ಚಂಡೀಗಡ: ಚರಣ್ಜಿತ್ ಸಿಂಗ್ ಚನ್ನಿ ಪಂಜಾಬ್ ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ನಿಕಟಪೂರ್ವ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ತೊರೆದು ಹೊಸ ಪಕ್ಷ ಘೋಷಿಸಿರುವ ಕ್ಯಾಪ್ಟನ್, ಈ ಪ್ರಯತ್ನದಲ್ಲಿ ಯಶಸ್ವಿಯಾಗಲಾರರು. ರೈತರಿಗೆ ಅವರು ನೀಡುತ್ತಿರುವ ಆಶ್ವಾಸನೆಗಳು ಈಡೇರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ವಾರ ಹೊಸ ಪಕ್ಷ ಘೋಷಿಸುವುದಾಗಿ ಹೇಳಿರುವ ಕ್ಯಾಪ್ಟನ್, ನಾಲ್ಕೈದು ತಿಂಗಳಲ್ಲಿ ಎದುರಾಗಲಿರುವ ಚುನಾವಣೆಯಲ್ಲಿ ಗೆಲ್ಲುವ ಉಮೇದು ಇರಿಸಿಕೊಂಡಿದ್ದಾರೆ. ಈ ನಿಮಿತ್ತ ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿಯಾಗುತ್ತಿದ್ದಾರೆ. ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ರೈತರ ಆಶಯದಂತೆ ಕೇಂದ್ರ ಸರ್ಕಾರ ಪರಿಹರಿಸಿದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಲು ಮುಕ್ತವಾಗಿರುವುದಾಗಿಯೂ ಕ್ಯಾಪ್ಟನ್ ಈ ಹಿಂದೆ ಹೇಳಿದ್ದರು.
ಚನ್ನಿ ಅವರ ಈ ಟೀಕೆಗೆ ಕ್ಯಾಪ್ಟನ್ ಅವರ ವಕ್ತಾರ ರವೀನ್ ತುಕ್ರಾಲ್ ಪ್ರತಿಕ್ರಿಯಿಸಿದ್ದು, ಸಿಎಂ ರೈತರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ರೈತರ ಬಗ್ಗೆ ತಾವಷ್ಟೆ ಕಳಕಳಿ ಹೊಂದಿರುವುದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಹಿಂದಿನ ಸಿಎಂ ರೈತರೊಂದಿಗೆ ಮಾತುಕತೆಯೇ ನಡೆಸಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರದ ಮೂರು ಕೃಷಿ ಕಾನೂನಿಗೆ ಪರ್ಯಾಯವಾಗಿ ಕೃಷಿ ತಿದ್ದುಪಡಿಯನ್ನು ಕ್ಯಾಪ್ಟನ್ ನೇತೃತ್ವದ ಸರ್ಕಾರ ಅಧಿವೇಶನದಲ್ಲಿ ಅಂಗೀಕರಿಸಿದೆ. ಆದರೆ, ಇದಕ್ಕೆ ರಾಜ್ಯಪಾಲರು ತಡೆಹಾಕಿದ್ದಾರೆ. ಹೀಗಾಗಿ ಚನ್ನಿ ಅವರು ರೈತರನ್ನು ದಾರಿತಪ್ಪಿಸಬಾರದು ಎಂದು ತುಕ್ರಾಲ್ ಆಗ್ರಹಿಸಿದ್ದಾರೆ.
ಪಂಜಾಬ್ನಲ್ಲಿ ಕ್ಯಾಪ್ಟನ್ ಮತ್ತು ನವಜೋತ್ ಸಿಂಗ್ ಸಿಧು ಅವರ ಶೀತಲ ಸಮರ ತಾರಕಕ್ಕೇರಿದ ಕಾರಣ ಸಿಧು ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಿಸಿತ್ತು. ಈ ನೇಮಕಾತಿ ನಡೆದ ತಿಂಗಳೊಪತ್ತಿಗೆ ಕ್ಯಾಪ್ಟನ್ ಸಿಡಿದೆದ್ದರು. ನಾಲ್ಕು ದಶಕಗಳಿಂದ ಪಕ್ಷದ ನಿಷ್ಠ ರಾಜಕಾರಣ ಮಾಡುತ್ತಿರುವ ತಮಗೆ ಪದೇ ಪದೆ ಅವಮಾನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸೆಪ್ಟೆಂಬರ್ನಲ್ಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದರು.
ನಂತರ ದಲಿತ ಮುಖಂಡರಾದ ಮತ್ತು ಕ್ಯಾಪ್ಟನ್ ಸಂಪುಟದಲ್ಲಿದ್ದ ಚರಣಜಿತ್ ಸಿಂಗ್ ಚನ್ನಿ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಈ ಮಧ್ಯೆ, ಅಕ್ಟೋಬರ್ ಮೊದಲ ವಾರ ದೆಹಲಿಗೆ ಭೇಟಿ ನೀಡಿದ್ದ ಕ್ಯಾಪ್ಟನ್, ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು.
ಪಂಜಾಬ್ಗೆ ಮರಳಿದ ನಂತರ ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ. ಏತನ್ಮಧ್ಯೆ, ತಮ್ಮ ಬೆಂಬಲಿಗರನ್ನು ಹೊಸ ಸರ್ಕಾರದಲ್ಲಿ ಕಡೆಗಣಿಸಲಾಗಿದೆ ಎಂದು ಸಿಧು ಕೂಡ ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಚುನಾವಣೆ ಹೊಸ್ತಿಲಲ್ಲಿರುವ ಪಂಜಾಬ್ನಲ್ಲಿ ಕಾಂಗ್ರೆಸ್ ಸ್ಥಿತಿ ಅಯೋಮಯವಾಗಿದೆ.
Punjab Charanjit Channi on Former CM Amarjit Singh
ಇದನ್ನೂ ಓದಿ: Viral Video: ಪ್ರಶ್ನಿಸಿದ ಯುವಕನನ್ನು ಥಳಿಸಿದ ಪಂಜಾಬ್ನ ಶಾಸಕ
ಇದನ್ನೂ ಓದಿ: ದೇಶದಲ್ಲೆಲ್ಲೂ ವಿದ್ಯುತ್ಗೆ ಬರವಿಲ್ಲ, ಎಲ್ಲಾದರೂ ಇದ್ದರೆ ಅದು ಆಯಾ ರಾಜ್ಯಗಳ ಇತಿ-ಮಿತಿಗಳಿಂದಾಗಿರಬಹುದು: ಇಂಧನ ಸಚಿವ ಆರ್ಕೆ ಸಿಂಗ್
Discussion about this post