ತಿರುವನಂತಪುರ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಂಭವಿಸಿದ ಅನುಹಾತಕ್ಕೆ ರಾಜ್ಯದಲ್ಲಿ ಎಂಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹ ಮತ್ತು ಇನ್ನಿತರ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿಕೊಂಡಿರುವವರನ್ನು ರಕ್ಷಿಸುವ ಕಾರ್ಯ ಚುರುಕಿನಿಂದ ಸಾಗಿದೆ.
ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ. ಕೊಟ್ಟಾಯಂ ಜಿಲ್ಲೆಯಲ್ಲಿ ಪ್ರತಿಕೂಲ ಹವಾಮಾನದ ಕಾರಣ ಪರಿಹಾರ ಕಾರ್ಯ ನಿಧಾನಗೊಂಡಿದೆ. ತೀವ್ರ ಮಳೆಯ ಕಾರಣ ಭಕ್ತರು ಭಾನುವಾರ ಮತ್ತು ಸೋಮವಾರ ಶಬರಿಮಲೆಗೆ ಬಾರದಂತೆ ಅಯ್ಯಪ್ಪಸ್ವಾಮಿ ದೇವಸ್ಥಾನ ಮನವಿ ಮಾಡಿದೆ. ಶನಿವಾರ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಯ ತೀವ್ರತೆ ಭಾನುವಾರ ಬೆಳಗ್ಗೆ ತುಸು ಕಡಿಮೆಯಾಗಿದೆ. ಹೊಸದಾಗಿ ಪ್ರವಾಹದ ಸನ್ನಿವೇಶ ಉಂಟಾಗಿಲ್ಲ. ಆದರೆ, ಮಳೆ ಸಣ್ಣಗೆ ಸುರಿಯುತ್ತಿದೆ.
ಪರಿಹಾರಕ್ಕೆ ಸೇನೆ ಬಳಕೆ: ಪರಿಹಾರ ಕಾರ್ಯಕ್ಕೆ ರಾಜ್ಯ ವಿಪತ್ತು ಸ್ಪಂದನ ಪಡೆ (ಎಸ್ಡಿಆರ್ಎಫ್ ) ಜತೆಗೆ ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆಯ (ಎನ್ಡಿಆರ್ಎಫ್) 11 ತಂಡ ನೌಕಾಪಡೆ ಮತ್ತು ವಾಯುಪಡೆ ಕೈಜೋಡಿಸಿವೆ. ಎಂಐ-17, ಸಾರಂಗ್ ಹೆಲಿಕಾಪ್ಟರ್ಗಳನ್ನು ಬಳಕೆ ಮಾಡಲಾಗುತ್ತಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣ ಮಳೆ ಹೆಚ್ಚಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ. ಪಟ್ಟಣಂತಿಟ್ಟ, ಕೊಟ್ಟಾಯಂ, ಎನರ್ನಾಕುಲಂ, ಇಡುಕ್ಕಿ, ತ್ರಿಶ್ಶೂರ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮತ್ತು ತಿರುವನಂತಪುರ, ಕೊಲ್ಲಂ, ಅಲಪ್ಪುಳ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಪರಿಹಾರ ಕಾರ್ಯ ಚುರುಕಿಗೆ ಪಿಣರಾಯಿ ಸೂಚನೆ: ಮಳೆ ಮತ್ತು ಪ್ರವಾಹದ ಸನ್ನಿವೇಶದಲ್ಲಿ ತುರ್ತು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಅಪಾಯದ ಸ್ಥಳದಲ್ಲಿರುವವರ ಸ್ಥಳಾಂತರಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ. ನಿರಾಶ್ರಿತರಿಗಾಗಿ ಶಿಬಿರಗಳನ್ನು ತೆರೆಯುಬೇಕು, ಕೋವಿಡ್-19 ಶಿಷ್ಟಾಚಾರದಂತೆ ಮಾಸ್ಕ್, ಸ್ಯಾನಿಟೈಸರ್ ಒದಗಿಸಬೇಕು. ಕುಡಿಯುವ ನೀರು, ವೈದ್ಯಕೀಯ ನೆರವನ್ನು ನೀಡಬೇಕು. ಅನ್ಯವಾಧಿಯಿಂದ ಬಳಲುತ್ತಿರುವವರು ಮತ್ತು ಕೊರೊನಾ ತಡೆ ಲಸಿಕೆ ತೆಗೆದುಕೊಂಡಿಲ್ಲದವರ ಬಗ್ಗೆ ಶಿಬಿರದಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದು ಅಧಿಕಾರಿಗಳಿಗೆ ನಿದರ್ದೇಶನ ನೀಡಿದ್ದಾರೆ.
