ಲೇಹ್: ದುರ್ಬಲವಾಗುತ್ತಿರುವ ಪರಿಸರವನ್ನು ಸಬಲವಾಗಿಸುವ ಧ್ಯೇಯದೊಂದಿಗೆ ಜೀವವೈವಿಧ್ಯವನ್ನು ಸಂರಕ್ಷಿಸಲು ಮುಂದಾಗಿರುವ ಕೇಂದ್ರಾಡಳಿತ ಪ್ರದೇಶ ಲಡಾಖ್ನಲ್ಲಿ ಮೂರು ದಿನಗಳ ಪಕ್ಷಿ ಉತ್ಸವ ಶುಕ್ರವಾರ ವಿಧ್ಯುಕ್ತವಾಗಿ ಆರಂಭವಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಖೇಚರಗಳ ಉತ್ಸವವನ್ನು ಲಡಾಖ್ ವನ್ಯಜಿವಿ ಸಂರಕ್ಷಣಾ ಇಲಾಖೆ ಮತ್ತು ಸೆಕ್ಯೂರ್ ಹಿಮಾಲಯ ಯೋಜನೆ ಆಶ್ರಯದಲ್ಲಿ ಆಯೋಜಿಸಲಾಗಿದೆ.
ಪಕ್ಷಿ ಸಂಕುಲವನ್ನು ಭಾರತೀಯ ಭಾಗವಾಗಿ ಸಂರಕ್ಷಿಸುವಂತಹ ಕಾರ್ಯ ದೇಶದಲ್ಲಿ ಆಗಬೇಕು. ಈ ಉತ್ಸವ ಮೂಲಕ ಲಡಾಖ್ನ ಜೀವ ವೈವಿಧ್ಯವನ್ನು ಜಗತ್ತಿಗೆ ಎತ್ತಿ ತೋರಬೇಕು ಎಂದು ಪಕ್ಷಿ ಉತ್ಸವಕ್ಕೆ ಚಾಲನೆ ನೀಡಿದ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯನಿರ್ವಾಹಕ ಕೌನ್ಸಿಲರ್ ತಾಶಿ ಗ್ಯಾಲ್ಸನ್ ಹೇಳಿದರು.
ಲಡಾಖ್ನಲ್ಲಿ ಇದೇ ಮೊದಲ ಬಾರಿಗೆ ಪಕ್ಷಿ ಉತ್ಸವ ನಡೆಯುತ್ತಿರುವುದು ಸಂತಸದ ಸಂಗತಿ. ಹಿಮಾಲಯ ಶ್ರೇಣಿಯ ಗಿರಿಕಂದರಗಳು ಈ ಸುಂದರ ಭೂಮಿಯಲ್ಲಿ 350 ಪ್ರಭೇದದ ಪಕ್ಷಿಗಳಿವೆ ಎಂದು ಅಂದಾಜಿಸಲಾಗಿದೆ. ಲಡಾಖ್ ವಲಸೆ ಹಕ್ಕಿಗಳಿಗೆ ಭಾರತದ ಹೆಬ್ಬಾಗಿಲಾಗಿರುವುದರಿಂದ ಹಕ್ಕಿಗಳು ಮತ್ತು ಹಕ್ಕಿ ಪ್ರೇಮಿಗಳ ಸ್ವರ್ಗವಾಗಿದೆ ಎಂದು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪವನ್ ಕೊತ್ವಾಲ್ ನುಡಿದರು.
ಮನುಷ್ಯರಿಗೆ ಗಡಿಯ ಮಿತಿ ಇದೆ. ಪಕ್ಷಿಗಳಿಗೆ ಇಡಿ ಆಕಾಶವೇ ಗಡಿ. ಮಾನವವನ ವಿಕೃತಿಗಳಿಂದ ಅಪಾಯದಲ್ಲಿರುವ ಪಕ್ಷಿಗಳನ್ನು ಸಂರಕ್ಷಿಸುವ ಹೊಣೆಯೂ ಮನುಷ್ಯನ ಮೇಲೆ ಇದೆ. ಬದುಕು ಮತ್ತು ಬದುಕಲು ಬಿಡು ಎಂಬ ತತ್ವವ ಎಲ್ಲ ಕಾಲದಲ್ಲೂ ಮಾನ್ಯ. ಲಡಾಖ್ನ ಜನರು ಪ್ರಕೃತಿ ಪ್ರಿಯರು ಹೀಗಾಗಿ ಇಲ್ಲಿನ ಜನ ಪಕ್ಷಿಗಳನ್ನು ಬೇಟೆಯಾಡುವುದಿಲ್ಲ. ಈ ಉತ್ಸವದಲ್ಲಿ ಪ್ರತಿಯೊಂದು ಪಕ್ಷಿಯ ಚಲನವಲನ ದಾಖಲಿಸುವಂತಹ ಕಾರ್ಯ ಆಗಬೇಕು ಎಂದು ಆಶಿಸಿದರು.
ಲಡಾಖ್ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೂರು ದಿನ ನಡೆಯುವ ಈ ಪಕ್ಷಿ ಉತ್ಸವದ ಭಾಗವಾಗಿ ಪಕ್ಷಿಗಳ ಫೋಟೋ ಪ್ರದರ್ಶನ, ‘ತಾಶಿ ದಿ ಎಕ್ಸ್ಪ್ಲೋರ್’ ಅನಿಮೇಟೆಡ್ ಚಿತ್ರದ ಪ್ರದರ್ಶನ ಆಯೋಜಿಸಲಾಗಿದೆ.
Bird Festival in Ladakh
ಇದನ್ನೂ ಓದಿ: ಪ್ರವಾಸಿಗರು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು
ಇದನ್ನೂ ಓದಿ: ಪ್ರವಾಸೋದ್ಯಮ ಉತ್ತೇಜನ ಜತೆಗೆ ಪರಿಸರ ಜಾಗೃತಿಗೆ ಬೈಕ್ ರ್ಯಾಲಿ ಸಹಕಾರಿ

























Discussion about this post