ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಎನ್ಸಿಪಿಯ ಹಿರಿಯ ಮುಖಂಡ ಅನಿಲ್ ದೇಶಮುಖ್ (71) ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ. ಅವರ ವಿರುದ್ಧ ಕೇಳಿ ಬಂದಿದ್ದ ನೂರು ಕೋಟಿ ರೂಪಾಯಿ ಲಂಚದ ಆಪಾದನೆ ಸಂಬಂಧವಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಇ.ಡಿ. ಸೋಮವಾರ 12 ತಾಸು ವಿಚಾರಣೆಗೆ ಗುರಿಪಡಿಸಿತ್ತು. ತಡರಾತ್ರಿ ಬಂಧಿಸಿದೆ.
ವಿಚಾರಣೆಗೆ ಹಾಜರಾಗುವಂತೆ ಇ.ಡಿ. ನೀಡಿದ್ದ ಸಮನ್ಸ್ ವಜಾ ಮಾಡುವಂತೆ ಕೋರಿ ದೇಶಮುಖ್ ಬಾಂಬೆ ಹೈಕೋರ್ಟ್ಗೆ ಅಜರ್ಜಿ ಸಲ್ಲಿಸಿದ್ದರು. ಇದು ಶುಕ್ರವಾರ ವಜಾಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ಸೋಮವಾರ ವಿಚಾರಣೆಗೆ ಹಾಜರಾಗಿದರು.
“ನನ್ನವಿರುದ್ಧದ ಆರೋಪ ಅಸತ್ಯ. ತನಿಖಾ ಸಂಸ್ಥೆಗಳಿಗೆ ಸಹಕರಿಸುವ ಉದ್ದೇಶದಿಂದಲೇ ವಿಚಾರಣೆಗೆ ಹಾಜರಾಗಿರುವೆ. ಆದರೆ, ಈ ವಿಚಾರ ಹೈಕೋರ್ಟ್ನಲ್ಲಿರುವ ಕಾರಣ ಇತ್ಯರ್ಥವಾಗಲೆಂದು ಕಾಯುತ್ತಿದೆ ಅಷ್ಟೆ’ ಎಂದು ದೇಶಮುಖ್ ಇ.ಡಿ. ವಿಚಾರಣೆಗೆ ಹಾಗರಾಗುವುದಕ್ಕೂ ಮುನ್ನ ಬಿಡುಗಡೆ ಮಾಡಿದ್ದ ವಿಡಿಯೋ ಸಂದೇಶದಲ್ಲಿ ಹೇಳಿದ್ದರು.
“ನನ್ನ ವಿರುದ್ಧ ಆರೋಪ ಮಾಡಿರುವ ಪರಮ್ಬೀರ್ ಸಿಂಗ್ ಎಲ್ಲಿದ್ದಾರೆ? ಅವರ ವಿರುದ್ಧ ಪೊಲೀಸರು, ಉದ್ಯಮಿಗಳು ದೂರು ದಾಖಲಿಸಿದ್ದಾರೆ. ತನ್ನದೇ ಇಲಾಖೆಯ ಅಧಿಕಾರಿಯೊಬ್ಬ ಪೊಲೀಸರಿಗೆ ಸಿಗುತ್ತಿಲ್ಲ ಎಂದರೇ ಆಶ್ಚರ್ಯ’ ಎಂದಿದ್ದರು.
ಈ ಮಧ್ಯೆ, 100 ಕೋಟಿ ರೂ. ಲಂಚ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ; ಮಧ್ಯವರ್ತಿ ಸಂತೋಷ್ ಜಗತಾಪ್ ಎಂಬುವರನ್ನು ಭಾನುವಾರ ಬಂಧಿಸಿದೆ. ಸಿಬಿಐ ಈ ಪ್ರಕರಣದ ತನಿಖೆ ಆರಂಭಿಸಿದ ನಂತರ ಮೊದಲ ಬಂಧನ ಇದಾಗಿದೆ. ಸಂತೋಷ್ಗೆ ಸಂಬಂಧಿಸಿದ ಸ್ಥಳಗಳ ಮೇಲೆ ಸಿಬಿಐ ಕಳೆದ ಆಗಸ್ಟ್ನಲ್ಲಿ ದಾಳಿ ನಡೆಸಿತ್ತು. ಈ ವೇಳೆ 9 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿತ್ತು.
