ಮೈಸೂರು: ಎಂಪಿಎಂಸಿ ಕಾಯ್ದೆ (ತಿದ್ದುಪಡಿ) ರೈತರ ಬೇಡಿಕೆಯಾಗಿತ್ತು. ಅದು ಬಿಜೆಪಿ ಬೇಡಿಕೆಯಾಗಿರಲಿಲ್ಲ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಅರಮನೆ ಅಂಗಳದಲ್ಲಿ ಗುರುವಾರ ಮಾವುತರು ಮತ್ತು ಕಾವಾಡಿಗರಿಗೆ ಉಪಾಹಾರ ಕೂಟದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ರಾಜಕೀಯ ಪ್ರೇರಿತ. ಗುಜರಾತ್, ಪಂಜಾಬ್, ಉತ್ತರ ಪ್ರದೇಶ, ಮಣಿಪುರದಲ್ಲಿ ಚುನಾವಣೆ ಹತ್ತಿರದಲ್ಲಿದೆ. ಚುನಾವಣೆ ಉದ್ದೇಶವಾಗಿಟ್ಟುಕೊಂಡು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. 30-40 ವರ್ಷಗಳ ಹಿಂದೆಯೇ ರೈತರು ಬೇಡಿಕೆ ಇಟ್ಟಿದ್ದರು.
ಎಪಿಎಂಸಿ ಕಾಯ್ದೆ ರದ್ದಾಗಬೇಕು, ಅದಕ್ಕೆ ತಿದ್ದುಪಡಿಯಾಗಬೇಕು ಎಂಬುದು ಬಿಜೆಪಿ ಬೇಡಿಕೆಯಲ್ಲ, ರೈತರ ಬೇಡಿಕೆಯಾಗಿತ್ತು. ಈ ಹಿಂದೆಯೇ ಪಾರ್ಲಿಮೆಂಟ್ನಲ್ಲಿ ಆಗಿದ್ದ ಚರ್ಚೆ, ವಿವಿಧ ಸಮಿತಿಗಳು ಸಲ್ಲಿಸಿದ ವರದಿ ಆಧರಿಸಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳಿಂದ ರೈತರಿಗೆ ಒಳ್ಳೆಯದಾಗಿಬಿಡುತ್ತೆ ಎಂಬ ಕಾರಣಕ್ಕೆ ಅನೇಕ ರಾಷ್ಟ್ರಗಳೂ ವಿರೋಧ ವ್ಯಕ್ತಪಡಿಸುತ್ತಿವೆ. ಅದಕ್ಕೆ ಭಾರತದಲ್ಲೂ ಕೆಲವರು ಕೈ ಜೋಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟಕ್ಕೆ ರೈತರು ಹಾಗೂ ಬೇರೆ ಸಂಘಟನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ರೈತರ ಹಿತಕ್ಕೆ ಬದ್ಧವಾಗಿದ್ದು, ಚರ್ಚೆಗೆ ಸಿದ್ಧವಾಗಿದೆ ಎಂದು ತಿಳಿಸಿದರು.
ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್. ಅಧಿಕಾರದಲ್ಲಿರಲಿ, ಇಲ್ಲದಿರಲಿ ನಿರಂತರವಾಗಿ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿಕೊಂಡು ಬಂದಿದೆ. ತಮ್ಮ ಅಧಿಕಾರವಧಿಯಲ್ಲಿ ಆಡಳಿತ ಇಲಾಖೆಗಳನ್ನು ಲೂಟಿ ಮಾಡಿದೆ. ಆ ಪದ್ಧತಿಯನ್ನು ರಾಜ್ಯಗಳಲ್ಲೂ ಮುಂದುವರಿಸಿದೆ. ಕಾಂಗ್ರೆಸ್ನ ಹಿರಿಯ ನಾಯಕರೇ ತಮ್ಮ ಪಕ್ಷದ ಬಗ್ಗೆ ಸತ್ಯ ಹೇಳಲು ಮುಂದಾಗಿದ್ದಾರೆ ಎಂದು ಹೇಳಿದರು.
ರಸಗೊಬ್ಬರ ಕೊರತೆ ಕುರಿತು ಮಾತನಾಡಿ, ರಸಗೊಬ್ಬರವನ್ನು ಹೊರದೇಶಗಳಿಂದ ತರಿಸಿಕೊಳ್ಳುತ್ತಿದ್ದು, ಸ್ವಲ್ಪ ಸಮಸ್ಯೆ ಆಗಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ದೇಶದಲ್ಲೇ ರಸಗೊಬ್ಬರ ಉತ್ಪಾದನೆ ಹೆಚ್ಚುಗೊಳಿಸಿ ಸ್ವಾವಲಂಬಿ ಆಗುವುದಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಮಾವುತರು, ಕಾವಾಡಿಗರೊಂದಿಗೆ ಕಾಲಕಳೆಯುವುದು ನನಗೆ ಆನಂದ. 2008ರಲ್ಲಿ ನಾನು ಉಸ್ತುವಾರಿ ಸಚಿವೆಯಾಗಿದ್ದಾಗ ಎಲ್ಲ ಮಾವುತರು, ಕಾವಾಡಿಗರಿಗೆ ಉಪಾಹಾರ ನೀಡುವುದನ್ನು ಆರಂಭಿಸಿದ್ದೆವು. ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಮಾವುತರು, ಕಾವಾಡಿಗರು ನಗರಕ್ಕೆ ಬರುವುದು ವರ್ಷಕ್ಕೆ ಒಮ್ಮೆಯಷ್ಟೆ. ಹಿಂದೆ ಅವರಿಗೆ ಗೌರವಧನವಾಗಿ ಕೇವಲ 5,000 ರೂ. ನೀಡಲಾಗುತ್ತಿತ್ತು. ಉಳಿದಂತೆ ಅವರು ಕಾಡಿನಲ್ಲಿ ಕೂಲಿ ಇನ್ನಿತರ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಗ ಅವರನ್ನು ಸರ್ಕಾರಿ ನೌಕರರು ಎಂದೇ ಪರಿಗಣಿಸಿ ತಿಂಗಳ ಸಂಬಳ ನೀಡಲಾಗುತ್ತಿದೆ. ಅವರ ಮಕ್ಕಳಿಗೆ ಶಿಕ್ಷಣ ಕೊಡುವಂತೆಯೇ ಪ್ರೇರೇಪಿಸಲಾಗುತ್ತಿದೆ ಎಂದು ತಿಳಿಸಿದರು.
ಮಾವುತರು, ಕಾವಾಡಿಗರೊಂದಿಗೆ ಕಾಲ ಕಳೆಯುವುದೆಂದರೆ ನನಗೆ ಆನಂದ. ಹೀಗಾಗಿ, ಅವರೊಟ್ಟಿಗೆ ಉಪಾಹಾರ ಕೂಟದಲ್ಲಿ ಭಾಗವಹಿಸಿದ್ದು ಖುಷಿ ಎನಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

























Discussion about this post