ಚಿಕ್ಕಮಗಳೂರು : ಕೊಡುಗೈ ದಾನಿ ಸಾಂಸ್ಕೃತಿಕ ರಾಯಭಾರಿ ಗೌರಮ್ಮ ಬಸವೇಗೌಡ ಅವರ ಅಂತಿಮ ದರ್ಶನ ಪಡೆದು ನಗರದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ವಿವಿಧ ಸಮಾಜದ ಗಣ್ಯರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಜೊತೆಗೆ ಮೌನ ಆಚರಿಸುವ ಮೂಲಕ ಸಾರ್ವಜನಿಕ ಶ್ರದ್ಧಾಂಜಲಿ ಅರ್ಪಿಸಿದರು.
ನಂತರ ಮಾತನಾಡಿದ ವಿವಿಧ ಪಕ್ಷದ ಹಾಗೂ ಸಂಘಟನೆಯ ಮುಖಂಡರುಗಳು ಕೊಡುಗೈ ದಾನಿಯಾಗಿದ್ದ ಗೌರಮ್ಮ ಬಸವೇಗೌಡ ಕುಟುಂಬವು ಈ ಜಿಲ್ಲೆಗೆ ಸಾಕಷ್ಟು ಉತ್ತಮ ಸೇವೆಯನ್ನು ಮಾಡಿದೆ. ಅವರ ಆದರ್ಶ, ತತ್ವಗಳು ಮತ್ತು ಸಿದ್ಧಾಂತಗಳು ನಮ್ಮ ಮುಂದೆ ಉಳಿದಿವೆ ಎಂದರು.
ಗೌರಮ್ಮ ಬಸವೇಗೌಡರು ಒಂದು ಜಾತಿ, ಧರ್ಮ, ವರ್ಗಕ್ಕೆ ಸೀಮಿತರಾದವರಲ್ಲ ಅವರು ಸಾರ್ವತ್ರಿಕವಾಗಿ, ಸಮಾಜಮುಖಿಯಾಗಿ ಕೆಲಸ ಮಾಡಿದ ಮಹಿಳೆ. ಅವರು ಮಾಡಿದಂತಹ ಕೆಲಸಗಳು ಪ್ರತಿಯೊಂದು ಜಾತಿಗೂ ತಲುಪಿದೆ ಎಂದು ತಿಳಿಸಿದರು.
ಅವರ ಕುಟುಂಬದಿಂದ ಅರಳಗುಪ್ಪೆ ಮಲ್ಲೇಗೌಡ ಆಸ್ಪತೆಗೆ ತಮ್ಮ ಸ್ವಂತ ಖರ್ಚಿನಿಂದ ಸುಮಾರು ೨೦ ಹಾಸಿಗೆಯುಳ್ಳ ಮಹಿಳಾ ವಾರ್ಡ್ಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಅನೇಕ ಸಮಾಜಮುಖಿಯಾಗಿ ಕೆಲಸ ಮಾಡಿದ ಧೀಮಂತರು. ಚಿಕ್ಕಮಗಳೂರು ಜಿಲ್ಲೆಯ ಸಾರ್ವಜನಿಕರು ಅರಳಗುಪ್ಪೆ ಕುಟುಂಬವನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ಯಾಕೆಂದರೆ ಸಾಕಷ್ಟು ಉತ್ತಮ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಗೌರಮ್ಮ ಬಸವೇಗೌಡ ಸಮಾಜಸೇವಕರಷ್ಟೇ ಅಲ್ಲದೇ ವೈಚಾರಿಕವಾಗಿ ಒಂದಿಷ್ಟು ಅಭಿರುಚಿ ಹೊಂದಿದ್ದರು. ಆ ಮುಖೇನ ಎಲ್ಲಾ ವರ್ಗದ ಜನರನ್ನು ಪ್ರೀತಿಸುತ್ತಿದ್ದರು. ಅವರ ಕುಟುಂಬವು ಅಗರ್ಭ ಶ್ರೀಮಂತರಾದರೂ ಕೂಡಾ ತಾನು ಮಹಿಳೆ ಎಂದು ಲೆಕ್ಕಿಸದೇ ಯಾವುದೇ ಕಾರ್ಯಕ್ರಮಕ್ಕಾದರೂ ಸಮಯಕ್ಕೆ ಸರಿಯಾಗಿ ಶಿಸ್ತು ಪಾಲನೆ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಿದ್ದರು ಎಂದರು.
ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಹೆಸರುವಾಸಿಯಾಗಿದ್ದ ಗೌರಮ್ಮ ಬಸವೇಗೌಡರಂತಹ ಮಹಿಳೆ ಇನ್ನೊಬ್ಬರು ಕಾಣಲು ಸಿಗುವುದಿಲ್ಲ. ಸಮಾಜದ ಜೊತೆ ಹೊಂದಾಣಿಕೆ ಮಾಡಿಕೊಂಡು ಜಾತ್ಯಾತೀತ ಮನೋಭಾವವನ್ನು ಹೊಂದಿರುವಂತಹ ಇವರನ್ನು ಜಿಲ್ಲೆಯ ಜನ ಮರೆಯಲು ಸಾಧ್ಯವಿಲ್ಲ ಎಂದರು.
