ಲಖನೌ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಪ್ರದೇಶದಲ್ಲಿ ದೊರಕಿರುವ ಗುಂಡುಗಳಲ್ಲಿ ಪ್ರಕರಣದ ಪ್ರಮುಖ ಆರೋಪಿಯಾದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾರ ಗನ್ನಿಂದ ಹಾರಿದ ಗುಂಡುಗಳೂ ಇವೆ ಎಂದು ವಿಧಿವಿಜ್ಞಾನ ಪ್ರಯೋಗಾಲದ (ಎಫ್ಎಸ್ಎಲ್) ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಮೂಲಗಳು ಹೇಳಿವೆ.
ಆರೋಪಿಗಳಾದ ಆಶಿಶ್ ಅವರ ರೈಫಲ್, ಅಂಕಿತ್ ದಾಸ್ ಬಳಿ ಇದ್ದ ಪಿಸ್ತೂಲ್, ದಾಸ್ ಅಂಗರಕ್ಷಕ ಹೊಂದಿದ್ದ ರಿಪೀಟರ್ ಗನ್ ಸೇರಿ ನಾಲ್ಕು ಶಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಘಟನಾ ಸ್ಥಳದಲ್ಲಿ ಸಂಗ್ರಹಿಸಿದ ಗುಂಡುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈ ಪ್ರಕರಣದಲ್ಲಿ ಆಶಿಶ್ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. 15ರಿಂದ 20 ಅಪರಿಚಿತರ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ತಮ್ಮ ತವರು ಜಿಲ್ಲೆಯಾದ ಲಖಿಂಪುರ ಖೇರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಕೇಂದ್ರ ಸಚಿವ ಅಜಯ್ ಮಿಶ್ರಾ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಜತೆ ಅಕ್ಟೋಬರ್ 3ರಂದು ಹೋಗುತ್ತಿದ್ದಾಗ ತಿಕುನಿಯಾ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸಚಿವರನ್ನು ಅಡ್ಡಗಟ್ಟಿದರು. ಈ ವೇಳೆ ಸಚಿವರ ಹಿಂದೆ ಬರುತ್ತಿದ್ದ ಕಾರಿನಲ್ಲಿದ್ದ ಆಶಿಶ್ ಮಿಶ್ರಾ, ತಮ್ಮ ಎಸ್ಯುವಿ ವಾಹನವನ್ನು ರೈತರ ಮೇಲೆ ಹರಿಸಿದರು ಎನ್ನಲಾಗಿದೆ. ಇದರಿಂದ ನಾಲ್ವರು ರೈತರು ಸಾವನ್ನಪ್ಪಿದರು. ರೊಚ್ಚಿಗೆದ್ದ ರೈತರು ಸಚಿವರ ಬೆಂಬಲಿಗರ ಕಾರಿನ ಮೇಲೆ ದಾಳಿ ಮಾಡಿದರು. ಈ ಹಿಂಸಾಚಾರದಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರು, ಓರ್ವ ಚಾಲಕ ಮತ್ತು ಓರ್ವ ಪತ್ರಕರ್ತ ಸಾವನ್ನಪಿದರು. ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಅಜಯ್ ಮಿಶ್ರಾ, ತಮ್ಮ ಮಗ ಘಟನಾ ಸ್ಥಳದಲ್ಲಿ ಇರಲಿಲ್ಲ. ರೈತರು ಕಾರಿಗೆ ಅಡ್ಡವಾಗಿ ಬಂದ ಕಾರಣ ಅಪಘಾತ ತಪ್ಪಿಸಲು ಪ್ರಯತ್ನಿಸಿದ ವೇಳೆ ಕಾರಿನ ಗಾಲಿಗೆ ಸಿಲುಕಿ ಕೆಲ ರೈತರು ಸಾವನ್ನಪ್ಪಿದ್ದಾರೆ. ಇದು ಅಚಾನಾಕ್ಕಾಗಿ ನಡೆದ ಘಟನೆ ಎಂದು ಹೇಳಿದ್ದರು.
ಇದನ್ನೂ ಓದಿ: ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ಗೆ ಬಿಜೆಪಿ ಎಂಟ್ರಿ; ಡಿಜಿಟಲ್ ಅಸ್ತಿತ್ವ ಬಲಪಡಿಸುವತ್ತ ಹೆಜ್ಜೆ
Discussion about this post