ಹೈದರಾಬಾದ್: ಬಿಜೆಪಿ ಪಕ್ಷಕ್ಕೆ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಸಿ ಎಂದು ಹೇಳುವ ಯಾವ ನೈತಿಕ ಹಕ್ಕೂ ಇಲ್ಲ. ತೆರಿಗೆ ಹೆಚ್ಚಿಸುವವರು ನಿಜಕ್ಕೂ ಫೂಲ್ಗಳು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೊದಲು ಕೇಂದ್ರ ಸರ್ಕಾರ ಪೆಟ್ರೋಲ್ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಸಾಮಾನ್ಯ ಜನರ ಮೇಲಿರುವ ಹೊರೆ ಕಡಿಮೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಕೆಎಸ್ಆರ್ ಸರ್ಕಾರ, ಈ ಸಾಲಿನ ಭತ್ತದ ಬೆಳೆಗೆ ರೈತರಿಗೆ ಯಾವುದೇ ರೀತಿ ಪ್ರೋತ್ಸಾಹ ನೀಡುತ್ತಿಲ್ಲ ಎಂದು ಆರೋಪಿಸಿ, ಪ್ರತಿಭಟನೆಗೆ ಸಜ್ಜುಗೊಳ್ಳುತ್ತಿರುವ ರಾಜ್ಯ ಬಿಜೆಪಿ ನಾಯಕರನ್ನು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು. ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಿ ಬೆಳೆಯುತ್ತಿರುವ ಭತ್ತವನ್ನು ಕೊಂಡು ಸಂಗ್ರಹಿಸುವ ಯಾವುದೇ ತಾಕತ್ತು ಇಲ್ಲ. ಆದರೆ, ಅವರದೇ ಪಕ್ಷದ ರಾಜ್ಯ ಬಿಜೆಪಿ ನಾಯಕರು ಭತ್ತದ ವಿಚಾರದಲ್ಲಿ ತಲೆತೂರಿಸುತ್ತಾರೆ ಎಂದು ಗುಡುಗಿದರು.
ತೆಲಂಗಾಣದಲ್ಲಿ ಬೆಳೆದ ಭತ್ತವನ್ನು ಕೇಂದ್ರ ಸರ್ಕಾರವೇ ಸಂಗ್ರಹ ಮಾಡುತ್ತಿದೆ. ಹೀಗಿರುವಾಗ ರಾಜ್ಯದ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಬೆಲೆ ಈಗಲೂ ಕಡಿಮೆಯೇ ಇದೆ. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತೆರಿಗೆ ಹೆಸರಲ್ಲಿ ತೈಲ ಬೆಲೆ ಏರುಪೇರು ಮಾಡಿ, ಸಾಮಾನ್ಯ ಜನರನ್ನು ಸುಲಿಗೆ ಮಾಡುತ್ತಿದೆ ಎಂದರು.
ನಮ್ಮ ಆಡಳಿತರೂಢ ಪಕ್ಷ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಅನ್ನು ಹೆಚ್ಚಿಸಿಲ್ಲ. ಹೀಗಾಗಿ, ರಾಜ್ಯದಲ್ಲಿ ತೈಲ ಬೆಲೆ ಮೇಲಿನ ತೆರಿಗೆ ಇಳಿಸುವ ಪ್ರಮೇಯವೇ ಇಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಕಳೆದ ಐದು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಏರಿಳಿತ
Discussion about this post