ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯು ಮಾಡಿರುವ ನಿವೇಶನ ಹಕ್ಕುಪತ್ರದ ಆಯ್ಕೆ ಪಟ್ಟಿಯನ್ನು ವಜಾಗೊಳಿಸುವಂತೆ ಬಿ.ಹೊಸಹಳ್ಳಿ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.
ಜಿ.ಪಂ. ಉಪಕಾರ್ಯದರ್ಶಿ ನಾಗರಾಜ್ ಅವರಿಗೆ ಈ ಸಂಬಂಧ ಬುಧವಾರ ಮನವಿ ಸಲ್ಲಿಸಿದ ಗ್ರಾಮಸ್ಥರು ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯಿಂದ ನಿವೇಶನ ರಹಿತರಿಗೆ ನಿವೇಶನವನ್ನು ಮಂಜೂರು ಮಾಡಿ ೨೦೦೧ರಲ್ಲಿ ೧೨ ಜನರಿಗೆ ಹಕ್ಕುಪತ್ರವನ್ನು ನೀಡಲಾಗಿದೆ. ಉಳಿದ ನಿವೇಶನವನ್ನು ಅರ್ಹರಿಗೆ ನೀಡದೇ ಗ್ರಾಮ ಪಂಚಾಯಿತಿಯವರು ಸ್ವಂತ ಮನೆ, ಗದ್ದೆ, ತೋಟ ಇರುವ ಶ್ರೀಮಂತರಿಗೆ ನೀಡಿದ್ದಾರೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಂಚಾಯಿತಿ ಅಭಿವೃಧ್ದಿ ಅಧಿಕಾರಿ ಮತ್ತು ಸದಸ್ಯರು ತಮಗೆ ಇಷ್ಟಬಂದ ಹಾಗೆ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಇದರಿಂದಾಗಿ ನಿವೇಶನ ರಹಿತ ಬಡವರಿಗೆ ಅನ್ಯಾಯವಾಗಿದೆ ಎಂದು ದೂರಿದರು.
ಗ್ರಾಮದ ಪರಿಶಿಷ್ಟ ಜಾತಿಯವರಿಗೆ ಯಾರಿಗೂ ನಿವೇಶನದ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಈ ಹಿನ್ನೆಲೆಯಲ್ಲಿ ಹಳೆಯ ಆಯ್ಕೆಪಟ್ಟಿಯನ್ನು ವಜಾಗೊಳಿಸಬೇಕು. ನೂತನ ಪಟ್ಟಿ ತಯಾರಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರವಿ, ಜಗದಿಶ್, ಬೊಮ್ಮಯ್ಯ, ಪೂರ್ಣೇಶ್, ಸುರೇಶ್, ನಾಗೇಶ್, ಜಯಂತಿ, ಕಮಲ, ಸೀತಮ್ಮ, ಯಶೋಧ, ಲಲಿತಮ್ಮ, ಜಯಲಕ್ಷ್ಮೀ, ಲತಾ, ಸುಂದ್ರೇಶ್, ಆಶಾ, ರೇಖಾ ರುದ್ರೇಶ್, ಉಪೇಂದ್ರ ಮತ್ತಿತರರು ಹಾಜರಿದ್ದರು.

























Discussion about this post