ಲಖನೌ: ಉತ್ತರ ಪ್ರದೇಶದ ಕಾನ್ಪುರ ಮೂಲದ ಸುಗಂಧ ದ್ರವ್ಯದ ಉದ್ಯಮಿ ಪಿಯೂಷ್ ಜೈನ್ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಸಮಾಜವಾದಿ ಪಕ್ಷ ಮತ್ತು ಬಿಜೆಪಿಗಳು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದು, ದಾಳಿಗೆ ಗುರಿಯಾದ ವ್ಯಕ್ತಿ ತಮ್ಮ ಪಕ್ಷಕ್ಕೆ ಸಂಬಂಧಿಸಿದವರಲ್ಲ ಎಂದು ಹೇಳಿಕೊಳ್ಳುತ್ತಿವೆ. ಈ ಮಧ್ಯೆ, ದಾಳಿಗೆ ಒಳಗಾದ ವ್ಯಕ್ತಿಯ ಗುರುತು ನಿಖರವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಕಾನ್ಪುರ ಮೂಲದ ಪಿಯೂಷ್ ಜೈನ್ ಅವರ ಪೂರ್ವಜರು ಕನೌಜ್ ಮೂಲದವರು. ಅಲ್ಲಿನ ಮನೆಯ ಮೇಲೂ ಐಟಿ ದಾಳಿ ನಡೆದಿತ್ತು. ಇದೇ ವೇಳೆ ಕನೌಜ್ನ ಜೈನ್ ಎಂಬ ಉಪನಾಮ ಹೊಂದಿರುವ ಪುಷ್ಪರಾಜ್ (ಪಂಪಿ) ಜೈನ್ ಅವರ ಮೇಲೂ ಐಟಿ ದಾಳಿ ನಡೆದಿದೆ ಎನ್ನಲಾಗಿದೆ. ಕಾಕತಾಲೀಯವೆಂಬಂತೆ ಇವರೂ ಸುಗಂಧ ವಸ್ತು ತಯಾರಿಕೆಯ ಘಟಕ ಹೊಂದಿದ್ದಾರೆ. ಇವರು ಸಮಾಜವಾದಿ ಎಂಎಲ್ಸಿ ಆಗಿದ್ದಾರೆ. ಕಾನ್ಪುರ ಮೂಲ ಪಿಯೂಷ್ ಜೈನ್ ಸಮಾಜವಾದಿ ಪಕ್ಷ ಬೆಂಬಲಿಗರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿ ನಾಯಕರು ‘ಸಮಾಜವಾದಿಯ ಪರಿಮಳದ್ರವ್ಯದ ಭ್ರಷ್ಟಾಚಾರದ ದುರ್ಗಂಧ’ ಎಂದು ಆರೋಪಿಸುತ್ತಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಇದನ್ನು ಬತ್ತಳಿಕೆ ಮಾಡಿಕೊಂಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಪಂಪಿ ಜೈನ್ ಮೇಲಿನ ದಾಳಿಯಲ್ಲಿ ಐಟಿ ಇಲಾಖೆಗೆ ಏನೂ ಸಿಕ್ಕಿಲ್ಲ. ಕೇಂದ್ರೀಯ ಸಂಸ್ಥೆಗಳನ್ನು ರಾಜಕೀಯ ದ್ವೇಷಕ್ಕಾಗಿ ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ, ಪಿಯೂಷ್ ಜೈನ್ ಮೇಳೆ ನಡೆದ ದಾಳಿಯನ್ನು ಐಟಿ ಇಲಾಖೆ ಬುಧವಾರ ಪರಿಪೂರ್ಣಗೊಳಿಸಿದ್ದು, 196 ಕೋಟಿ ರೂ. ನಗದು. 23 ಕೆ.ಜಿ. ಚಿನ್ನ, 600 ಕೆ.ಜಿ. ಶ್ರೀಗಂಧದ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾಗಿ ಸ್ಪಷ್ಟಪಡಿಸಿದೆ. ಜಿಎಸ್ಟಿ ಬೇಹುಕಾರಿಕಾ ನಿರ್ದೇಶನಾಲಯ (ಡಿಜಿಜಿಐ) ನಿಖರ ಮಾಹಿತಿ ಮೇರೆಗೆ ಆದಾಯ ತೆರಿಗೆ ಇಲಾಖೆಯ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ) ಜಂಟಿ ದಾಳಿ ನಡೆಸಿತ್ತು.
Tax Raids On In UP Amid ‘Mistaken Identity’ Row
ಇದನ್ನು ಓದಿ: ಕಾನ್ಪುರದ ಉದ್ಯಮಿ ಪಿಯೂಷ್ ಜೈನ್ ಬಳಿ 250 ಕೆ.ಜಿ. ಬೆಳ್ಳಿ, 25 ಕೆ.ಜಿ. ಚಿನ್ನ ಪತ್ತೆ
ಇದನ್ನೂ ಓದಿ: ಬಂಡುಕೋರರೆಂದು ತಪ್ಪು ತಿಳಿದು 13 ನಾಗರಿಕರನ್ನು ಕೊಂದ ಸೇನೆ
Discussion about this post