ಚಿಕ್ಕಮಗಳೂರು: ಮನೆಯ ಕಪಾಡಿನಲ್ಲಿ ಇಡುವ ಪುಸ್ತಕಗಳಿಂದ ಮನದ ಕಪಾಡಿನಲ್ಲಿ ಉಳಿಯುವ ಪುಸ್ತಕಗಳನ್ನು ಓದುವುದು ಹಾಗೂ ಅಂತಹ ಪುಸ್ತಕಗಳನ್ನು ಸಮಾಜಕ್ಕೆ ತಲುಪಿಸುವಂತಹದ್ದು ಬಹುಮುಖ್ಯ ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಹೇಳಿದರು.
ನಗರದ ಶಾಸಕರ ಕಚೇರಿ ಆವರಣದಲ್ಲಿ ಚಿಕ್ಕಮಗಳೂರು ನೆಲೆ_ಬೆಲೆ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪುಸ್ತಕದ ಕುರಿತು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯದ ಪ್ರತಿ ತಾಲೂಕು, ಜಿಲ್ಲೆಗಳಲ್ಲಿಯೂ ಆಯಾ ಜಿಲ್ಲೆಯ ಪ್ರಾಕೃತಿಕ, ಐತಿಹಾಸಿಕ ಪರಂಪರೆ, ಜಾನಪದ ಸಂಪತ್ತನ್ನು ಬಿಂಬಿಸುವ ಪುಸ್ತಕಗಳನ್ನು ಹೊರತರುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ನೆಲದ ಸಂಪತ್ತನ್ನು ಪರಿಚಯಿಸುವ ಕೆಲಸವನ್ನು ಸರ್ಕಾರ ಮಾಡಬೇಕು, ಚಿಕ್ಕಮಗಳೂರು ನೆಲೆ_ಬೆಲೆ ಪುಸ್ತಕ ಕಾಫಿನಾಡಿನ ನೆಲದ ಸಂಪತ್ತನ್ನು ಅಣುಅಣುವಾಗಿ ಹೊರತರುವಂತಹ ಪುಸ್ತಕವಾಗಿ ಹೊರಹೊಮ್ಮಿದೆ ಎಂದು ಪುಸ್ತಕದ ಕೆಲ ಅಧ್ಯಾಯಗಳನ್ನು ಓದುವ ಮೂಲಕ ಪುಸ್ತಕದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ಪ್ರಾಕೃತಿಕ ಸಂಪತ್ತು, ಸಾಹಿತ್ಯಿಕ, ಐತಿಹಾಸಿಕ ಪರಂಪರೆ, ಶಾಸನಗಳಲ್ಲಿ ಉಲ್ಲೇಖವಾಗಿರುವ ವಿಷಯಗಳನ್ನು ಸಂಕ್ಷಿಪ್ತವಾಗಿ ಹೊರತರುವ ಕೆಲಸವನ್ನು ಲೇಖಕಿ ಡಾ.ಮಂಜುಳಾ ಹುಲ್ಲಹಳ್ಳಿ ಮಾಡಿದ್ದಾರೆ ಎಂದ ಅವರು, ಜಿಲ್ಲೆಯಲ್ಲಿನ ಮತ್ತಷ್ಟು ಮಾಹಿತಿಯನ್ನು ಹೊರತರುವ ಹಿನ್ನೆಲೆಯಲ್ಲಿ ಮೂರ್ನಾಲ್ಕು ಜನರ ತಂಡವನ್ನು ಮಾಡಿ ಈ ರೀತಿಯ ಪುಸ್ತಕಗಳನ್ನು ತರುವ ಮೂಲಕ ಜಿಲ್ಲೆಯ ಸಾಂಸ್ಕೃತಿಕ ನಿಧಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನು ಶಾಸಕರು ಮಾಡಬೇಕು ಎಂದು ಸಲಹೆ ನೀಡಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಸಿ.ಟಿ ರವಿ, ಒಂದೊAದು ಊರಿನಲ್ಲಿಯೂ ಮೊಗೆದಷ್ಟು, ಬಗೆದಷ್ಟು ಕೌತುಕ ಸಿಗುತ್ತವೆ ಅಂತಹ ವಿಭಿನ್ನ ವೈಭವವನ್ನು ಜಿಲ್ಲೆ ಒಳಗೊಂಡಿದೆ. ಈ ಹಿಂದೆ ವಿದ್ಯಾರ್ಥಿಗಳನ್ನು ಬಳಸಿಕೊಂಡು ಜಿಲ್ಲೆಯ ಮಾಹಿತಿ ಕಲೆಹಾಕಿ ಪುಸ್ತಕ ರೂಪದಲ್ಲಿ ಹೊರತರುವ ಚಿಂತನೆ ಮಾಡಲಾಗಿತ್ತು ಆದರೆ ಕೋವಿಡ್ ಸಂದರ್ಭದಲ್ಲಿ ಸಾಧ್ಯವಾಗಲಿಲ್ಲ ಆದರೆ ಮಂಜುಳಾ ಹುಲ್ಲಹಳ್ಳಿ ಲೇಖಿಸಿರುವ ಚಿಕ್ಕಮಗಳೂರು ನೆಲೆ_ಬೆಲೆ ಪುಸ್ತಕ, ಜಿಲ್ಲೆಯ ಹಲವು ಸ್ಥಳಗಳ ಬಗ್ಗೆ ಮಾಹಿತಿ ಕಲೆಹಾಕಿ ಒಂದು ಹಿಡಯಾಗಿ ಪುಸ್ತಕ ರೂಪದಲ್ಲಿ ನಮ್ಮ ಕೈಗೆ ಬಂದಿರುವುದು ಹರ್ಷತಂದಿದ್ದು ಮುಂದಿನ ಪೀಳಿಗೆಗೆ ನಮ್ಮ ನೆಲದ ಅರಿವನ್ನು ಮೂಡಿಸುವ ಅಂಶಗಳು ಈ ಪುಸ್ತಕದಲ್ಲಿವೆ ಎಂದರು.
ಪುಸ್ತಕದ ಕುರಿತು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್, ಲೇಖಕಿ ಮಂಜುಳಾ ಹುಲ್ಲಹಳ್ಳಿ ಮಾತನಾಡಿದರು. ಕಾರ್ಯಕ್ರಮವನ್ನು ಸುಮಾ ಪ್ರಸಾದ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪಲ್ಲವಿ ಸಿ.ಟಿ ರವಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಶಿವಚೈತನ್ಯ ಪ್ರಕಾಶನದ ಪ್ರಕಾಶಕರಾದ ಶಿವಕುಮಾರ್, ಮಂಜುನಾಥ್, ಹೆಚ್.ಡಿ ತಮ್ಮಯ್ಯ, ಮಧುಕುಮಾರ್ ರಾಜ್ ಅರಸ್, ಕಿರಣ್, ಪ್ರಕಾಶ್, ಲೇಖಕಿ ನಾಗಶ್ರೀ ತ್ಯಾಗರಾಜ್, ರಮೇಶ್ ಸೇರಿದಂತೆ ಹಲವರು ಇದ್ದರು

























Discussion about this post