ಸಮಾರಂಭದಲ್ಲಿ ಜಯಬಸವಾನಂದ ಶ್ರೀಗಳು ಆಶೀರ್ವಚನ ನೀಡಿ ಗೌರಮ್ಮನವರ ಗಟ್ಟಿತನ, ಸಮಾಜಮುಖಿ ಮನಸ್ಸುಗಳು ನಮ್ಮೆಲ್ಲರಿಗೂ ಬರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾಕ್ಟರ್ ಸುಬ್ಬರಾವ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಂದೂರು ಅಶೋಕ್, ಮಲೆನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ||ಡಿಎಲ್ ವಿಜಯಕುಮಾರ್, ವಿವಿಧ ಪಕ್ಷದ ಮುಖಂಡರುಗಳಾದ ಕಲ್ಮರುಡಪ್ಪ, ಎಚ್.ಎಚ್.ದೇವರಾಜ್, ಎಎನ್ ಮಹೇಶ್, ಗಾಯತ್ರಿ ಶಾಂತೇಗೌಡ, ಎಂ.ಎಲ್.ಮೂರ್ತಿ, ಕನ್ನಡ ಸೇನೆ ಅಧ್ಯಕ್ಷ ಪಿ.ಸಿ.ರಾಜೇಗೌಡ, ಸ್ವಚ್ಛ ಟ್ರಸ್ಟಿನ ಅಧ್ಯಕ್ಷ ಡಾಕ್ಟರ್ ಶುಭಾ ವಿಜಯ್, ಕಾಮಧೇನು ಗಣಪತಿ ದೇವಸ್ಥಾನದ ಆಡಳಿತ ಅಧಿಕಾರಿ ಡಾ|| ಎಂ.ಎಸ್.ನಂಜುಂಡಸ್ವಾಮಿ, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಾಂತಾರಾಮ್, ವನಮಾಲಮೃತ್ಯುಂಜಯ, ಪರಿಸರ ವೀರೇಶ್, ಅಂಧಮಕ್ಕಳ ಶಾಲೆಯ ಕಾರ್ಯದರ್ಶಿ ನೂರುಲ್ಲಾ ಶರೀಫ್, ವೀರಶೈವ ಸಮಾಜದ ಅಧ್ಯಕ್ಷ ಬಿ ಎ ಶಿವಶಂಕರ್ ಮಾತನಾಡಿ ಗೌರಮ್ಮ ಮತ್ತು ಅವರ ಕುಟುಂಬದ ಸಾಮಾಜಿಕ ಸೇವೆ ಅವರ ಸಮಯಪ್ರಜ್ಞೆ ಧಾರ್ಮಿಕ ಶ್ರದ್ಧೆ ಮುಂತಾದುವುಗಳ ಬಗ್ಗೆ ಗುಣಗಾನ ಮಾಡಿದರು.
ಸಮಾರಂಭದಲ್ಲಿ ಉದ್ಯಮಿ ಡಿಎಚ್ ನಟರಾಜ್, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾಕ್ಟರ್ ಕೆಪಿ ಅಂಶುಮಂತ, ಪತ್ರಕರ್ತರಾದ ಎನ್.ರಾಜು, ಜಿಎಂ.ರಾಜಶೇಖರ್, ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ರೇಣುಕಾರಾಧ್ಯ ,ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿಶ್ ಕ್ಯಾತನಬೀಡು , ಪಟ್ಟಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ನಂಜೇಗೌಡ ವೀರಶೈವ ಸಹಕಾರ ಸಂಘದ ಅಧ್ಯಕ್ಷ ಓಂಕಾರಸ್ವಾಮಿ, ಮಾಡೆಲ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಷಡಕ್ಷರಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬೀಕನಹಳ್ಳಿ ಸೋಮಶೇಖರ್ ರೈತಮುಖಂಡ ಗುರುಶಾಂತಪ್ಪ, ಎಂಸಿ ಶಿವಾನಂದಸ್ವಾಮಿ, ಆದರ್ಶ ಕೃಷಿಕ ಚಂದ್ರಶೇಖರ್ ನಾರಾಯಣಪುರ, ಅಕ್ಕಮಹಾದೇವಿ ಮಹಿಳಾ ಸಂಘದ ಮುಖಂಡೆ ಭಾರತೀ ಶಿವರುದ್ರಪ್ಪ ಸೇರಿದಂತೆ ವೀರಶೈವ ಸಮಾಜದ ಪದಾಧಿಕಾರಿಗಳು ರೇಣುಕಾರ್ಯ ಟ್ರಸ್ಟಿನ ಟ್ರಸ್ಟಿಗಳು ಅಕ್ಕಮಹಾದೇವಿ ಸಂಘದ ಪದಾಧಿಕಾರಿಗಳು ವಿವಿಧ ಸಾರ್ವಜನಿಕ ಸಂಸ್ಥೆಗಳ ಪದಾಧಿಕಾರಿಗಳು ಕೂಡ ಭಾಗವಹಿಸಿದ್ದರು.

























Discussion about this post