ಚಿಕ್ಕಮಗಳೂರು,ಆ.೩೧: ರಾಜ್ಯದ ಆಂತರಿಕ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ಅವರು ಇಂದು ಕಡೂರು ಪೊಲೀಸ್ ತರಬೇತಿ ಶಾಲೆ ಕವಾಯತು ಮೈದಾನದಲ್ಲಿ ನಡೆದ ೦೫ ನೇ ತಂಡದ ಸಿವಿಲ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ನಾವು ನೆಮ್ಮದಿಯಿಂದ ಜೀವನ ನಡೆಸಬಹುದು, ನಮ್ಮ ಮಾನ, ಪ್ರಾಣ, ಆಸ್ತಿಯನ್ನು ೨೪*೭ ಕಾಪಾಡುತ್ತಾರೆ ಹಾಗೂ ಪೊಲೀಸರ ರಕ್ಷಣೆ ನಮ್ಮ ಮೇಲಿದೆ ಎಂಬ ಭರವಸೆಯನ್ನು ಸಾರ್ವಜನಿಕರಲ್ಲಿ ನಮ್ಮ ದಿನ ನಿತ್ಯದ ಕಾರ್ಯ ಚಟುವಟಿಕೆಯಿಂದ ಹುಟ್ಟಿಸಬೇಕು ಎಂದ ಅವರು ಪ್ರಸ್ತುತ ಇರುವ ೧ ಲಕ್ಷ ಪೊಲೀಸ್ ಕಾರ್ಯಪಡೆಯ ಜೊತೆಗೆ ಇಂದಿನಿಂದ ಹೊಸ ಬಿಸಿ ರಕ್ತ ಸೇರ್ಪಡೆಯಾಗುತ್ತಿದ್ದು ನಿಮ್ಮ ಪ್ರತಿಭಾವಂತ ಕಾರ್ಯ ವೈಖರಿಯಿಂದ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸಬೇಕು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರೀಟಿಷರು ಈ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟರೆ ಭಾರತೀಯರು ದೇಶವನ್ನು ಉಳಿಸಿಕೊಳ್ಳುವುದಿಲ್ಲ ಹಾಗೂ ಆಳುವ ಶಕ್ತಿಯು ಇಲ್ಲವೆಂದು ಹೇಳಿದ್ದರು ಆದರೆ ಸ್ವಾತಂತ್ರ್ಯ ಬಂದು ೭೦ ವರ್ಷಗಳು ಕಳೆದರು ದೇಶಕ್ಕೆ ಪ್ರಬಲವಾದ ಆಳುವ ಶಕ್ತಿ ಇದೆ ಎಂಬುವುದನ್ನು ನಮ್ಮ ಸೇನೆ ಹಾಗೂ ಪೊಲೀಸರು ತೋರಿಸಿದ್ದ್ದು, ಇಡಿ ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿದೆ, ಇದ್ದಕ್ಕೆ ಕಾರಣ ದೇಶದ ಗಡಿ ಕಾಯುತ್ತಿರುವ ಸೈನಿಕರು ಹಾಗೂ ಆಂತರಿಕ ಭದ್ರತೆ ಕಾಪಾಡುತ್ತಿರುವ ಪೊಲೀಸ್ ಇಲಾಖೆ ಎಂದು ತಿಳಿಸಿದರು.
