ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ (72) ಕೊನೆಯುಸಿರೆಳೆದಿದ್ದಾರೆ. ತಡರಾತ್ರಿ 2 ಗಂಟೆಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸೋಮವಾರದಿಂದ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ.
ಸತ್ಯಜಿತ್ ಅವರು ಗ್ಯಾಂಗ್ರಿನ್ ನಿಂದ ಒಂದು ಕಾಲು ಕತ್ತರಿಸಲಾಗಿತ್ತು. ಬಳಿಕ ಸಕ್ಕರೆ ಕಾಯಿಲೆ ಮತ್ತು ಇನ್ನಿತರೆ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಬೆಂಗಳೂರಿನ ಹೆಗಡೆನಗರದಲ್ಲಿರುವ ಸತ್ಯಜಿತ್ ಅವರ ಮನೆಯಲ್ಲೇ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು. ಮಧ್ಯಾಹ್ನ 3 ಗಂಟೆಯ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸ್ಯಾಂಡಲ್ ವುಡ್ ನಲ್ಲಿ ಆಪ್ತಮಿತ್ರ, ಮಾಣಿಕ್ಯ, ಅಪ್ಪು, ಗಜ ಸೇರಿದಂತೆ ಸುಮಾರು 600 ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ. ಕನ್ನಡ ಸಿನಿರಂಗದ ಹಿರಿಯ ಕಲಾವಿದರ ಜೊತೆ ಸತ್ಯಜಿತ್ ಖಳನಟ ಹಾಗೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸತ್ಯಜಿತ್ ಎಂದೇ ಪರಿಚಿತರಾಗಿರುವ ಇವರ ಹೆಸರು ಸೈಯದ್ ನಿಜಾಮುದ್ದೀನ್.
Discussion about this post