ಚಿಕ್ಕಮಗಳೂರು: ನಗರ ಸಭಾ ವ್ಯಾಪ್ತಿಯಲ್ಲಿನ ವಿವಿಧ ವಾರ್ಡ್ಗಳಲ್ಲಿ ರಸ್ತೆಗಳು ಕಳಪೆ ಕಾಮಗಾರಿಯಿಂದಾಗಿ ಗುಂಡಿ ಬಿದ್ದು ಸಂಪೂರ್ಣವಾಗಿ ಹದಗೆಟ್ಟಿದ್ದು ಶೀಘ್ರದಲ್ಲಿಯೇ ದುರಸ್ಥಿ ಕಾರ್ಯ ಕೈಗೊಳ್ಳದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಎಚ್ಚರಿಸಿದರು.
ಅವರು ನಗರದ ಅಂಜುಮಾನ್ ಬೀದಿಯಲ್ಲಿನ ಹದಗೆಟ್ಟ ರಸ್ತೆ ದುರಸ್ಥಿಗೊಳಿಸುವಂತೆ ಒತ್ತಾಯಿಸಿ ಗುಂಡಿಬಿದ್ದ ರಸ್ತೆಯುದ್ದಕ್ಕು ಗಿಡ ನೆಡುವ ಮೂಲಕ ಪ್ರತಿಭಟಿಸಿ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂಪಾಯಿ ಅಭಿವೃದ್ಧಿಯಾಗಿದೆ ಎಂದು ಇಲ್ಲಿನ ಸ್ಥಳೀಯ ಶಾಸಕರು ಎಲ್ಲೆಡೆ ಹೇಳುತ್ತಾರೆ ಆದರೆ ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳು ಅವರ ಕಣ್ಣಿಗೆ ಕಾಣುವುದಿಲ್ಲ, ಟಿಪ್ಪು ನಗರ, ಅಂಜುಮಾನ್ ಬೀದಿ ಸೇರಿದಂತೆ ವಿವಿಧ ವಾರ್ಡ್ಗಳಲ್ಲಿ ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳು ಹದಗೆಟ್ಟು ಅಪಘಾತಕ್ಕೆ ದಾರಿ ಮಾಡಿಕೊಡುತ್ತಿವೆ ಎಂದು ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಯುಜಿಡಿ, ಅಮೃತ್ ಯೋಜನೆ ಕಾಮಗಾರಿ ಹೆಸರಲ್ಲಿ ರಸ್ತೆಗಳನ್ನು ಅಗೆದು ಗುಂಡಿ ಮಾಡಲಾಗುತ್ತಿದೆ. ಈಗಾಗಲೇ ಈ ಯೋಜನೆಗಳಲ್ಲಿ ಕೋಟ್ಯಾಂತರ ಭ್ರಷ್ಟಾಚಾರ ನಡೆದು ಕಾಮಗಾರಿ ಸಂಪೂರ್ಣವಾಗಿ ಹಳ್ಳಹಿಡಿದಿದೆ ಇಲ್ಲಿನ ಅಧಿಕಾರಿಗಳು ಕೂಡ ಜನಪ್ರತಿನಿಧಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ನಗರಸಭಾ ವ್ಯಾಪ್ತಿಗೆ ಒಳಪಡುವ ವಿವಿಧ ವಾರ್ಡ್ಗಳಲ್ಲಿ ರಸ್ತೆಗಳು ಗುಂಡಿಬಿದಿದ್ದು ಶೀಘ್ರದಲ್ಲಿಯೇ ದುರಸ್ಥಿ ಕಾರ್ಯಕ್ಕೆ ಆಯುಕ್ತರು ಗಮನಹರಿಸದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು. ಕೋವಿಡ್ ಲಾಕ್ಡೌನ್, ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಜನಸಾಮಾನ್ಯರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಇದರ ನಡುವೆಯೇ ನಗರಸಭೆ ಮನೆಯ ಕಂದಾಯವನ್ನು ದುಪ್ಪಟ್ಟು ಮಾಡಿದೆ. ಬಡವರ ರಕ್ತ ಹೀರುವ ಆಡಳಿತ ಸರ್ಕಾರ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಗರ ಅಧ್ಯಕ್ಷ ತನೋಜ್ಕುಮಾರ್ ಮಾತನಾಡಿ ಅಂಜುಮಾನ್ ಬೀದಿ, ಟಿಪ್ಪುನಗರಗಳಲ್ಲಿ ರಸ್ತೆ ದುರಸ್ಥಿಯಾಗದೆ ಹಲವು ವರ್ಷಗಳೇ ಉರುಳಿವೆ, ಇಲ್ಲಿಂದ ಆಯ್ಕೆಗೊಂಡಿರುವ ಕೌನ್ಸಿಲರ್ ಕೂಡ ಇತ್ತ ಕಡೆ ಮುಖ ಮಾಡಿಲ್ಲ, ವೃದ್ಧರು, ಮಕ್ಕಳು, ಗರ್ಭಿಣಿಯರು, ಸವಾರರು ಓಡಾಡುವ ರಸ್ತೆಗಳಾಗಿದ್ದು ಗುಂಡಿ ಬಿದ್ದ ಕಾರಣ ಅಪಘಾತಕ್ಕೆ ಬಾಯ್ತೆರೆದು ಕಾದುಕುಳಿತಿವೆ ಎಂದು ದೂಷಿಸಿದರು.
ಟಿಪ್ಪು ನಗರದ ವಾರ್ಡ್ನ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದೆ, ವಾಹನಗಳ ಅಪಘಾತಕ್ಕೆ ಬಾಯ್ದೆರಿದಿವೆ. ಪೈಪ್ಲೈನ್ ಹೊಡೆದು ಹೋಗಿ ರಸ್ತೆ ತುಂಬೆಲ್ಲ ನೀರು ಹರಿಯುತ್ತಿದ್ದು ಸಕಾಲಕ್ಕೆ ಕುಡಿಯುವ ನೀರು ಬರುತ್ತಿಲ್ಲ, ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಹಲವು ಬಾರಿ ಮನವಿ ಮಾಡಲಾಗಿದೆ ಆದರೂ ಇದುವರೆಗೂ ಕ್ರಮವಹಿಸಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ವಾಸೀಂ ಷರೀಫ್ ಮಾತನಾಡಿ ಅಲ್ಪಸಂಖ್ಯಾತರು ಎನ್ನುವ ತಾರತಮ್ಯ ಬಿಟ್ಟು ರಸ್ತೆಯ ಅಭಿವೃದ್ಧಿಗೆ ನಗರಸಭೆ ಹಾಗೂ ಸ್ಥಳೀಯ ಶಾಸಕರು ಗಮನ ಹರಿಸಬೇಕು, ಅಧಿಕಾರಿಗಳು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುವುದನ್ನು ಬಿಟ್ಟು ನಗರದ, ನಗರ ಸಮಸ್ಯೆಗಳತ್ತ ಗಮನಹರಿಸಲಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ರಾಯಲ್ ಷರೀಫ್, ಮೊಹಮ್ಮದ್, ರಿಜ್ವಾನ್, ಪಾಜಿಲ್, ಷಹಬುದ್ದೀನ್, ರಾಕಿ ಮುಕರಂ, ಸೇರಿದಂತೆ ಮತ್ತಿತರರು ಇದ್ದರು.

























Discussion about this post