ಐಎ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಕಾಡಿನಿಂದ ದಾರಿತಪ್ಪಿ ಹೊಲಕ್ಕೆ ಬಂದ ಐದು ಕಾಡು ಬೆಕ್ಕಿನ ಮರಿಗಳನ್ನು ರೈತರು ರಕ್ಷಸಿದ್ದಾರೆ. ಈ ಮರಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕೃಷಿ ಚಟುವಟಿಕೆಯನ್ನು ನಿಲ್ಲಿಸಿದ್ದು ವಿಶೇಷ ಎಂದು ವಿಡಿಯೋ ಸಹಿತವಾದ ಟ್ವೀಟ್ನಲ್ಲಿ ಪ್ರವೀಣ್ ಕಸ್ವಾನ್ ಬರೆದಿದ್ದಾರೆ. ಆದರೆ, ಈ ಘಟನೆ ಎಲ್ಲಿ ನಡೆಯಿತು ಎಂಬ ವಿವರ ನೀಡಿಲ್ಲ.
“ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತರು ಐದು ಕಾಡು ಬೆಕ್ಕಿನ ಮರಿಗಳು ಅಲೆದಾಡುತ್ತಿರುವುದನ್ನು ಕಂಡರು. ಜನರನ್ನು ನೋಡಿ ದಿಗಿಲುಗೊಂಡ ಅವು ಪೊದೆಗಳ ಮರೆಗೆ ಓಡಿದವು. ರೈತರು ಕೆಲಸವನ್ನು ನಿಲ್ಲಿಸಿ ಅವುಗಳನ್ನು ಹುಡುಕಿ ತಂದರು. ಮುದ್ದಾದ ಮರಿಗಳ ಜತೆ ಫೋಟೋ ತೆಗೆಯಿಸಿಕೊಂಡರು. ಕಾಡು ಬೆಕ್ಕಿನ ಮರಿಗಳು ಇನ್ನೂ ಚಿಕ್ಕವು. ತಾಯಿ ಇಲ್ಲದೆ ಅವು ಬದುಕುವುದಿಲ್ಲವೆಂದು ತಾಯಿ ಬೆಕ್ಕು ಬರುವವರೆಗೂ ಇವುಗಳನ್ನು ಜೋಪಾನ ಮಾಡಿದರು. ಇದಕ್ಕಾಗಿ ಬೆಕ್ಕಿನ ಮರಿಗಳು ಕಾಣಿಸಿಕೊಂಡ ಜಮೀನ ಸುತ್ತಲಿನ ಪ್ರದೇಶದಲ್ಲಿ ತಾತ್ಕಾಲಿಕ ರಕ್ಷಣೆ ಮಾಡಿಕೊಂಡಿದ್ದರು. ತಾಯಿ ಬೆಕ್ಕು ಮರಿಗಳನ್ನು ಕರೆದೊಯ್ಯುವರೆಗೂ ಅವುಗಳ ಮೇಲೆ ಬೇರೆ ಪ್ರಾಣಿಗಳು ದಾಳಿ ನಡೆಸದಂತೆ ಕಾಪಾಡಿದ್ದರು. ಬೆಕ್ಕಿನ ಮರಿಗಳಿಗೆ ತಾಯಿ ಬೆಕ್ಕು ಸಿಗುವವರೆಗೂ ಉಳುಮೆ ಮಾಡದಿರಲು ನಿರ್ಧರಿಸಿದದ್ದರು’ ಎಂದು ಕಸ್ವಾನ್ ಅಡಿ ಬರಹದಲ್ಲಿ ಇಡೀ ಘಟನೆಯನ್ನು ವಿವರಿಸಿದ್ದಾರೆ.
‘ಗ್ರಾಮಸ್ಥರು ತಂಡಗಳನ್ನು ರಚಿಸಿಕೊಂಡು ಹೊಲದ ಬಳಿ ರಾತ್ರಿ ಕೂಡ ಠಿಕಾಣಿ ಹೂಡಿದ್ದರು, ತಾಯಿ ಬೆಕ್ಕನ್ನು ಪತ್ತೆ ಮಾಡಲು ಜಮೀನಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪ್ಗಳನ್ನು ಅರಣ್ಯ ಇಲಾಖೆ ವತಿಯಿಂದ ಅಳವಡಿಸಲಾಗಿತ್ತು. ಮಾರನೆ ದಿನ ಸಂಜೆ ತಾಯಿ ಬೆಕ್ಕು ಮರಿಗಳನ್ನು ಅರಿಸಿ ಹೊಲದ ಬಳಿ ಬಂತು, ಮರಿಗಳನ್ನು ನೆಕ್ಕಿ ಮುದ್ದಿಸಿ ಒಂದೊಂದನ್ನೆ ಮೃದುವಾಗಿ ಕಚ್ಚಿ ಎತ್ತಿಕೊಂಡು ಅಡವಿಗೆ ಬಿಟ್ಟು ಬಂತು. ಈ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ರಾತ್ರಿ ಆಗಿತ್ತು. ತಾಯಿ ಬೆಕ್ಕಿಗೆ ಆತಂಕ ಆಗಬಾರದೆಂದು ಗ್ರಾಮಸ್ಥರು ಜಮೀನಿನ ಕಡೆ ಸುಳಿಯಲಿಲ್ಲ. ಎಲ್ಲವೂ ಸಹಜವಾಗಿರುವಂತೆ ನೋಡಿಕೊಂಡರು.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು 1,600 ಮಂದಿ 30 ಸಾವಿರ ಸಲ ವೀಕ್ಷಿಸಿದ್ದಾರೆ. ರೈತರು ಮತ್ತು ಅಧಿಕಾರಿಗಳ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಬೆಕ್ಕಿನ ಮರಿಗಳು ಮತ್ತೆ ತಾಯಿಯ ಮಡಿಲು ಸೇರಿದ್ದು ಸುಖಾಂತ್ಯವಾಯಿತು ಎಂದು ಹೇಳಿದ್ದಾರೆ.
Villagers Rescue 5 Jungle Cat Cubs
ಇದನ್ನು ಓದಿ: ರಾಜಸ್ಥಾನದ ಅರಾವಳಿ ಪರ್ವತ ಶ್ರೇಣಿಯಲ್ಲಿ ಗುಲಾಬಿ ಚಿರತೆ ಪ್ರತ್ಯಕ್ಷ!
ಇದನ್ನು ಓದಿ: Non-forest activity: ಗಿರಿ ಶ್ರೇಣಿಯಲ್ಲಿ ಅರಣ್ಯೇತರ ಚಟುವಟಿಕೆ ಜತೆಗೆ ಒತ್ತುವರಿಗೆ ಕಡಿವಾಣ ಬೇಕಿದೆ
Discussion about this post