ಚಿಕ್ಕಮಗಳೂರು : ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲು ಮುಂದಾಗಿರುವ ನೂತನ ವಸತಿ ನಿವೇಶನ ಬಡಾವಣೆಗೆ ಇಂದಾವರದ ಭೂಮಾಲೀಕ ರೈತರು ತಮ್ಮ ಜಮೀನು ನೀಡಲು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್ ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ನಡೆದ ಇಂದಾವರ ಗ್ರಾಮದ ರೈತರೊಂದಿಗಿನ ಸಭೆಯಲ್ಲಿ ಚರ್ಚಿಸಿ ಮಾತನಾಡಿದ ಸಿಡಿಎ ನಿರ್ಮಾಣ ಮಾಡಲು ಮುಂದಾಗಿರುವ ನೂತನ ವಸತಿ ಬಡಾವಣೆಗೆ ಇಂದಾವರದ ಶೇ ೯೦ಕ್ಕೂ ಹೆಚ್ಚು ರೈತರು ಸ್ವಯಂಪ್ರೇರಿತವಾಗಿ ತಮ್ಮ ಜಮೀನು ನೀಡಲು ಸಹಮತ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ರೈತರ ಜಮೀನುಗಳಲ್ಲಿ ಅಡಿಕೆ, ಕಾಫಿ, ಸಿಲ್ವರ್ ಮತ್ತಿತ್ತರ ಬೆಳೆಗಳು ಇದ್ದಲ್ಲಿ ಅದಕ್ಕೆ ತೋಟಗಾರಿಕೆ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
ಪ್ರಾಧಿಕಾರದ ಯೋಜನೆಯಿಂದ ಸಿಡಿಎಗೆ ಲಭಿಸುವ ಶೇ ೫೦ ರಷ್ಟು ವಸತಿ ನಿವೇಶನಗಳಿಂದ ಬಡಾವಣೆ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ನಿಯಾಮಾನುಸಾರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಯಾವುದೇ ರೈತರನ್ನು ಜಮೀನು ನೀಡುವಂತೆ ಒತ್ತಡ ಹೇರುವುದಿಲ್ಲ ಬದಲಾಗಿ ಮನವೊಲಿಸುವ ಕಾರ್ಯ ಮಾಡಲಾಗುವುದು. ಸರ್ಕಾರದ ವಿನೂತನ ಶೇ ೫೦:೫೦ ಸಹಭಾಗಿತ್ವ ಅಭಿವೃದ್ಧಿ ಯೋಜನೆಯಲ್ಲಿ ಭೂಮಾಲೀಕರು ಯೋಜನೆಯ ಸಹಭಾಗಿತ್ವ ಪಾಲುದಾರರಾಗಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದಾಗಿದೆ ಎಂದರು.
ವಾಜಪೇಯಿ ಬಡಾವಣೆ ಮಾದರಿಯಲ್ಲಿ ಸುಸ್ಸಜ್ಜಿತವಾದ ಹೈಟೆಕ್ ಬಡಾವಣೆ ನಿರ್ಮಿಸುವ ಉದ್ದೇಶ ಹೊಂದಲಾಗಿದ್ದು, ರೈತರ ಸಹಕಾರ ಅತ್ಯಂತ ಅಗತ್ಯ, ಎಲ್ಲಾ ರೈತರು ಸಹಮತದೊಂದಿಗೆ ಸಿಡಿಎ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿದ್ದಲ್ಲಿ ಶೀಘ್ರದಲ್ಲಿ ಕಾರ್ಯಪ್ರವೃತ್ತವಾಗಲಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ ಇಂದಾವರ ಗ್ರಾಮಸ್ಥರ ಬೇಡಿಕೆಯ ಮೇರೆಗೆ ಸಭೆ ನಡೆಸಲಾಗಿದ್ದು ಶೇ ೯೦ ರಷ್ಟು ಪಹಣಿ ಹೊಂದಿದ ಭೂಮಾಲೀಕರು ತಮ್ಮ ಜಮೀನುಗಳನ್ನು ಸಿಡಿಎ ನಿವೇಶನ ಬಡಾವಣೆ ನಿರ್ಮಾಣಕ್ಕೆ ನೀಡಲು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ಸುಮಾರು ೨೫೦ ಎಕರೆ ಪ್ರದೇಶದಲ್ಲಿ ಸುಸ್ಸಜ್ಜಿತವಾದ ಬಡಾವಣೆ ನಿರ್ಮಾಣವಾಗಲಿದ್ದು ಶಾಲೆ, ಕಾಲೇಜು, ಬಸ್ನಿಲ್ದಾಣ, ರಸ್ತೆ, ಚರಂಡಿ, ಒಳಗೊಂಡAತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಪ್ರಾಧಿಕಾರದ ನಗರ ಯೋಜನಾ ಸದಸ್ಯ ಶಿವಕುಮಾರ್ ಮಾತನಾಡಿ ಸ್ವಯಂ ಪ್ರೇರಿತವಾಗಿ ಇಂದಾವರ ರೈತರು ತಮ್ಮ ಜಮೀನು ನೀಡಲು ಮುಂದಾಗಿದ್ದು ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಲ್ಲಿ ವಾಜಪೇಯಿ ಬಡಾವಣೆಗಿಂತಲೂ ಉತ್ಕೃಷ್ಟ ಸೌಲಭ್ಯ ಒಳಗೊಂಡ ಸುಸ್ಸಜ್ಜಿತ ಹೈಟೆಕ್ ಬಡಾವಣೆ ಮುಂದಿನ ೨ ವರ್ಷದೊಳಗೆ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.