ಈ ಮಧ್ಯೆ, ಕಾಲೇಜುಗಳ ಮರುಆರಂಭವನ್ನು ಎರಡು ದಿನ ಮುಂದೂಡಲಾಗಿದೆ. ಈಗ ಅವು ಅ.20ರಿಂದ ತೆರೆಯಲಿವೆ ಎಂದು ರಾಜ್ಯ ಶಿಕ್ಷಣ ಇಲಾಖೆ ತಿಳಿಸಿದೆ. ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಸಭೆ ನಡೆಸಿರುವ ಆರೋಗ್ಯ ಸಚಿವೆ ವೀಣಾ ಜಾಜರ್ಜ್, ಜಲಾವೃತವಾಗಿರುವ ಪ್ರದೇಶಗಳ ಸ್ಥಿತಿಗತಿ, ಪರಿಹಾರ ಕಾರ್ಯವನ್ನು ಚುರುಕಿನಿಂದ ನಡೆಸುವಂತೆ ಸೂಚಿಸಿದ್ದಾರೆ.
ಡ್ಯಾಂಗಳಲ್ಲಿ ಹೆಚ್ಚಿದ ನೀರಿನ ಮಟ್ಟ: ಕುಂಭದ್ರೋಣ ಮಳೆಯ ಕಾರಣ ರಾಜ್ಯದ ಅನೇಕ ಅಣೆಕಟ್ಟೆಗಳ ಒಳಹರಿವು ಹೆಚ್ಚಳವಾಗಿದೆ. ಮಣಿಯಾರ್ ಡ್ಯಾಂನಿಂದ ನೀರು ಬಿಡುಗಡೆ ಆಗುತ್ತಿದ್ದ, ತಗ್ಗಿನ ಪ್ರದೇಶದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಪಟ್ಟಣಂತಿಟ್ಟ ಜಿಲ್ಲೆಯ ಕಕ್ಕಿ, ತ್ರಿಶ್ಶೂರ್ನ ಶೋಲಯಾರ್, ಇಡುಕ್ಕಿಯ ಕುಂಡಾಲ ಮತ್ತು ಕಲ್ಲರ್ಕುಟ್ಟಿ ಅಣೆಕಟ್ಟೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
Visuals from Idukki district. Do not step out to drive as the flooding is substantial and may wash away cars. #keralarain #Kerala pic.twitter.com/vUR2Hm6zia
— West Coast Weatherman (@RainTracker) October 16, 2021
Kerala Heavy Rain 8 Killed
ಇದನ್ನು ಓದಿ: ಕೇರಳದಲ್ಲಿ ಭಾರೀ ಮಳೆಗೆ ಪ್ರಮುಖ ಅಣೆಕಟ್ಟುಗಳು ಭರ್ತಿ
ಇದನ್ನು ಓದಿ: ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ, ಚಿಕ್ಕಮಗಳೂರು ಸೇರಿ ವಿವಿಧೆಡೆ ಮುಂದುವರಿಯಲಿದೆ ವರುಣ ಆರ್ಭಟ
Discussion about this post