ಚಿಕ್ಕಮಗಳೂರು : ನಗರದ ಲಕ್ಷ್ಮೀಶ ನಗರದಲ್ಲಿ ನಗರಸಭೆ ವತಿಯಿಂದ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಮುಂದೆ ಹತ್ತು ಹಲವು ಸಮಸ್ಯೆಗಳನ್ನು ತೆರೆದಿಟ್ಟರು. ಕುಡಿಯುವ ನೀರು, ರಸ್ತೆ, ಒಳ ಚರಂಡಿ, ಸೇರಿದಂತೆ ಹಲವು ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯನ್ನು ಸ್ವಚ್ಚ ನಗರವನ್ನಾಗಿಸವಲ್ಲಿ ನಗರಸಭೆಯೊಂದಿಗೆ ಸಾರ್ವಜನಿಕರು ಕೈಜೋಡಿಸುವ ಅಗತ್ಯವಿದೆ ಎಂದರು. ಜನರ ಸಮಸ್ಯೆ, ಅಹವಾಲುಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಜನಸಂಪರ್ಕ ಸಭೆಗಳನ್ನು ಆಯೋಜಿಸಿದ್ದು ನಗರದಲ್ಲಿ ಕಸ ವಿಲೇವಾರಿ, ಕುಡಿಯುವ ನೀರು, ಸೇರಿದಂತೆ ಮುಂತಾದ ಸಮಸ್ಯೆಗಳಿದ್ದು ಬಗೆಹರಿಸುವ ನಿಟ್ಟಿನಲ್ಲಿ ನಗರಸಭೆ ಕ್ರಮವಹಿಸಲಿದೆ ಎಂದರು.
ಸಾರ್ವಜನಿಕರು ತಮ್ಮ ಕುಂದು ಕೊರತೆ, ಮನವಿಗಳನ್ನು ಲಿಖಿತ ರೂಪದಲ್ಲಿ ನೀಡಬೇಕು. ಅವುಗಳನ್ನು ಕಡತದಲ್ಲಿ ದಾಖಲಿಸಿ ಪರಿಶೀಲಿಸಲಾಗುವುದು, ಇಲಾಖೆಗೆ ಬರುವ, ಸಾರ್ವಜನಿಕರ ಸಂಪರ್ಕ ಸಭೆಯಲ್ಲಿನ ಜನರ ಕುಂದುಕೊರತೆಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ನಗರಸಭೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಬೇಕು. ಕನಿಷ್ಟ ೩೦ ದಿನದೊಳಗೆ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಿಳಿಸಿದರು.
ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಕನಿಷ್ಟ ೧೫ ದಿನಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸುವ ಅಗತ್ಯವಿದೆ. ಮುಖ್ಯವಾಗಿ ನಗರವನ್ನು ಸ್ವಚ್ಚವಾಗಿರಿಸಿವಲ್ಲಿ ಪೌರಕಾರ್ಮಿಕರೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕಿದೆ ಎಂದರು.
ಲಕ್ಷ್ಮೀಶ ನಗರದ ವಾರ್ಡ್ ಸಂಖ್ಯೆ ೧೦ ಕ್ಕೆ ೮೬ ಲಕ್ಷ, ೧೧ ಕ್ಕೆ ೭೩ ಲಕ್ಷ ಹಾಗೂ ವಾರ್ಡ್ ಸಂಖ್ಯೆ ೧೨ಕ್ಕೆ ೭೪ ಲಕ್ಷ ಅನುದಾನವನ್ನು ವಿವಿಧ ಅಭಿವೃದ್ಧಿ ಯೋಜನೆ ಅಡಿ ಮೀಸಲಿರಿಸಲಾಗಿದೆ. ರಸ್ತೆ, ಒಳಚರಂಡಿ, ವಿದ್ಯುತ್, ಕಸವಿಲೇವಾರಿ ಸೇರಿದಂತೆ ಹಲವು ಸಮಸ್ಯೆಗಳನ್ನು ತ್ವರಿತವಾಗಿ ಪರಿಶೀಲಿಸಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಲಕ್ಷೀಶ ನಗರ, ಪಂಪಾನಗರ, ಸೇರಿದಂತೆ ವಿವಿಧ ವಾರ್ಡ್ ಗಳ ಸಾರ್ವಜನಿಕರು ರಸ್ತೆಗಳು ಹದಗೆಟ್ಟಿರುವ ಬಗ್ಗೆ, ಕಸದ ತ್ಯಾಜ್ಯ ಸ್ಥಳ ಬದಲಾವಣೆ, ಬೀದಿ ದೀಪ ಅಳವಡಿಕೆ, ಚರಂಡಿ ನಿರ್ಮಾಣ, ಅಂಗನವಾಡಿ, ಸಮುದಾಯ ಭವನ, ನಾಯಿಗಳ ಹಾವಳಿ, ಜತೆಗೆ ಯುಜಿಡಿ, ಒಳಚರಂಡಿ ಕಾಮಗಾರಿ ಪರಿಣಾಮ ಆಗುತ್ತಿರುವ ಹಲವು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟರು.
ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಎಲ್ಲಾ ವಾರ್ಡ್ ಗಳಲ್ಲಿ ಎಲ್.ಇ.ಡಿ ಬೀದಿ ದೀಪಗಳನ್ನು ಅಳವಡಿಸಲು ಚಿಂತನೆ ನಡೆದಿದೆ. ಕಸವನ್ನು ಕಡ್ಡಾಯವಾಗಿ ಆಟೋ ಟಿಪ್ಪರ್ಗಳಿಗೆ ನೀಡಬೇಕು, ಉದ್ಯಾನವನಗಳ ನಿರ್ವಹಣೆಗೆ ಅಗತ್ಯ ಕ್ರಮವಹಿಸಲಾಗುವುದು, ಅಮೃತ್ ಯೋಜನೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಪ್ರತಿ ಮನೆಗಳಿಗೆ ನೀರು ಪೂರೈಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಯೋಜನೆ ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಲ್ಲೇಶ್ನಾಯ್ಕ, ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಇಂಜಿನಿಯರ್ ಚಂದನ್, ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ:
ಹಾನಿಗೊಳಗಾದ ರಸ್ತೆ – ಸೇತುವೆಗಳ ತ್ವರಿತವಾಗಿ ದುರಸ್ಥಿಗೊಳಿಸಿ ಸಂಪರ್ಕ ಕಲ್ಪಿಸುವಂತೆ ಸೂಚನೆ
Discussion about this post