ತೈಪೆ: ಪ್ರಜಾಪ್ರಭುತ್ವದ ಆಡಳಿತವಿರುವ ತೈವಾನ್ ಮೇಲೆ ಚೀನಾ ದಬ್ಬಾಳಿಕೆ ಮುಂದುವರಿದಿದೆ. ತೈವಾನ್, ತನ್ನ ಭೂಭಾಗ ಎಂದು ಹೇಳುವ ಚೀನಾ, ತನ್ನ ಆಣತಿಯಂತೆಯೇ ಆಡಳಿತ ನಡೆಯಬೇಕು ಎಂದು ಪುಟ್ಟ ದ್ವೀಪ ರಾಷ್ಟ್ರದ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಿದೆ. ವಾರದಿಂದೀಚೆಗೆ ಚೀನಾ ಯುದ್ಧ ವಿಮಾನಗಳು ತೈವಾನ್ ವಾಯುಗಡೆಯಲ್ಲಿ ಬಿಟ್ಟೂಬಿಡದೆ ಸಂಚರಿಸುತ್ತಿವೆ. ಅಣ್ವಸ್ತ್ರ ಸಜ್ಜಿತ ಎಚ್6 ಬಾಂಬರ್ ವಿಮಾನ ಕೂಡ ಹಾರಾಟ ನಡೆಸಿರುವುದು ತೈವಾನ್ನನ್ನು ಚಿಂತೆಗೀಡು ಮಾಡಿದೆ. ಬಲಶಾಲಿ ಚೀನಾ ಮತ್ತು ಸ್ವಾಭಿಮಾನಿ ತೈವಾನ್ ಮಧ್ಯೆ ಶೀತಲ ಸಮರ ತಾರಕಕ್ಕೇರಿದೆ. ಈ ಮಧ್ಯೆ, ಯುದ್ಧ ಸಂಭವಿಸಿದರೆ ತಾನು ತೈವಾನ್ ಪರ ನಿಲ್ಲುವುದಾಗಿ ಅಮೆರಿಕ ಹೇಳಿದೆ.
ಚೀನಾ ಆಗಾಗ್ಗೆ ತೈವಾನ್ ವಾಯು ಪ್ರದೇಶದಲ್ಲಿ ತನ್ನ ಯುದ್ಧ ವಿಮಾನವನ್ನು ನುಗ್ಗಿಸಿ ಬೆದರಿಸುವುದುಂಟು. ಚೀನಾ ತನ್ನ (ಏರ್ ಡಿಫೆನ್ಸ್ ಐಡೆಂಟಿಫಿಕೇಷನ್ ಝೋನ್ (ಎಡಿಐಝೆಡ್ ) ಗಡಿಯನ್ನು ಪದೇ ಪದೆ ಉಲ್ಲಂಘಿಸುತ್ತಿದೆ ಎಂಬುದು ತೈವಾನ್ ಆರೋಪ. ಆದರೆ, ಇದು ತನ್ನ ವಾಯುಗಡಿಯ ವಿಸ್ತೃತ ಪ್ರದೇಶ ಎಂದು ಚೀನಾ ಹೇಳುತ್ತದೆ. ಇದು ಚೀನಾದ “ಗ್ರೇಝೋನ್'” ತಂತ್ರಗಾರಿಕೆ. ತೈವಾನ್ ಮೇಲೆ ಮಾನಸಿಕ ದಬ್ಬಾಳಿಕೆ ಎಂದು ತೈವಾನ್ ಸೇನೆಯ ನಿವೃತ್ತ ಅಡ್ಮಿರಲ್ ಲೀ ಹ್ಸಿ-ಮಿನ್ ಹೇಳಿದ್ದಾರೆ.
