ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಆಯ್ದ ಅಲ್ಪಸಂಖ್ಯಾತರು ಮತ್ತು ವಲಸೆ ಕಾಮಿರ್ಕರ ಮೇಲೆ ಮೇಲೆ ನಡೆಯುತ್ತಿರುವ ದಾಳಿ ಮತ್ತು ಹತ್ಯೆಯ ಹಿಂದೆ ಪಾಕ್ನ ಗುಪ್ತಚರ ದಳ ಐಎಸ್ಐ ಇದೆ. ಸ್ಥಳೀಯರಲ್ಲದವರ ಮೇಲೆ ಹೇಗೆ ಮತ್ತು ಎಲ್ಲಿ ದಾಳಿ ಮಾಡಬೇಕು ಎಂಬ ವಿವರ ಇರುವ ನೀಲನಕ್ಷೆಯನ್ನು ಐಎಸ್ಐ ಉಗ್ರರಿಗೆ ನೀಡಿದ್ದು, 22 ಅಂಶಗಳಿರುವ ಟೂಲ್ಕಿಟ್ ಅನ್ನು ನೀಡಿದೆ. ಈಗ ಇದು ಬಯಲಾಗಿದೆ ಎಂದು ಝೀ ನ್ಯೂಸ್ ವರದಿ ತಿಳಿಸಿದೆ.
ಸ್ಥಳಿಯರಲ್ಲದವರು ಜಮ್ಮು-ಕಾಶ್ಮೀರಕ್ಕೆ ಬಂದು ಕಿರುಕುಳ, ದೌರ್ಜನ್ಯ ನಡೆಸುತ್ತಿದ್ದಾರೆ. ಇಲ್ಲಿ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಸ್ಥಳಿಯೇತರರಿಗೆ ಕಣಿವೆಯನ್ನು ಬಿಟ್ಟುಹೋಗುವಂತೆ ಎಚ್ಚರಿಕೆ ನೀಡಿ. ಅವರ ಮೇಲಾಗುವ ಪರಿಣಾಮಗಳನ್ನು ತೋರಿಸಿ ಎಂದು ಐಎಸ್ಐ ಉಗ್ರರಿಗೆ ಸೂಚಿಸಿದೆ ಎಂದು ವರದಿ ಹೇಳಿದೆ.
ಝೀ ನ್ಯೂಸ್ ವರದಿಯ ಪ್ರಕಾರ ಐಎಸ್ಐ ನೀಡಿರುವ ಸೂಚನೆಗಳಿವು…
ಕಾಶ್ಮೀರಿಗಳ ಸ್ವಾತಂತ್ರಕ್ಕೆ ಮತ್ತು ಅವರ ಕೆಲಸಕ್ಕೆ ತಡೆಯೊಡ್ಡುವ ಆದೇಶ, ಸುತೋಲೆಗಳ ವಿರುದ್ಧ ಸರ್ಕಾರಿ ನೌಕರರು ಪ್ರತಿಭಟಿಸಬೇಕು. ಕಾಶ್ಮೀರವನ್ನು ಆಕ್ರಮಿಸಿರುವವರು ಅಥವಾ ಅವರ ಸೂಚನೆಯಂತೆ ಕೆಲಸ ಮಾಡುವವರು ಆಯೋಜಿಸುವ ಕ್ರೀಡಾಕೂಟ ಬಹಿಷ್ಕರಿಸಿ. ಜಮ್ಮು-ಕಾಶ್ಮೀರಕ್ಕೆ ವಲಸೆ ಬಂದವರು, ದೀರ್ಘ ಕಾಲದಿಂದ ಇಲ್ಲಿ ಇರುವವರನ್ನು ಟಾರ್ಗೆಟ್ ಮಾಡಬೇಕು. ಸ್ಥಳೀಯರಲ್ಲದ ಉದ್ಯೋಗಿಗಳು ಯಾವುದೇ ಸಂಸ್ಥೆ, ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರು ನಮ್ಮ ಶತ್ರುಗಳು. ಸ್ಥಳೀಯರಲ್ಲದ ಅಧಿಕಾರಿಗಳು ನಮ್ಮ ಗುರಿ. ಸ್ಥಳೀಯರಲ್ಲದವರ ಮೇಲಿನ ಅವಲಂಬನೆಯಿಂದ ಸ್ಥಳೀಯರು ದೂರವಾಗಬೇಕು ಅಂಥ ಕೆಲಸ ಮಾಡಿ.
