ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮೇಘಸ್ಫೋಟದಿಂದಾಗಿ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ತೀವ್ರತೆ ಬುಧವಾರ ಕಡಿಮೆ ಆಗಿದೆ. ಕಳೆದ 24 ತಾಸಿನಲ್ಲಿ 500 ಮಿಲಿಮೀಟರ್ ಮಳೆ ಸುರಿದಿದೆ. ಆದರೆ, ಭೂಕುಸಿತ, ಮನೆ ಕುಸಿತ, ಪ್ರವಾಹದಿಂದ ಸತ್ತವರ ಸಂಖ್ಯೆ 47ಕ್ಕೆ ಏರಿದೆ. ಸೋಮವಾರ ಆರು ಮಂದಿ ಸತ್ತಿದ್ದರು. ಈ ಮಧ್ಯೆ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರವಾಹ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿ, ಮೃತರ ಕುಟುಂಬಕ್ಕೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ಮತ್ತು ಮನೆ ಕಳೆದುಕೊಂಡರವರಿಗೆ 1.90 ಲಕ್ಷ ರೂಪಾಯಿ ನೆರವನ್ನು ಮಂಗಳವಾರ ಘೋಷಿಸಿದ್ದಾರೆ.
ಮೂರು ನಗರಗಳಿಗೆ ಸಂಪರ್ಕ ಕಡಿತ
ಪ್ರವಾಸಿತಾಣಗಳಾದ ನೈನಿತಾಲ್, ರಾಣಿಖೇತ್, ಅಲ್ಮೋರಾಗಳು ಜಲಾವೃತವಾಗಿದ್ದು, ಇಲ್ಲಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ನೈನಿತಾಲ್ಗೆ ಸಂಪರ್ಕಿಸುವ ಮೂರು ರಸ್ತೆಗಳ ಪೈಕಿ ಒಂದರಲ್ಲಿ ಮಂಗಳವಾರ ರಾತ್ರಿ ಸಂಪರ್ಕ ಸಾಧಿಸಲಾಗಿದೆ. ರಾಣಿಖೇತ್ನಲ್ಲಿ ಇಂಧನ ಕೊರತೆ ತಲೆದೋರಿದ್ದು, ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ. ದೂರವಾಣಿ ಸಂಪರ್ಕದ ಫೈಬರ್ ಆಪ್ಟಿಕಲ್ ಕೇಬಲ್ (ಒಎಫ್ಸಿ) ಸಂಪರ್ಕ ಕೂಡ ಸಿಗುತ್ತಿಲ್ಲ. ಬದರಿನಾಥ ಹೆದ್ದಾರಿಯಲ್ಲಿ ವಾಹನಗಳು ಕೊಚ್ಚಿಹೋಗಿವೆ. ಬಂಡೆಗಳು ಉರುಳಿ ಬಿದ್ದಕಾರಣ ಸಂಪರ್ಕ ಕಡಿತವಾಗಿದೆ. ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ. ಮಳೆಯ ಕಾರಣ ತಡೆಯಲ್ಪಟ್ಟಿದ್ದ ಚಾರ್ಧಾಮ್ ಯಾತ್ರೆಯು ಜೋಶಿಮಠದಿಂದ ಬದರಿನಾಥಕ್ಕೆ ಪುನರ್ ಆರಂಭಗೊಂಡಿದೆ.
ಮತ್ತೊಂದು ಗಿರಿಧಾಮ ಅಲ್ಮೋರಾದಲ್ಲಿ ಮಂಗಳವಾರ ಏಳು ಮಂದಿ ಸಾವನ್ನಪ್ಪಿದ್ದರೆ, ನೈನಿತಾಲ್ ಜಿಲ್ಲೆಯಲ್ಲಿ 13 ಜನರು ಅಸುನೀಗಿದ್ದಾರೆ. ಕುಮಾನ್ ಪ್ರದೇಶದಲ್ಲಿ ಬಹುತೇಕ ಸಾವು ಸಂಭವಿಸಿದೆ. ಎಂದು ಹಿರಿಯ ಪೊಲೀಸ್ ಅಧಿಕಾರಿ ನೀಲೇಶ್ ಆನಂದ್ ಭಾಮೆ ತಿಳಿಸಿದ್ದಾರೆ. ರಾಷ್ಟ್ರೀಯ ವಿಪ್ಪತ್ತು ಸ್ಪಂದನಾ ತಂಡ (ಎನ್ಡಿಆರ್ಎಫ್), ರಾಜ್ಯ ವಿಪತ್ತು ಸ್ಪಂದನಾ ತಂಡ (ಎಸ್ಡಿಆರ್ಎಫ್) ಮತ್ತು ಸೇನೆ ಪರಿಹಾರ ಕಾರ್ಯದಲ್ಲಿ ತೊಡಗಿವೆ.
ಸಂಕಷ್ಟಕ್ಕೆ ಸಿಲುಕಿದ ಪ್ರವಾಸಿಗರನ್ನು ರಕ್ಷಿಸಲಾಗಿದ್ದು, ಇದ್ದಲ್ಲೆ ಸಿಲುಕಿದ್ದವರು ಈಗ ಪ್ರಯಾಣ ಮುಂದುವರಿಸಿದ್ದಾರೆ. ಪರಿಹಾರ ಕಾರ್ಯದಲ್ಲಿ ತೊಡಗಿರುವ ಮೂರು ಹೆಲಿಕಾಪ್ಟರ್ ಪೈಕಿ ಎರಡು ನೈನಿತಾಲ್ನಲ್ಲಿ ಇನ್ನೊಂದು ಗರ್ವಾಲ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಳೆಯಿಂದಾಗಿರುವ ಅನಾಹುತದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಮ್ ಕಾರ್ಬೆಟ್ ಅಭಯಾರಣ್ಯದ ಬಳಿ ಇರುವ ಲೆಮನ್ ಟ್ರೀ ರೆಸಾರ್ಟ್ಗೆ ಕೋಸಿ ನದಿ ನೀರು ನುಗ್ಗಿದೆ. ಇಲ್ಲಿರುವ 100ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.
ಕರ್ನಾಟಕದಿಂದ ಸಹಾಯವಾಣಿ
ಮಳೆ ಮತ್ತು ಪ್ರವಾಹದಿಂದಾಗಿ ಉತ್ತರಾಖಂಡದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಪ್ರವಾಸಿಗರ ನೆರವಿಗಾಗಿ ರಾಜ್ಯ ಸಕರ್ಕಾರ ಟೋಲ್ ಫ್ರೀ ಸಹಾಯವಾಣಿ ತೆರೆದಿದೆ. 080-1070, 080-22340676ಗೆ ಸಂಪರ್ಕಿಸಬಹುದಾಗಿದೆ.
India News Heavry Rains Continue in Uttarakhand
ಇದನ್ನೂ ಓದಿ: ಉತ್ತರಾಖಂಡದಲ್ಲಿ ಹೆಚ್ಚಿದ ಮಳೆ, ಭಾರಿ ಪ್ರವಾಹ ಸಿಎಂ ಜತೆ ಪ್ರಧಾನಿ ಮೋದಿ ಚರ್ಚೆ
ಇದನ್ನೂ ಓದಿ: Coronavirus: 7 ತಿಂಗಳ ಬಳಿಕ ದೈನಿಕ ಕೊರೊನಾ ಕೇಸ್ನಲ್ಲಿ ಇಳಿಕೆ
Discussion about this post