ಚಿಕ್ಕಮಗಳೂರು: ನಗರಸಭೆ ಆವರಣದಲ್ಲಿರುವ ಉದ್ಯಾನವನವನ್ನು ರೂ.೯೫ ಲಕ್ಷ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಸಿ.ಟಿ ರವಿ ತಿಳಿಸಿದರು.
ನಗರದ ಬೈಪಾಸ್ ರಸ್ತೆಯಿಂದ-ದೀಪಾ ನರ್ಸಿಂಗ್ ಹೋಂಗೆ ತೆರಳುವ ರಸ್ತೆಗೆ ಕಾಂಕ್ರಿಟ್ ಜತೆಗೆ ಕೆಎಸ್ಆರ್ಟಿಸಿ ಡಿಪೋ ಹಿಂಭಾಗದಲ್ಲಿರುವ ಸ್ಮಶಾನಕ್ಕೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಗರಸಬೆ ಆವರಣದಲ್ಲಿನ ಉದ್ಯಾನವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಿಯಾಯೋಜನೆ ಸಿದ್ದಪಡಿಸಿದ್ದು ಅದಕ್ಕಾಗಿ ೯೫ ಲಕ್ಷ ಅನುದಾನ ಮೀಸಲಿರಿಸುವ ಮೂಲಕ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಅದರಂತೆ ೨೦ ಲಕ್ಷ ವೆಚ್ಚದಲ್ಲಿ ನಗರದ ಬೈಪಾಸ್ ರಸ್ತೆಯ ಸಿಡಿಎ ಲೇಔಟ್ ಪಕ್ಕದ ಲ್ಯಾಂಡ್ ಬ್ಯಾಂಡ್ ಜಾಗದ ಅಭಿವೃದ್ಧಿ, ಬೈಪಾಸ್ ರಸ್ತೆಯಿಂದ-ದೀಪಾ ನರ್ಸಿಂಗ್ ಹೋಂಗೆ ತೆರಳುವ ಕೆಳಭಾಗದ ರಸ್ತೆಗೆ ಕಾಂಕ್ರಿಟ್ ಕಾಮಗಾರಿಗೆ ೨೦ ಲಕ್ಷ, ಕೆಎಸ್ಆರ್ಟಿಸಿ ಡಿಪೋ ಹಿಂಭಾಗದಲ್ಲಿರುವ ಸ್ಮಶಾನಕ್ಕೆ ತೆರಳುವ ರಸ್ತೆ ಅಭಿವೃದ್ಧಿ ೧೫ ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.
ಬಡತನ ನಿರ್ಮೂಲನಾ ಕೋಶದ ೨೦೨೧-೨೨ ನೇ ಸಾಲಿನಲ್ಲಿ ವಿವಿಧ ಯೋಜನೆ ಅಡಿಯಲ್ಲಿ ೬೦ ವಿಕಲಚೇತನರಿಗೆ ತ್ರಿಚಕ್ರ ವಾಹನ , ಪಕ್ಕಾ ಮನೆ ನಿರ್ಮಾಣಕ್ಕೆ ಆಯ್ದ ೩ ಜನ ಫಲಾನುಭವಿಗಳಿಗೆ ತಲಾ ಮೂರು ಲಕ್ಷ , ಸಣ್ಣ ಉದ್ಯಮ ಕೈಗೊಳ್ಳಲು ನೆರವಾಗುವಂತೆ ೧ ಲಕ್ಷ ಸಹಾಯ ಧನ, ೮೩ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಪ್ರೋತ್ಸಾಹಧನ ವಿತರಿಸಲಾಗಿದೆ ಎಂದು ತಿಳಿಸಿದರು.
ಯುಜಿಡಿ, ಅಮೃತ್ ಯೋಜನೆಗಳು ಪೂರ್ಣಗೊಂಡ ಬಳಿಕ ಡಾಂಬರೀಕರಣ ಕಾಮಗಾರಿ ಆರಂಭಿಸಲಾಗುವುದು, ಪೌರಕಾರ್ಮಿಕರಿಗೆ ಮೀಸಲಿಟ್ಟ ಶೇ ೨೦ ರ ಭಾಗದಲ್ಲಿ ಖಾಯಂ ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರಿಗೆ ಪಕ್ಕಾ ಮನೆ ನಿರ್ಮಾಣಕ್ಕೆ ಮೂವರು ಫಲಾನುಭವಿಗೆ ತಲಾ ಒಂದು ಲಕ್ಷ ರೂ ಸಾಲ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್, ನಗರ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣ ಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಹೆಚ್.ಡಿ.ತಮ್ಮಯ್ಯ, ಪುಷ್ಪರಾಜ್, ದೇವರಾಜ್ಶೆಟ್ಟಿ, ಮುತ್ತಯ್ಯ, ಸೇರಿದಂತೆ ಮತ್ತಿತರರು ಇದ್ದರು.
Discussion about this post