ಲಖನೌ: ಗಗನಮುಖಿಯಾಗಿರುವ ಖಾದ್ಯ ತೈಲದ ಧಾರಣೆಯನ್ನು ತಗ್ಗಿಸಲು ಕೇಂದ್ರ ಸರ್ಕಾರದ ಸೂಚನೆಯಂತೆ ಅಡುಗೆ ಎಣ್ಣೆಯ ದಾಸ್ತಾನಿನ ಮೇಲೆ ಉತ್ತರ ಪ್ರದೇಶ ಸರ್ಕಾರ ಮಿತಿ ನಿಗದಿ ಮಾಡಿ ಆದೇಶ ಹೊರಡಿಸಿದೆ. ಇಂಥ ಕ್ರಮವನ್ನು ದೇಶದಲ್ಲಿ ಮೊದಲು ಜಾರಿ ಮಾಡಿದ ರಾಜ್ಯ ಇದಾಗಿದೆ.
ಈ ಮಧ್ಯೆ, ದಾಸ್ತಾನು ಮಿತಿಯ ಆದೇಶದ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡಿರುವ ಕ್ರಮ ಕುರಿತಂತೆ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಮಂಗಳವಾರ ಪರಿಶೀಲನಾ ಸಭೆ ನಡೆಸಲಿದೆ. ಇದಕ್ಕೂ ಮೊದಲೇ ಉತ್ತರ ಪ್ರದೇಶ ಸರ್ಕಾರ ಮಿತಿ ನಿಗದಿ ಪಡಿಸಿ ಆದೇಶವನ್ನು ಹೊರಡಿಸಿದೆ.
ಹರಿಯಾಣ, ರಾಜಸ್ಥಾನ, ಗುಜರಾತ್ ಸರ್ಕಾರಗಳು ಖಾದ್ಯ ತೈಲ ಮಿತಿಯ ನಿಗದಿಯನ್ನು ಅಂತಿಮಗೊಳಿಸುತ್ತಿವೆ. ಇನ್ನು 9 ರಾಜ್ಯಗಳು ಈ ಪ್ರಕ್ರಿಯೆಯನ್ನು ಶುರು ಮಾಡುವೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.
ಅಡುಗೆ ಎಣ್ಣೆ ಧಾರಣೆಯನ್ನು ಹತೋಟಿಗೆ ತರಲು ಇವುಗಳ ದಾಸ್ತಾನಿನ ಮೇಲೆ ಮುಂದಿನ ವರ್ಷ ಮಾರ್ಚ್ ವರೆಗೆ ಮಿತಿ ವಿಧಿಸಲು ಕೇಂದ್ರ ಸರ್ಕಾರ ಈ ತಿಂಗಳ ಮೊದಲ ವಾರದಲ್ಲಿ ಆದೇಶಿಸಿತ್ತು. ಬೇಡಿಕೆ ಮತ್ತು ಬಳಕೆಯ ಪ್ರಮಾಣಕ್ಕೆ ಅನುಸಾರ ಈ ಮಿತಿಯ ಪ್ರಮಾಣ ಎಷ್ಟಿರಬೇಕೆಂಬುದನ್ನು ಆಯಾರಾಜ್ಯ ಸರ್ಕಾರಗಳು ನಿರ್ಧರಿಸಲಿವೆ ಎಂದು ಹೇಳಿತ್ತು. ಇಷ್ಟೆಲ್ಲದೆ ವಿದೇಶದಿಂದ ಆಮದಾಗುವ ತೈಲದ ಮೇಲಿನ ಸೀಮಾಸುಂಕ ಮತ್ತು ಸೆಸ್ ಅನ್ನು ಕೇಂದ್ರ ಸರ್ಕಾರ ಕಳೆದ ವಾರ ಇಳಿಕೆ ಮಾಡಿದೆ.
ಅಡುಗೆ ಎಣ್ಣೆಯ ಚಿಲ್ಲರೆ, ಸಗಟು ವ್ಯಾಪಾರಿಗಳು, ಎಣ್ಣೆ ಮಿಲ್ಗಳು, ಡೀಲರ್ಗಳು ಮತ್ತು ರಫ್ತುದಾರರು ಸರಾಸರಿ ಎರಡು ತಿಂಗಳಿಗೆ ಆಗುವಷ್ಟು ತೈಲವನ್ನು ಮಾತ್ರ ಸಂಗ್ರಹಿಸಿ ಇರಿಸಿಕೊಳ್ಳಬಹುದು ಎಂದು ಸಚಿವಾಲಯ ಸ್ಥೂಲವಾಗಿ ಮಿತಿಯ ಪ್ರಮಾಣದ ಬಗ್ಗೆ ಸಲಹೆ ನೀಡಿತ್ತು. ಆದರೆ, ಈ ಬಗ್ಗೆ ರಾಜ್ಯ ಸಕರ್ಕಾರಗಳು ಅಂತಿಮ ನಿಧರ್ಧಾರ ತೆಗೆದುಕೊಳ್ಳಬೇಕು ಎಂದು ಸೂಚಿಸಿತ್ತು. ಕಳೆದ ಒಂದು ವರ್ಷದಲ್ಲಿ ಅಡುಗೆ ಎಣ್ಣೆಗಳ ದರ ಪ್ರತಿ ಲೀಟರ್ಗೆ ಸರಾಸರಿ ಶೇ. 46ರಷ್ಟು ಹೆಚ್ಚಳ ಕಂಡಿದೆ. ಹೀಗಾಗಿ ತೈಲ ದರ ಇಳಿಕೆಯ ಲಾಭ ಗ್ರಾಹಕರಿಗೆ ತಲುಪಬೇಕು ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಿಳಿಸಿತ್ತು.
Uttar Pradesh Restricts Storage of Edible Oil
ಇದನ್ನೂ ಓದಿ: ಖಾದ್ಯತೈಲಗಳ ಬೆಲೆ ಇಳಿಕೆ
ಇದನ್ನೂ ಓದಿ: ಖಾದ್ಯ ತೈಲ ಶೇಖರಣೆಗೆ ಮಿತಿ ವಿಧಿಸಿದ ಕೇಂದ್ರ ಸರ್ಕಾರ
Discussion about this post