ಚಿಕ್ಕಮಗಳೂರು: ಕೋವಿಡ್-೧೯ ಲಾಕ್ಡೌನ್ನಿಂದ ರಾಜ್ಯದಲ್ಲಿ ೨೫ ಜನ ವೃತ್ತಿಪರ ನೇಕಾರರು ಸರಣಿ ಆತ್ಮಹತ್ಯೆಗೆ ಶರಣಾಗಿದ್ದು, ಅವರ ನೆರವಿಗೆ ರಾಜ್ಯಸರ್ಕಾರ ಸ್ಪಂದಿಸುವಂತೆ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಡಾ.ಕೆ.ಸುಂದರಗೌಡ ಮನವಿ ಮಾಡಿದ್ದಾರೆ.
ಅವರು ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ ರಾಜ್ಯದಲ್ಲಿ ೬೬ ಲಕ್ಷ ಜನ ವೃತ್ತಿಪರ ನೇಕಾರರಿದ್ದು ಕನಿಷ್ಟ ೫ ರಿಂದ ೬ ಲಕ್ಷ ಜನ ನೇಕಾರ ವೃತ್ತಿಯನ್ನು ನಂಬಿ ಜೀವನ ನಡೆಸುತತಿದ್ದಾರೆ ಎಂದಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಯಾವುದೇ ಸಮರ್ಪಕ ಸೌಲಭ್ಯವಿಲ್ಲದೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನೇಕಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದು ಹಿಂದಿನ ಸರ್ಕಾರದ ಜವಳಿ ಸಚಿವರು ನೇಕಾರರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
ಸರ್ಕಾರಗಳು ನೇಕಾರರನ್ನು ಬಳಸಿಕೊಂಡು ಅಧಿಕಾರ ಅನುಭವಿಸುತ್ತಿದೆ. ಇದರಿಂದ ಅವರಿಗೆ ಅನ್ಯಾಯವಾಗುತ್ತಿದ್ದು ಕೈಮಗ್ಗ, ಜವಳಿ ಇಲಾಖೆ ಕಾರ್ಮಿಕ ಇಲಾಖೆಗಳು ಕೂಡ ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರ ಬಗ್ಗೆ ಯಾವುದೇ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ನೇಕಾರರ ಕುಟುಂಬ ಸಂಪೂರ್ಣ ಸಾಲದ ಹೊರೆಯಿಂದ ಸಾಕಷ್ಟು ತೊಂದರೆಗೆ ಈಡಾಗಿದ್ದು, ಅವರಿಗೆ ಸೂಕ್ತ ಪರಿಹಾರ ದೊರಕದೆ ಇರುವುದರಿಂದ ಆತ್ಮಹತ್ಯೆಗೆ ಪರೋಕ್ಷವಾಗಿ ಪ್ರಚೋದಿಸುವಂ ತಾಗಿದೆ. ಈಗಾಗಲೇ ಪ್ರತಿಯೊಂದು ಆತ್ಮಹತ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿ ಸರ್ಕಾರಕ್ಕೆ ಮನವರಿಕೆ ಮಾಡಿದರೂ ಸಹ ಪ್ರಯೋಜನವಾಗಿಲ್ಲ ಎಂದಿದ್ದಾರೆ.
ನೇಕಾರರ ನ್ಯಾಯ ಸಮ್ಮತ ಹೋರಾಟಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷವು ರಾಜ್ಯಾದ್ಯಂತ ಹೋರಾಟದ ಮೂಲಕ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಯುವ ಅಧ್ಯಕ್ಷ ಪವನ್.ಡಿ.ಎಸ್.ಶೆಟ್ಟಿ, ಪಕ್ಷದ ಮುಖಂಡ ಎಂ.ಪಿ.ಈರೇಗೌಡ ಇದ್ದರು.
Discussion about this post