ಕೆಪಿಸಿಸಿಯಲ್ಲಿ ನಡೆದಿದೆ ಚುನಾವಣಾ ತಾಲೀಮು
೨೯ ಕ್ಷೇತ್ರಗಳಲ್ಲಿ MLC ಚುನಾವಣೆಯಲ್ಲಿ ಕಾಂಗ್ರೆಸ್ ಬೇಟೆಗೆ ಸಿದ್ದತೆ
ಅಹಿಂದ ನಾಯಕರ ಜಯಕ್ಕೆ ಭಾರಿ ಸರ್ಕಸ್
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕರಾಗಿದ್ದು ಮತ್ತೊಮ್ಮೆ ತಮ್ಮ ಹವಾ ನಡೆಸುವ ಎಲ್ಲಾ ಸಿದ್ದತೆ ಕಾಂಗ್ರೆಸ್ ನಲ್ಲಿ ನಡೀತಾ ಇದೆ. ಸಿದ್ದರಾಮಯ್ಯ ಹಿಂದೆ ಆಹಿಂದ ವರ್ಗದ ಮತಗಳು ಇದ್ದೇ ಇವೆ. ಆದರೆ ಸಿದ್ದುಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಮನ ಗೆಲ್ಲಲು ಕಾಂಗ್ರೆಸ್ನಲ್ಲೇ ಪೈಪೋಟಿ ಶುರುವಾಗಿದೆ ಎನ್ನುವುದು ಸಹ ನಿಜವೇ ಆಗಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಬೆಂಬಲ ಸೂಚಿಸಿದೆ. ಇದೇ ವೇಳೆ, ಹಿಂದುಳಿದ ವರ್ಗಗಳ ಒಕ್ಕೂಟಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶೀರ್ವಾದ ದಕ್ಕಿದೆ. ಹೀಗಾಗಿ ಹಿಂದುಳಿದ ವರ್ಗಗಳನ್ನ ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ಹೊಸ ದಾಳ ಪ್ರಯೋಗಿಸಿದ್ದು, ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಮನ ಗೆಲ್ಲಲು ಡಿಕೆಶಿ ತಂತ್ರ ಹೂಡಿದ್ದಾರೆ ಎಂಬುದು ಎದ್ದುಕಾಣುತ್ತಿದೆ.
ಹಿಂದುಳಿದ ವರ್ಗಗಳ ಮನ ಗೆಲ್ಲಲು ಡಿ.ಕೆ.ಶಿವಕುಮಾರ್ ಪಕ್ಕಾ ಪ್ಲ್ಯಾನ್ ರೂಪಿಸಿದ್ದಾರೆ. ಸಂವಾದ ಕಾರ್ಯಕ್ರಮ ಮೂಲಕ ಸಣ್ಣ ಸಮುದಾಯದ ಒಲವು ಗಳಿಸಲು ಸಹ ಮುಂದಾಗಿದ್ದಾರೆ. ಹೊಸದಾಗಿ ತಲೆ ಎತ್ತಿರುವ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಡಿಕೆಶಿಗೆ ಸಾಥ್ ನೀಡಿದೆ.
ಸಿದ್ದರಾಮಯ್ಯ ಬೆಂಬಲಿತ ಹಿಂದುಳಿದ ಒಕ್ಕೂಟದಿಂದಲೂ ಸಕ್ರಿಯ ಹೋರಾಟ ಆರಂಭವಾಗಿದೆ. ಅತಿ ಹಿಂದುಳಿದ ವರ್ಗಗಳ ವೇದಿಕೆ ಅಖಾಡಕ್ಕೆ ಇಳಿದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಪರ್ಯಾಯ ಹೋರಾಟ ಆರಂಭ ಪಡೆದಿದೆ. ಒಕ್ಕೂಟದ ಹೋರಾಟಕ್ಕೆ ನಾಯಕ ಸಿದ್ದರಾಮಯ್ಯರಿಂದ ಸಂಪೂರ್ಣ ಬೆಂಬಲ ಘೋಷಣೆಯಾಗಿದೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ಒಂದೇ ಅಖಾಡದ ಎರಡು ದಿಕ್ಕಿನಲ್ಲಿದ್ದಾರೆ. ಮೇಲ್ನೋಟಕ್ಕೆ ಇದು ಹಿಂದುಳಿದ ವರ್ಗಗಳ ಮತಗಳನ್ನು ಕ್ರೋಡೀಕರಿಸಲು ಮಾಡುವ ಪ್ರಯತ್ನ ಎಂದು ಬಿಂಬಿತವಾದರೂ, ಕಾಂಗ್ರೆಸ್ನಲ್ಲಿ ದೊಡ್ಡ ಮಟ್ಟಕ್ಕೆ ಏರಿರುವ ಸಿದ್ದರಾಮಯ್ಯರನ್ನು ಕಟ್ಟಿಹಾಕಲು ನಡೆಯುತ್ತಿರುವ ತಂತ್ರ ಎಂದೇ ಹೇಳಲಾಗುತ್ತಿದೆ. ಆದ್ರೆ ಈ ಯತ್ನ ಗೆಲ್ಲುತ್ತಾ ಅನ್ನೋ ಅನುಮಾನ ಸಹ ಇದೆ.
ಕೆಪಿಸಿಸಿ ಸಭೆಯಲ್ಲಿ ಜಿಲ್ಲಾವಾರು ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಸೇರಿದಂತೆ ಕಾಂಗ್ರೆಸ್ ಪಟಾಲಂನ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಚುರುಕುಗೊಳಿಸುವ ಯತ್ನ ಸಹ ಇದಾಗಿದೆ ಎಂದು ಹೇಳಲಾಗಿದೆ.
Discussion about this post