ಭಾರತೀಯ ಸೈನ್ಯದಲ್ಲಿ ಹೇಳುವ ಹಾಗೇ ತರಬೇತಿಯಲ್ಲಿ ಎಷ್ಟು ಬೆವರು ಸುರಿಸುತ್ತಾರೋ ಯುದ್ದ ಭೂಮಿಯಲ್ಲಿ ಅಷ್ಟು ಕಡಿಮೆ ರಕ್ತ ಸುರಿಸುತ್ತಾರೆ ಎಂಬಂತೆ ಪೊಲೀಸ್ ಇಲಾಖೆಗೆ ಸರ್ಕಾರವು ಉತ್ತಮ ತರಬೇತಿಯನ್ನು ನೀಡಿದ್ದು ತರಬೇತಿಯಿಂದಾಗಿ ತಮ್ಮ ಕರ್ತವ್ಯದಲ್ಲಿ ಎಂತಹ ಅಪರಾಧಗಳು ನಡೆದರು ಅವುಗಳನ್ನು ಮೆಟ್ಟಿನಿಲ್ಲುವಂತಹ ಹೊಣೆಗಾರಿಕೆ ತಮ್ಮ ಮೇಲಿದ್ದು ಈ ನಿಟ್ಟಿನಲ್ಲಿ ಉತ್ತಮ ಕಾರ್ಯನಿರ್ವಹಿಸುವಂತೆ ತರಬೇತಿ ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಭಾರತೀಯ ಸೇನಾಪಡೆಯು ಜಗತ್ತಿನಲ್ಲಿ ೩ನೇ ಅತ್ಯಂತ ದೊಡ್ಡ ಪಡೆಯಾಗಿದ್ದು, ಹಾಗೆಯೆ ಭಾರತೀಯ ಪೊಲೀಸ್ ಇಲಾಖೆ ಅದರಲ್ಲೂ ಕರ್ನಾಟಕ ಪೊಲೀಸ್ ಇಲಾಖೆಗೆ ಅತ್ಯಂತ ಒಳ್ಳೆಯ ಕೀರ್ತಿ ಇದೆ ಎಂದ ಅವರು ಪೊಲೀಸ್ ಇಲಾಖೆಯು ವೈಜ್ಞಾನಿಕವಾಗಿ ಪ್ರಕರಣಗಳನ್ನು ಪತ್ತೆ ಹಚ್ಚುವಂತಹ ಕಲೆಯನ್ನು ಕರಗತ ಮಾಡಿಕೊಂಡಿದ್ದು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಘಟನೆಯಲ್ಲಿ ಕೇವಲ ೮೫ ಗಂಟೆಗಳಲ್ಲಿ ಅಪರಾಧಿಗಳನ್ನು ಬಂಧಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು.
ಸರ್ಕಾರವು ಕಳೆದ ೩ ವರ್ಷಗಳಲ್ಲಿ ಪೊಲೀಸ್ ಇಲಾಖೆಗೆ ನೀಡುವಂತಹ ಎಲ್ಲಾ ಸೌಲಭ್ಯಗಳನ್ನು ನೀಡಿದ್ದು ಪೊಲೀಸ್ ಇಲಾಖೆಯ ಕುಟುಂಬವು ನೆಮ್ಮದಿಯಿಂದ ಇರುವ ನಿಟ್ಟಿನಲ್ಲಿ ಮೂಲ ಸೌಕರ್ಯಗಳಾದ ವಸತಿ, ಶುದ್ದ ಕುಡಿಯುವ ನೀರು, ವಿದ್ಯುತ್, ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಸ್ಕಾಲರ್ ಶಿಪ್ ವ್ಯವಸ್ಥೆ, ಆರೋಗ್ಯ ಸುಧಾರಣೆಗಾಗಿ ಆರೋಗ್ಯ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು ಈಗಾಗಲೇ ೪೯% ಪೋಲಿಸ್ ಕಾನ್ಸ್ಟೇಬಲ್ಗಳಿಗೆ ಡಬಲ್ ಬೆಡ್ ರೂಮ್ಗಳಿರುವ ಮನೆಗಳನ್ನು ನೀಡಿದ್ದು, ಇನ್ನೂ ಹೆಚ್ಚಿನ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಸಮಾಜದಲ್ಲಿ ಅಪರಾಧಿಗಳು ಹಾಗೂ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುತ್ತಿರುವವರಿಗೆ ಸಿಂಹ ಸ್ವಪ್ನರಾಗಿ ಹಾಗೂ ಉತ್ತಮ ನಾಗರೀಕರಿಗೆ ರಕ್ಷಕರಾಗಿ, ಸ್ನೇಹಿತನಾಗಿ ಕಾಣುವ ಮೂಲಕ ಸದ್ಗುಣಗಳನ್ನು ಪಾಲನೆ ಮಾಡಿಕೊಂಡು ಕರ್ತವ್ಯದಲ್ಲಿ ಯಶಸ್ವಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಡೂರು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಶ್ರೀನಿವಾಸ್ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ತರಬೇತಿಯಲ್ಲಿ ಒಳಾಂಗಣ, ಹೊರಾಂಗಣ, ಹಾಗೂ ರೈಫಲ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪಿ.ಹರಿಶೇಖರನ್, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ತರಬೇತಿ ಬೆಂಗಳೂರು ಇವರು ಎಲ್ಲರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕಡೂರು ವಿಧನಾ ಸಭಾ ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್, ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ, ಜಿಲ್ಲಾಧಿಕಾರಿ ಕೆ.ಎನ್ ರಮೇಶ್, ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್. ಅಕ್ಷಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

























Discussion about this post