ಕಾಶ್ಮೀರದ ಹೋರಾಟವನ್ನು ವಿರೋಧಿಸುವ ಪೊಲೀಸ್ ಸಿಬ್ಬಂದಿಯ ಮನೆ ಮೇಲೆ ದಾಳಿ ಮಾಡಿ. ಕಾಶ್ಮೀರಿ ವಿರೋಧಿ ಶಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ. ಆಡಳಿತಗಾರರ ಜತೆ ಶಾಮೀಲಾಗಿರುವವರನ್ನು ಗುರುತಿಸಿ. 90ರ ದಶಕದಲ್ಲಿ ಕಾಶ್ಮೀರವನ್ನು ತೊರೆದಿದ್ದ ಕಾಶ್ಮೀರಿ ಪಂಡಿತರು ಈಗ ವಾಪಸು ಬರುತ್ತಿದ್ದಾರೆ. ಅವರನ್ನು ಟಾರ್ಗೆಟ್ ಮಾಡಿ. ಸರ್ಕಾರಿ ಆಸ್ತಿ, ಅಭಿವೃದ್ಧಿ ಯೋಜನೆಗಳು, ಸೇತುವೆ, ಶಾಲಾ-ಕಾಲೇಜು, ಕ್ರೀಡಾ ಮೂಲ ಸೌಕರ್ಯಗಳನ್ನು ಧ್ವಂಸಗೊಳಿಸಿ. ಕಾಶ್ಮೀರವನ್ನು ಅತಿಕ್ರಮಿಸಿರುವವರ ಕೈಗೊಂಬೆಗಳಾಗಿರುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ಗುರಿಯಾಗಿರಿಸಿಕೊಳ್ಳಿ.
ಸರ್ಕಾರಿ ಅಥವಾ ಭದ್ರತಾಪಡೆಗಳ ಕಾರ್ಯಕ್ರಮದಲ್ಲಿ ಭಾಗಿಯಾಗುವವರ ಬಗ್ಗೆ ಕಠಿಣವಾಗಿ ನಡೆದುಕೊಳ್ಳಿ. ಸರ್ಕಾರದ ಜತೆ ಸೌಹಾರ್ದವಾಗಿರುವ ಮಾಧ್ಯಮಗಳನ್ನು ಬಹಿಷ್ಕರಿಸಿ. ಕಾಶ್ಮೀರದ ವಿಮೋಚನೆಗಾಗಿ ಹೋರಾಟ ಮಾಡುತ್ತಿರುವವರು ತಮ್ಮ ಆದ್ಯತೆಗೆ ಅನುಗುಣವಾಗಿ ಗುರಿಯನ್ನು ನಿಗದಿ ಮಾಡಿಕೊಳ್ಳಬೇಕು. ಜಮ್ಮು-ಕಾಶ್ಮೀರದಾಚೆಗೂ ನಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಿ ಚುರುಕುಗೊಳಿಸಬೇಕಿದೆ ಎಂದು ಟೂಲ್ಕಿಟ್ನಲ್ಲಿ ತಿಳಿಸಲಾಗಿದೆ.
ಟೂಲ್ಕಿಟ್ನಲ್ಲಿ ಉಲ್ಲೇಖಿಸಿರುವ ಸೂಚನೆಗಳು ಈಗ ಅಸಂಗತ ಎನಿಸಬಹುದು ಆದರೆ, ದೂರಗಾಮಿಯಾಗಿ ಅತ್ಯಂತ ಪರಿಣಾಮಕಾರಿ ಮತ್ತು ಕಾಶ್ಮೀರದ ವಿಮೋಚನೆಯ ಹೋರಾಟಕ್ಕೆ ಉಪಯುಕ್ತ ಎಂದು ಐಎಸ್ಐ ಹೇಳಿದೆ.
