ನವದೆಹಲಿ: ಸಂಸದೀಯ ಸ್ಥಾಯಿ ಸಮಿತಿಗಳನ್ನು ಕೇಂದ್ರ ಸರ್ಕಾರ ಶನಿವಾರ ಪುನರ್ ರಚನೆ ಮಾಡಿದೆ. 24 ಸ್ಥಾಯಿ ಸಮಿತಿಗಳಲ್ಲಿದ್ದ ರಾಜ್ಯಸಭೆಯ 50 ಸದಸ್ಯರನ್ನು ಬದಲಾವಣೆ ಮಾಡಲಾಗಿದೆ. ಈ ಪೈಕಿ ಕಡಿಮೆ ಹಾಜರಾತಿ ಹೊಂದಿದ (12 ಜನರು ಪೂರ್ಣ ಗೈರು) 28 ಸದಸ್ಯರು ಸೇರಿದ್ದಾರೆ.
ಬಿಜೆಪಿಯ 9, ಟಿಎಂಸಿಯ ಆರು, ಕಾಂಗ್ರೆಸ್ನ ನಾಲ್ವರು, ಶಿವಸೇನೆ, ಸಿಪಿಎಂ, ವೈಎಸ್ಆರ್ ಕಾಂಗ್ರೆಸ್ನ ತಲಾ ಮೂವರು, ಡಿಎಂಕೆ, ಬಿಜೆಡಿಯ ಮತ್ತು ಟಿಆರ್ಎಸ್ನ ತಲಾ ಇಬ್ಬರು ಹಾಗೂ ಇನ್ನಿತರ ಪಕ್ಷಗಳ ತಲಾ ಒಬ್ಬರನ್ನು ವಿವಿಧ ಸ್ಥಾಯಿ ಸಮಿತಿಯ ಸದಸ್ಯತ್ವದಿಂದ ಬದಲಾವಣೆ ಮಾಡಲಾಗಿದೆ.
ಬಿಜೆಪಿಯ ಹಿರಿಯ ನಾಯಕ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರನ್ನು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಕಾನೂನು-ನ್ಯಾಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಳೆದ ಸಂಪುಟ ಪುನರ್ ರಚನೆ ವೇಳೆಯಲ್ಲಿ ಮಂತ್ರಿಗಿರಿ ಕಳೆದುಕೊಂಡ ಹಿರಿಯ ಮುಖಂಡರಾದ ರವಿಶಂಕರ್ ಪ್ರಸಾದ್ ಹಣಕಾಸು ಸಮಿತಿಗೆ ಮತ್ತು ಪ್ರಕಾಶ್ ಜಾವಡೇಕರ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಮಿತಿಗೆ ನೇಮಿಸಲಾಗಿದೆ. ನಿವೃತ್ತ ಸಿಜೆಐ ರಂಜನ್ ಗೊಗೊಯ್ ಅವರನ್ನು ವಿದೇಶಾಂಗ ವ್ಯವಹಾರದ ಸಮಿತಿಯಿಂದ ಮಾಹಿತಿ ತಂತ್ರಜ್ಞಾನ ಸಮಿತಿಗೆ ವರ್ಗಾಯಿಸಲಾಗಿದೆ.
ಉಳಿದಂತೆ ಡಿಎಂಕೆಯ ನಾಯಕಿ ಕನಿಮೋಳಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮಿತಿಗೆ ನೇಮಿಸಲಾಗಿದ್ದು, ರಾಜ್ಯಸಭೆಗೆ ನಾಮಕರಣವಾಗಿರುವ ಕ್ರೀಡಾಪಟು ಮೇರಿ ಕೋಮ್ ನಗರಾಭಿವೃದ್ಧಿ ಸಮಿತಿಗೆ, ಟಿಎಂಸಿಯ ಸುಷ್ಮಿತಾ ದೇವ್ ಶಿಕ್ಷಣ ಸಮಿತಿಗೆ ನೇಮಕಗೊಂಡಿದ್ದಾರೆ. ಟಿಎಂಸಿಯ ಡೆರಿಕ್ ಒಬ್ರಿಯಾನ್ ಸಾರಿಗೆ ಸಮಿತಿಯಿಂದ ಗೃಹ ವ್ಯವಹಾರ ಸಮಿತಿಗೆ ವರ್ಗವಾಗಿದ್ದಾರೆ. ಇದೇ ಸಮಿತಿಗೆ ಕಾಂಗ್ರೆಸ್ನ ಅಭಿಷೇಕ್ ಮನು ಸಿಂಘ್ವಿಯನ್ನು ನೇಮಿಸಲಾಗಿದೆ. ಶಿವಸೇನೆಯ ಸಂಜಯ್ ರಾವತ್ ಅವರನ್ನು ರಕ್ಷಣಾ ಸಮಿತಿಯಿಂದ ವಿದೇಶಾಂಗ ವ್ಯವಹಾರ ಸಮಿತಿಗೆ ಹಾಗೂ ಪ್ರಿಯಾಂಕಾ ಚತುರ್ವೇದಿಯನ್ನು ವಾಣಿಜ್ಯ ಸಮಿತಿಯಿಂದ ಸಾರಿಗೆ ಸಮಿತಿಗೆ ವರ್ಗಾಯಿಸಲಾಗಿದೆ.
ಶಿವಕುಮಾರ್ ಉದಾಸಿಗೆ ಇನ್ನೊಂದು ಸಮತಿಗೆ ನೇಮಕ
ಇಂಧನ ಸ್ಥಾಯಿ ಸಮಿತಿಯಲ್ಲಿರುವ ಕರ್ನಾಟಕದ ಹಾವೇರಿಯ ಸಂಸದ ಶಿವಕುಮಾರ್ ಉದಾಸಿ ಅವರಿಗೆ ಜಲಸಂಪನ್ಮೂಲ ಸಮಿತಿಯ ಸದಸ್ಯತ್ವ ಹೆಚ್ಚುವರಿಯಾಗಿ ಸಿಕ್ಕಿದೆ. ಬಾಗಲಕೋಟೆಯ ಸಂಸದ ಪಿ.ಸಿ.ಗದ್ದಿ ಗೌಡರ್ ಅವರನ್ನು ಕೃಷಿ ಸಮಿತಿಯ ಅಧ್ಯಕ್ಷರಾಗಿ ಮುಂದುವರಿಸಲಾಗಿದೆ.
Parliamentary Standing Committees Reconstituted
ಇದನ್ನು ಓದಿ:ರಾಷ್ಟ್ರ ರಾಜಧಾನಿ ವಲಯ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ ಮಂಡನೆ
ಇದನ್ನು ಓದಿ:ಕೇಂದ್ರದ ಬೆಲೆ ಏರಿಕೆ ನೀತಿಗೆ ವಿಪಕ್ಷನಾಯಕ ಸಿದ್ದರಾಮಯ್ಯ ಕೆಂಡ
Discussion about this post