2020ರ ಸೆಪ್ಟೆಂಬರ್ನಿಂದೀಚೆಗೆ ಈ ಬೆದರಿಕೆ ಹೆಚ್ಚಳವಾಗಿದೆ. ನಾಲ್ಕು ದಿನ ಹಿಂದೆ ಚೀನಾ ರಾಷ್ಟ್ರೀಯ ದಿನ ಆಚರಿಸಿಕೊಂಡ ಸಂದರ್ಭದಲ್ಲಿ ತೈವಾನ್ ಮೇಲೆ 149 ಸಾರಿ ಯುದ್ಧ ವಿಮಾನಗಳನ್ನು ಹಾರಿಸಿದೆ. ಒಟ್ಟಾರೆ ಈವರ್ಷ ಈವರೆಗೂ 690ಕ್ಕೂ ಹೆಚ್ಚು ಸಾರಿ ಚೀನಾ ವಿಮಾನಗಳು ವಾಯು ಗಡಿ ಉಲ್ಲಂಘನೆ ಮಾಡಿವೆ. ಇದು ಕಳೆದ ವರ್ಷಕ್ಕಿಂತ ದುಪ್ಪಟ್ಟು ( 380 ಸಾರಿ ವಾಯು ಗಡಿ ಉಲ್ಲಂಘನೆ) ಆಗಿದೆ. ಜತೆಗೆ ತೈವಾನ್ ಮತ್ತು ಚೀನಾ ಮಧ್ಯೆ ವಾಗ್ಯುದ್ಧಗಳು ನಡೆಯುತ್ತಲೇ ಇರುತ್ತವೆ. ಇದು ಕೆಲವು ಸಾರಿ ವೈಯಕ್ತಿಕ ಮಟ್ಟಕ್ಕೂ ಇಳಿಯುತ್ತದೆ. ತೈವಾನ್ ವಾಯು ಸಂಚಾರ ನಿಯಂತ್ರಣಾಧಿಕಾರಿಯ ತಾಯಿ ಬಗ್ಗೆ ಚೀನಾ ವಿಮಾನದ ಪೈಲಟ್ ತುಚ್ಛವಾಗಿ ಮಾತನಾಡಿರುವುದು ತೈವಾನ್ ಕೋಪವನ್ನು ಕೆರಳಿಸಿದೆ.
ಬಿಕ್ಕಟ್ಟಿಗೆ ಕಾರಣವೇನು?
ತೈವಾನ್ ಈ ಹಿಂದೆ ತನ್ನ ಭೂಭಾಗ ಆಗಿತ್ತೆಂಬ ಕಾರಣಕ್ಕೆ ಚೀನಾ ಈಗಲೂ ಹಕ್ಕು ಪ್ರತಿಪಾದಿಸುತ್ತದೆ. 1949ರ ನಾಗರಿಕ ಯುದ್ಧದ ನಂತರ ಚೀನಾ ಜತೆಗೆ ಯಾವುದೇ ಸಂಬಂಧವಿಲ್ಲ. ತಮ್ಮದು ಸಾರ್ವಭೌಮ ರಾಷ್ಟ್ರ ಎಂದು ತೈವಾನ್, ಕಮ್ಯುನಿಸ್ಟ್ ಚೀನಾಕ್ಕೆ ಸಡ್ಡು ಹೊಡೆದಿದೆ. ಚೀನಾ ನೆರೆಹೊರೆಯ ದೇಶಗಳ ಗಡಿಯನ್ನು ಅತಿಕ್ರಮಿಸುವುದು ಹೊಸದೇನೂ ಅಲ್ಲ. ಭಾರತ ಲಡಾಖ್ ಕಾರಾಕೋರಂ ಪಾಸ್ನಲ್ಲಿ ಕೆಲವು ಭಾಗವನ್ನು 1962 ಯುದ್ಧದ ವೇಳೆ ಚೀನಾ ಅತಿಕ್ರಮಿಸಿಕೊಂಡು ಆಕ್ಸಾಯ್ ಚೀನ್ ಎಂದು ಕರೆದುಕೊಳ್ಳುತ್ತದೆ. ಸ್ವತಂತ್ರ ದೇಶವಾಗಬೇಕಿದ್ದ ಟಿಬೆಟ್ ಅನ್ನು ತನ್ನ ಹತೋಟಿಯಲ್ಲಿ ಇರಿಸಿಕೊಂಡು ಬೌದ್ಧ ಧರ್ಮಗುರು ದಲೈಲಾಮಾರನ್ನು ಅಲ್ಲಿಂದ ಭಾರತಕ್ಕೆ ಪಲಾಯಾನ ಮಾಡುವಂತೆ ಮಾಡಿ ಏಳು ದಶಕಗಳೇ ಕಳೆದಿವೆ.