ಒಂಟಿ ತೋಳಗಳಿಂದ ವಿಧ್ವಂಸಕ ಕೃತ್ಯ
ಜಮ್ಮು-ಕಾಶ್ಮೀರದಲ್ಲಿ 11 ನಾಗರಿಕರನ್ನು ಹತ್ಯೆ ಮಾಡಿರುವ ರೀತಿಯನ್ನು ಗಮನಿಸಿದರೆ ಇದು “ಒಂಟಿ ತೋಳ’ದ ದಾಳಿಯಂತೆ ಕಾಣುತ್ತದೆ ಎಂದು ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಿಳಿಸಿದೆ. “ಕಾಶ್ಮೀರಿ ಫೈಟ್’ ಎಂಬ ಬ್ಲಾಗ್ನಲ್ಲಿ ಕೂಡಲೇ ಕಾಶ್ಮೀರ ಕಣಿವೆಯನ್ನು ತೊರೆಯುವಂತೆ ಸ್ಥಳಿಯರಲ್ಲದವರಿಗೆ ಸೂಚಿಸಿರುವ ಬರಹ ಸೆಪ್ಟೆಂಬರ್ನಲ್ಲಿ ಪ್ರಕಟವಾಗಿದೆ.
ಎಲ್ಒಸಿಗೆ ನರವಾಣೆ ಭೇಟಿ
ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಹಲವು ಮುಂಚೂಣಿ ನೆಲೆಗಳಿಗೆ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಮಂಗಳವಾರ ಭೇಟಿ ನೀಡಿದ್ದಾರೆ. ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಅವರನ್ನು ಮಂಗಳವಾರ ಭೇಟಿಯಾದ ಗೃಹ ಸಚಿವ ಅಮಿತ್ ಷಾ, ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ಅಮಿತ್ ಷಾ ಅ.23 ಮತ್ತು 24ರಂದು ಭೇಟಿ ನೀಡಲಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳ ಜತೆ ಕಾಶ್ಮೀರದ ಭದ್ರತಾ ಸನ್ನಿವೇಶ ಕುರಿತು ಸಭೆ ನಡೆಸಲಿದ್ದಾರೆ.
ಅಸ್ಸಾಂನಲ್ಲಿ ದಾಳಿ ಸಂಭವ
ಪಾಕ್ನ ಐಎಸ್ಐ ಮತ್ತು ಅಲ್ಖೈದಾ ಸಂಘಟನೆ ಅಸ್ಸಾಂನಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ರಾಜ್ಯ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಉಗ್ರರು ಆರ್ಎಸ್ಎಸ್ ಪದಾಧಿಕಾರಿಗಳ ಮೇಲೆ ದಾಳಿ ನಡೆಸುವ ಸಂಭವ ಇದೆ, ಸಾರ್ವಜನಿಕ ಸಾರಿಗೆ, ಪೂಜಾ ಕೇಂದ್ರಗಳು, ಜನನಿಬಿಡ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆಸಿವೆ ಎಂದು ಗುಪ್ತಚರ ವಿಭಾಗ ತಿಳಿಸಿದೆ.
Pakistan ISI Conspiracy in Attacks on Minority in Jammu Kashmir
ಇದನ್ನೂ ಓದಿ: ಪಾಕ್ ಭೂಸೇನಾ ಮುಖ್ಯಸ್ಥನ ಹುದ್ದೆ ಮೇಲೆ ಹಮೀದ್ ಕಣ್ಣು
ಇದನ್ನೂ ಓದಿ: ಕಮಲಾ ಹ್ಯಾರಿಸ್ ನಿಂದ ಪಾಕಿಸ್ತಾನಕ್ಕೊಂದು ಕಿವಿಮಾತು
Discussion about this post