ಇಡುಕ್ಕಿ: ಕೇರಳದ ಶತಮಾನಕ್ಕೂ ಹಳೆಯದಾದ ಮುಲ್ಲಪೆರಿಯಾರ್ ಅಣೆಕಟ್ಟೆಯಿಂದ ತಮಿಳುನಾಡು ಸರ್ಕಾರ ಶುಕ್ರವಾರ ಬೆಳಿಗ್ಗೆಯಿಂದ ನೀರು ಬಿಡುಗಡೆ ಮಾಡಿದೆ. ಹೀಗಾಗಿ ಪೆರಿಯಾರ್ ನದಿಯ ಕೆಳಪಾತ್ರದಲ್ಲ್ಲಿ ವಾಸಿಸುತ್ತಿರುವ 3 ಸಾವಿರ ಮಂದಿಯನ್ನು ಮುಂಜಾಗೃತ ಕ್ರಮವಾಗಿ ಸ್ಥಳಾಂತರ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ 7ಕ್ಕೆ ಡ್ಯಾಂನ ಗೇಟ್ಗಳನ್ನು ತೆರೆದ ಕಾರಣ ತಗ್ಗು ಪ್ರದೇಶಕ್ಕೆ ಅಪಾರ ನೀರು ನುಗ್ಗಿ ಅನೇಕ ಮನೆಗಳು ಜಲಾವೃತವಾಗಿವೆ. ಆದರೆ, ಮೊದಲೇ ಜನರನ್ನು ಸ್ಥಳಾಂತರಿಸಿದ್ದ ಕಾರಣ ಅನಾಹುತಗಳು ಸಂಭವಿಸಿಲ್ಲ.
ಕೇರಳದಲ್ಲಿ ಕಳೆದ ಎರಡು ವಾರದಲ್ಲಿ ವ್ಯಾಪಕ ಮಳೆಯಾದ ಕಾರಣ ನದಿ- ಕೊಳ್ಳಗಳು ಭರ್ತಿಯಾಗಿವೆ. ಹೀಗಾಗಿ ಪೆರಿಯಾರ್ ನದಿಯ ಉಪನದಿ, ತೊರೆ-ಹಳ್ಳಗಳ ಬ್ಯಾರೇಜ್ಗಳಿಂದ ಹೆಚ್ಚಿನ ಮಟ್ಟದಲ್ಲಿ ನೀರು ಹೊರಬಿಡಲಾಗಿರುವ ಕಾರಣ ಮುಲ್ಲಪೆರಿಯಾರ್ ಡ್ಯಾಂ ಭರ್ತಿಯಾಗಿದೆ. ಇಲ್ಲಿಂದ ಹರಿಯುತ್ತಿರುವ ನೀರು ಇಡುಕ್ಕಿ ಜಲಾಶಯಕ್ಕೆ ಎರಡು ತಾಸಿನಲ್ಲಿ ತಲುಪಲಿದ್ದು, ಅದು ಭರ್ತಿಯಾದರೆ ಅಲ್ಲಿಂದಲೂ ನೀರು ಬಿಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮುಲ್ಲಪೆರಿಯಾರ್ ಡ್ಯಾಂನಲ್ಲಿ 12.75 ಟಿಎಂಸಿ (ಸಾವಿರ ದಶಲಕ್ಷ ಕ್ಯೂಬಿಕ್ ಅಡಿ) ನೀರು ಸಂಗ್ರಹ ಮಾಡಬಹುದಾಗಿದೆ. ಆದರೆ, ಇಡುಕ್ಕಿ ಜಲಾಶಯದಲ್ಲಿ 70.5 ಟಿಎಂಸಿ ನೀರು ಹಿಡಿದಿಡಬಹುದಾಗಿರುವ ಕಾರಣ ಜನರು ಪ್ರವಾಹ ಉಂಟಾಗುತ್ತದೆ ಎಂದು ಭಯಭಿತರಾಗಬೇಕಿಲ್ಲ ಎಂದು ಕೇರಳದ ಜನಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ಹೇಳಿದ್ದಾರೆ.
1895ರಲ್ಲಿ ನಿರ್ಮಿಸಲಾದ ಮುಲ್ಲಪೆರಿಯಾರ್ ಡ್ಯಾಂ ಆಗ ಮದ್ರಾಸ್ ಪ್ರೆಸಿಡೆನ್ಸಿ ವ್ಯಾಪ್ತಿಗೆ ಬರುತ್ತಿತ್ತು. ಹೀಗಾಗಿ ತಮಿಳುನಾಡು ಇದರ ನಿರ್ವಹಣೆ ಮಾಡುತ್ತಿತ್ತು ದೇಶ ಸ್ವಾತಂತ್ರ್ಯವಾದ ಮೇಲೆ ಭಾಷಾವಾರು ಪ್ರಾಂತ್ಯ ರಚನೆಯಾದಾಗ ಈ ಡ್ಯಾಂ ಕೇರಳದ ಇಡುಕ್ಕಿ ಜಿಲ್ಲೆಗೆ ಸೇರಿತು. ಆದರೆ, ಈ ಡ್ಯಾಂನನ್ನು ಈಗಲೂ ತಮಿಳುನಾಡು ಸಕರ್ಕಾರ ನಿರ್ವಹಣೆ ಮಾಡುತ್ತಿದೆ. ಇಲ್ಲಿ ಜಲವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.
ಮುಲ್ಲಪೆರಿಯಾರ್ ಡ್ಯಾಂನ ನಿರ್ವಹಣಾ ಸಮಿತಿ ಸಲಹೆಯಂತೆ (139.5 ಅಡಿ) ನೀರಿನ ಮಟ್ಟ ಕಾಯ್ಡುಕೊಳ್ಳಬೇಕು ಎಂದು ಕೇರಳ ಮತ್ತು ತಮಿಳುನಾಡು ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಗುರುವಾರ ಸೂಚಿಸಿತ್ತು. ಕೇರಳದಲ್ಲಿ ಅಕ್ಟೋಬರ್ ಎರಡು ಮತ್ತು ಮೂರನೇ ವಾರ ಸುರಿದ ಭಾರಿ ಮಳೆಯಿಂದ 42 ಮಂದಿ ಸಾವನ್ನಪ್ಪಿದ್ದಾರೆ.
Mullaperiyar dam Water Released Kerala Idukki District on high alert
ಇದನ್ನೂ ಓದಿ: ಕೇರಳದಲ್ಲಿ ಮಳೆಯಿಂದ ಭೂಕುಸಿತ, ಪ್ರವಾಹಕ್ಕೆ 27 ಮಂದಿ ಸಾವು
Discussion about this post