ಬಡಾವಣೆ ನಿರ್ಮಾಣಕ್ಕೆ ೨೫೦ ಎಕರೆಯಷ್ಟು ಜಾಗದ ಅವಶ್ಯಕತೆ ಇದ್ದು ರೈತರ ಸಹಭಾಗಿತ್ವ ಅವಶ್ಯಕ ಎಂದು ಹೇಳಿದರು. ಇಂದಾವರ ಗ್ರಾಮಸ್ಥರಾದ ಲೋಕೇಶ್ ಮಾತನಾಡಿ ಪಹಣಿ ಹೊಂದಿರುವ ರೈತರು ಸ್ವಯಂ ಪ್ರೇರಿತವಾಗಿ ಸಿಡಿಎಗೆ ಭೂಮಿ ನೀಡಲು ಒಪ್ಪಿಗೆ ನೀಡಲಾಗಿದೆ. ಜತೆಗೆ ೧೨ ಸಾವಿರ ಅಡಿ ಜಾಗವನ್ನು ರೈತರಿಗೆ ಮೀಸಲಿಡಬೇಕು, ನಿವೇಶನದಲ್ಲಿ ಅಳತೆ ಶಿಸ್ತುಬದ್ದವಾಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ ಇದಕ್ಕೆ ಸಿಡಿಎ ಒಪ್ಪಿಗೆ ನೀಡಿದ್ದಲ್ಲಿ ಬಡಾವಣೆ ನಿರ್ಮಾಣಕ್ಕೆ ರೈತರುಗಳು ಚರ್ಚಿಸಿ ಜಾಗ ಬಿಟ್ಟುಕೊಡುವುದಾಗಿ ತಿಳಿಸಿದರು.
ಮತ್ತೋರ್ವ ಗ್ರಾಮಸ್ಥ ರೇವಣ್ಣಗೌಡ ಮಾತನಾಡಿ ಇಂದಾವರದ ಗ್ರಾಮದ ರೈತರು ಈ ಹಿಂದೆ ಸಭೆ ನಡೆಸಿ ಚರ್ಚಿಸಿದಂತೆ ಸಹಮತದಿಂದಲೇ ಭೂಮಿ ನೀಡಲು ಮುಂದಾಗಿದ್ದೇವೆ, ಭೂಮಿಗೆ ತಕ್ಕಂತೆ ಪರಿಹಾರ ನೀಡಬೇಕು, ನಿವೇಶನ ಮೀಸಲಿರಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಶೇ ೮೦ ರಷ್ಟು ರೈತರು ಒಪ್ಪಿಗೆ ನೀಡಿದ್ದು ಕಾಫಿ, ಅಡಕೆ, ಸಿಲ್ವರ್ ಮತ್ತಿತ್ತರ ಬೆಳೆ ಬೆಳೆದ ಭೂಮಿಗೆ ತಕ್ಕ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥ ಯತೀಶ್ ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಮಂಜುನಾಥ್, ರಾಜಕುಮಾರ್, ಲೋಕೇಶ್, ವಿರೂಪಾಕ್ಷ ಸೇರಿದಂತೆ ಮತ್ತಿತರರು ಇದ್ದರು.

























Discussion about this post