ಇನ್ನು ಅರುಣಾಚಲ ಪ್ರದೇಶವನ್ನು ಭಾರತ ಭಾಗವೆಂದು ಚೀನಾ ಮಾನ್ಯ ಮಾಡುವುದಿಲ್ಲ. ಅದು ಟಿಬೆಟ್ನ ದಕ್ಷಿಣ ಭಾಗ ಎಂದು ಹೇಳಿಕೊಳ್ಳುತ್ತದೆ. ಜಮ್ಮು-ಕಾಶ್ಮೀರ ಪಾಕ್ಗೆ ಸೇರಬೇಕು ಎಂಬುದು ಚೀನಾದ ಬಯಕೆ. ಈ ಕಾರಣದಿಂದ ಎರಡು ವರ್ಷ ಹಿಂದೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುವವರು ಅಥವಾ ಅಲ್ಲಿಂದ ತಮ್ಮ ದೇಶಕ್ಕೆ ಬರುವವರಿಗೆ ನೀಡುವ ಪಾಸ್ಪೋಟ್F ಮತ್ತು ವೀಸಾಕ್ಕೆ ಪ್ರತ್ಯೇಕ ಹಾಳೆಯನ್ನು ಚೀನಾ ಬಳಸುತ್ತಿತ್ತು. ಇದನ್ನು ಭಾರತ ಪ್ರಬಲವಾಗಿ ಖಂಡಿಸಿತು.
ಇನ್ನು ಆಯಕಟ್ಟಿನ ಮತ್ತು ಆಗಾಧ ತೈಲ, ನೈಸಗರ್ಗಿಕ ಅನಿಲ ಸಂಪನ್ಮೂಲವಿರುವ ದಕ್ಷಿಣ ಚೀನಾ ಸಮುದ್ರವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ಪಡೆದುಕೊಳ್ಳಬೇಕೆಂದು ಮುನ್ನುಗ್ಗುತ್ತಿರುವ ಚೀನಾ ಅಲ್ಲಿನ ಸಣ್ಣಪುಟ್ಟ ದ್ವೀಪಗಳಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಿದೆ. ಈ ಮೂಲಕ ಜಪಾನ್, ಫಿಲಿಪ್ಪೀನ್ಸ್, ವಿಯೆಟ್ನಾಂ ಇನ್ನಿತರ ದೇಶಗಳ ಜತೆ ಸದಾ ತಗಾದೆ ಮಾಡುತ್ತಿದೆ. ಆದರೆ, ದಕ್ಷಿಣ ಚೀನಾ ಸಮುದ್ರವು ಚೀನಾ ವಶವಾಗಬಾರದು ಎಂದು ಅಮೆರಿಕ ಈ ಭಾಗದ ದೇಶಗಳ ಬೆಂಬಲಕ್ಕೆ ನಿಂತಿದೆ. ಇದರಿಂದ ಚೀನಾ, ಅಮೆರಿಕ ವಿರುದ್ಧ ಕೆಂಗಣ್ಣು ಬೀರಿದೆ.
China Fighter Jets in Taiwan Border
ಇದನ್ನೂ ಓದಿ: Indian Army: ಭಾರತ-ಚೀನಾ 13ನೇ ಸುತ್ತಿನ ಮಿಲಿಟರಿ ಮಾತುಕತೆ ವಿಫಲ
ಇದನ್ನೂ ಓದಿ: Nitin Gadkari: ಚೀನಾ ಬದಲು ಭಾರತದಲ್ಲಿ ಎಲೆಕ್ಟ್ರಿಕ್ ಕಾರು ತಯಾರಿಸಿ: ಟೆಸ್ಲಾಗೆ ನಿತಿನ್ ಗಡ್ಕರಿ ಸೂಚನೆ
Discussion about this post