
ಚಿಕ್ಕಮಗಳೂರು: ನವರಾತ್ರಿಯ ಕೊನೆಯ ದಿನವಾದ ಇಂದು ವಿಜಯದಶಮಿ ಆಚರಣೆಯನ್ನು ತಾಲೂಕಿನ ಅಂಬಳೆ ಹೋಬಳಿ ಆರದವಳ್ಳಿ ಗ್ರಾಮದಲ್ಲಿ ಅಂಬು ಒಡೆಯುವ ಮೂಲಕ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಪಟೇಲ ವಂಶಸ್ಥರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎ.ಎನ್ ಮಹೇಶ್ ನೇತೃತ್ವದಲ್ಲಿ ೨೪ ನೇ ವರ್ಷದ ಅಂಬು ಮಹೋತ್ಸವ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳೊಂದಿಗೆ ಅತ್ಯಂತ ಸಂಭ್ರಮದಿಂದ ನೆರವೇರಿತು.
ಗ್ರಾಮಸ್ಥರು ಗ್ರಾಮದೇವರನ್ನು ಹೊತ್ತು ಊರಿನ ಸುತ್ತ ಮೆರವಣಿಗೆ ನಡೆಸುವ ಮೂಲಕ ಅಂಬು ಒಡೆಯುವ ಸ್ಥಳಕ್ಕೆ ಸಾಗಿದರು. ಸಾಂಪ್ರದಾಯಿಕ ಅಲಂಕೃತ ಉಡುಗೆಯೊಂದಿಗೆ ಸಿಂಗಾರಗೊಂಡಿದ್ದ ಪಟೇಲ ವಂಶಸ್ಥರಾದ ಮಹೇಶ್ ಹಾಗೂ ಕುಟುಂಬಸ್ಥರನ್ನು ಊರಿನ ಮುಖಂಡರು, ಗ್ರಾಮಸ್ಥರು ಗಳು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ಅಂಬು ಹೊಡೆಯುವ ದೊಡ್ಡಕೆರೆ ಬಳಿಗೆ ಕರೆತರಲಾಯಿತು.
ಶ್ರೀ ಆಂಜನೇಯ ಸ್ವಾಮಿ, ಮಲ್ಲೇಶ್ವರಸ್ವಾಮಿ, ಗ್ರಾಮದೇವತೆಗಳಾದ ಮಾರಮ್ಮದೇವಿ ಹಾಗೂ ಭೂತಪ್ಪ ದೇವರ ಉತ್ಸವದೊಂದಿಗೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಂಪ್ರದಾಯಿಕವಾಗಿ ಬಾಳೆ ಗೊನೆಗೆ ಬಿಲ್ಲು ಹೊಡೆಯುವ ಮೂಲ ಅಂಬಿನ ಉತ್ಸವವನ್ನು ಯಶಸ್ವಿಗೊಳಿಸಿದರು.
ವಿಜಯದಶಮಿ ಅಂಬು ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎ. ಎನ್. ಮಹೇಶ್ ವಿಜಯದಶಮಿ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ವಿಜಯನಗರ ಅರಸರ ಕಾಲದಿಂದಲೂ ದಸರಾ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ಮೈಸೂರು ಅರಸರ ಕಾಲದಲ್ಲಿ ನವರಾತ್ರಿ ದಸರಾಗೆ ಮತ್ತಷ್ಟು ಮಹತ್ವ ಬಂದಿದೆ ಎಂದರು.
ರಾಜ ಪ್ರಜಾಪ್ರಭುತ್ವದ ಕಾಲದಲ್ಲಿ ಸ್ಥಳೀಯ ಆಡಳಿತ ನಡೆಸುವ ಪಟೇಲರನ್ನು ನೇಮಿಸಿ ಅವರಿಂದ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತಿತ್ತು. ಅಂದಿನಿಂದ ಅದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ತಮ್ಮ ಕುಟುಂಬದ ಪೂರ್ವಜರು ಪಟೇಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದರು.
ಅಂಬು ಉತ್ಸವವು ಅನೇಕ ವರ್ಷಗಳಿಂದ ಆರದವಳ್ಳಿಯ ಗ್ರಾಮದಲ್ಲಿ ಪಟೇಲ ವಂಶಸ್ಥರಿಂದ ಚಾಲನೆ ದೊರೆಯುತ್ತಿದೆ. ವಿಜಯದಶಮಿಯಂದು ಅಂಬುಹೊಡೆಯುವ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಆಹ್ವಾನ ನೀಡುವ ಮೂಲಕ, ಸಂಪ್ರದಾಯಿಕ ಉಡುಗೆ, ವಾದ್ಯಗೋಷ್ಠಿಯೊಂದಿಗೆ ಕರೆತಂದು ವಿಶೇಷ ಗೌರವದಿಂದ ಕಾಣುತ್ತಾರೆ. ಇದಕ್ಕೆ ನಮ್ಮ ಪೂರ್ವಜರು, ಗ್ರಾಮಸ್ಥರು, ಹಾಗೂ ಮುಖಂಡರ ಸಹಕಾರವೇ ಕಾರಣ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಅರೇನಳ್ಳಿ ಪ್ರಕಾಶ್ ಮಾತನಾಡಿ ದಸರಾ ಕಾರ್ಯಕ್ರಮವು ಇಡೀ ಗ್ರಾಮಸ್ಥರನ್ನು ಒಗ್ಗೂಡಿಸಿ, ಐಕ್ಯತೆ ಮೂಡಿಸುವು ಮೂಲಕ ಸಾಮರಸ್ಯ ಭಾವನೆ ಬೆಳೆಸಲಿದೆ ಎಂದರು.
ಕೋವಿಡ್ ಹಿನ್ನಲೆ ಸರಳ ಹಾಗೂ ಸಂಭ್ರಮದಿಂದ ದಸರಾ ಆಚರಣೆ ಮಾಡಲಾಗುತ್ತಿದ್ದು, ಶ್ರೀ ದುರ್ಗಾಮಾತೆ ಸಂಕಷ್ಟದಲ್ಲಿರುವ ಜನತೆಯನ್ನು ಕಾಪಾಡುವ ಮೂಲಕ ಸರ್ವರಿಗೂ ಒಳಿತು ಮಾಡಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಶ್ರೀ ಆಂಜನೇಯಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ವೀರಭದ್ರಚಾರ್, ಗ್ರಾಮಸ್ಥರಾದ ಎ.ಎನ್.ಸತ್ಯನಾರಾಯಣ, ಸಣ್ಣೇಗೌಡ, ಶಿವಣ್ಣ, ಪಾಪೇಗೌಡ, ಎ.ಬಿ.ನಾಗರಾಜ್, ಎ.ವಿ.ನಾಗರಾಜ್, ಎ.ಬಿ.ನಟರಾಜ್, ನಿಂಗಪ್ಪ, ಎ.ಎಂ.ಚಂದ್ರೇಗೌಡ, ಎ.ಡಿ.ನಂಜೇಗೌಡ, ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.

























Discussion about this post