ಪ್ರಕರಣದ ಹಿನ್ನೆಲೆ:
ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಕೇಶ್ ಅಂಬಾನಿ ಮನೆ ಅಂಟಾಲಿಯಾ ಬಳಿ ಕಳೆದ ಫೆಬ್ರವರಿ 25ರಂದು ಅನುಮಾನಸ್ಪದವಾಗಿ ನಿಂತಿದ್ದ ಎಸ್ಯುವಿ ವಾಹನದಲ್ಲಿ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿದ್ದವು. ಈ ಪ್ರಕರಣದ ಸಂಬಂಧ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಸಚ್ಚಿನ್ ವಝೆಯನ್ನು ಬಂಧಿಸಲಾಗಿತ್ತು. ಈ ಪ್ರಕರಣವನ್ನು ಮುಂಬೈ ಪೊಲೀಸರು ಸರಿಯಾಗಿ ನಿರ್ವಹಿಸಲಿಲ್ಲವೆಂದು ಆಗ ಕಮಿಷನರ್ ಆಗಿದ್ದ ಪರಮ್ಬೀರ್ ಸಿಂಗ್ ವಿರುದ್ಧ ಟೀಕೆ ವ್ಯಕ್ತವಾಗಿದ್ದವು. ಅವರನ್ನು ಗೃಹ ರಕ್ಷಕದಳದ ಮುಖ್ಯಸ್ಥನ ಹುದ್ದೆಗೆ ಎತ್ತಂಗಡಿ ಮಾಡಲಾಗಿತ್ತು. ಆಗ ಅವರು ಗೃಹ ಸಚಿವರಾಗಿದ್ದ ಅನಿಲ್ ದೇಶಮುಖ್ ವಿರುದ್ಧ 100 ಕೋಟಿ ರೂಪಾಯಿ ಲಂಚದ ಆರೋಪ ಮಾಡಿದ್ದರು. ಬಾರ್, ರೆಸ್ಟೋರಂಟ್, ಹೋಟೆಲ್ಗಳಿಂದ ಪ್ರತಿ ತಿಂಗಳು 100 ಕೋಟಿ ರೂ. ವಸೂಲು ಮಾಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಸ್ವತಃ ಗೃಹ ಸಚಿವರ ಒತ್ತಡ ಇದೆ ಎಂದು ಹೇಳಿದ್ದರು. ಈ ಸಂಬಂಧ ಸಿಎಂ ಉದ್ಧವ್ ಠಾಕ್ರೆಯವರಿಗೂ ಪತ್ರ ಬರೆದಿರುವುದಾಗಿ ಹೇಳಿದ್ದರು. ಜತೆಗೆ ಅವರು ಸುಪ್ರೀಂಕೋರ್ಟ್ಗೂ ಅರ್ಜಿ ಸಲ್ಲಿಸಿದ್ದರು. ಆದರೆ, ಸುಪ್ರೀಂಕೋರ್ಟ್ ಅವರನ್ನು ಹೈಕೋರ್ಟ್ ಮೊರೆ ಹೋಗುವಂತೆ ಸೂಚಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ದೂರಿನ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಿ, ಹುರುಳಿದೆ ಎನಿಸಿದರೆ ದೇಶಮುಖ್ ವಿರುದ್ಧ ತನಿಖೆ ನಡೆಸಲು ನಿರ್ದೇಶನ ನೀಡಿತ್ತು.
ಈ ಮಧ್ಯೆ ದೂರುದಾರರಾದ ಪರಮ್ಬೀರ್ ಸಿಂಗ್ ಕೂಡ ನಾಪತ್ತೆಯಾಗಿದ್ದಾರೆ, ಲುಕ್ಔಟ್ ನೋಟಿಸ್ ಜಾರಿಯಾಗಿದೆ. ಅವರ ವಿರುದ್ಧವೂ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.
Maharashtra’s Former Home Minister Anil Deshmukh Arrested
ಇದನ್ನು ಓದಿ: ಮುಂಬೈ ನಗರದ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ನಾಪತ್ತೆ
ಇದನ್ನು ಓದಿ: Bribery: ಎನ್ಸಿಬಿ ಅಧಿಕಾರಿಗಳ ವಿರುದ್ಧ 25 ಕೋಟಿ ರೂ. ಲಂಚದ ಆರೋಪ
Discussion about this post